ಟ್ರಯಲ್ ಬ್ಲಾಸ್ಟ್ ನಡೆಸದೇ ಕೆಆರ್ ಎಸ್ ನಿಂದ ಹಿಂತಿರುಗಿದ ಪುಣೆ ತಂಡ
ಮೈಸೂರು, ಜನವರಿ 29: ಕೃಷ್ಣರಾಜ ಸಾಗರ ಜಲಾಶಯದ ಸುತ್ತಮುತ್ತ ಅಂದರೆ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆಗೆ ಎದುರಾಗುವ ಅಪಾಯಗಳ ಕುರಿತು ವರದಿ ನೀಡುವ ಸಲುವಾಗಿ ನಡೆಸಲು ಉದ್ದೇಶಿಸಿದ್ದ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಪ್ರಗತಿಪರರು ನಡೆಸಿದ ಗೋಬ್ಯಾಕ್ ಚಳವಳಿ ಮಾಡಿದ್ದರಿಂದ ಪುಣೆ ತಜ್ಞರ ತಂಡ ವಾಪಸ್ ತೆರಳಿದೆ.
ಪುಣೆಯ ಸಿಡಬ್ಲ್ಯೂಪಿಆರ್ಎಸ್ ವಿಜ್ಞಾನಿಗಳ ತಂಡ ಟ್ರಯಲ್ ಬ್ಲಾಸ್ಟ್ ನಡೆಸಲು ತಯಾರಿ ನಡೆಸಿತ್ತು. ಈ ಸಂದರ್ಭದಲ್ಲಿ ಕಾವೇರಿ ಹಾಗೂ ಕೆ ಆರ್ ಎಸ್ ಉಳಿವಿಗಾಗಿ ಜನಾಂದೋಲನ ಸಮಿತಿಯ ನೇತೃತ್ವದ ರೈತ ಸಂಘ, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಕೆ ಆರ್ ಎಸ್ ಪ್ರವಾಸಿ ಮಂದಿರದ ಬಳಿ ಟ್ರೈಯಲ್ ಬ್ಲಾಸ್ಟ್ ವಿರೋಧಿಸಿ ಪ್ರತಿಭಟನೆ ನಡೆಸಿದರು.
ಪರೀಕ್ಷಾರ್ಥ ಸ್ಫೋಟಕ್ಕೂ ಮುನ್ನ ಆರು ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ ಸಮರ್ಪಕ ಉತ್ತರ ನೀಡಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಪರೀಕ್ಷಾರ್ಥ ಸ್ಫೋಟದ ಮೂಲಕ ವಿಜ್ಞಾನಿಗಳ ವರದಿ ಪಡೆದು ಗಣಿಗಾರಿಕೆಯನ್ನು ಪುನಃ ಆರಂಭಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಕೆಲ ಮುಖಂಡರು ವಿಜ್ಞಾನಿಗಳ ಜೊತೆ ಮಾತುಕತೆ ನಡೆಸಲು ಪೊಲೀಸರು ನೀಡಿದ ಸಲಹೆಗೆ ಒಪ್ಪಿದರು. ಇದಾದ ಕೆಲ ಹೊತ್ತಿನ ಬಳಿಕ ಕೆ ಆರ್ ಎಸ್ ಜಲಾಶಯದ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ಬಸವರಾಜೇಗೌಡ ಆಗಮಿಸಿ, ಮುಖಂಡರ ಸಭೆ ನಡೆಸಿ ವಿಜ್ಞಾನಿಗಳು ಕಾರ್ಯಾಚರಣೆ ನಡೆಸದೇ ಹಿಂತಿರುಗುವ ನಿರ್ಧಾರ ಕೈಗೊಂಡಿದ್ದಾರೆ ಎಂದು ಪ್ರಕಟಿಸಿದರು.
ಇದರಿಂದ ಕಾವೇರಿ ಕೆಆರ್ಎಸ್ ಜನಾಂದೋಲನ ಸಮಿತಿಗೆ ಮೊದಲ ಜಯ ಸಿಕ್ಕಿದಂತಾಗಿದೆ. ಇದೇ ವೇಳೆ ಚಿಂತಕ ಪ ಮಲ್ಲೇಶ್ ಮಾತನಾಡಿ, ಕೆ ಆರ್ ಎಸ್ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಯಿಂದ ಜನಜೀವನ ಹಾಳಾಗಿ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ. ಶಬ್ದ ಮತ್ತು ಧೂಳಿನಿಂದ ಪರಿಸರ ಮಾಲಿನ್ಯ ಉಂಟಾಗಿದೆ ಎಂದರು .
ಸರ್ಕಾರ ಕೃಪಾಪೋಷಿತ ಅಧಿಕಾರದ ವ್ಯವಸ್ಥೆಯಲ್ಲಿ ಪ್ರಾಮಾಣಿಕ ವರದಿ ಕಷ್ಟ ಸಾಧ್ಯ. ಸಿಬಿಐನಂತಹ ತನಿಖಾ ಸಂಸ್ಥೆಗಳೇ ದುರುಪಯೋಗಗೊಳ್ಳುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇಂತಹ ಸಾಮಾನ್ಯ ಜ್ಞಾನ ನಮ್ಮ ಆಳುವವರಿಗೆ ಇಲ್ಲ ಎಂದು ದೂರಿದರು.












Click it and Unblock the Notifications