ದಿಢೀರ್ ಬೆಳವಣಿಗೆಯಲ್ಲಿ ರಾಜೀನಾಮೆ ನೀಡಿದ ಮೈಸೂರು ಜಿಪಂ ಅಧ್ಯಕ್ಷೆ, ಉಪಾಧ್ಯಕ್ಷ!
ಮೈಸೂರು, ಡಿಸೆಂಬರ್ 21: ಮೈಸೂರು ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ನಯೀಮಾ ಸುಲ್ತಾನ್ , ಉಪಾಧ್ಯಕ್ಷರಾಗಿದ್ದ ಬಿ.ಎಂ.ನಟರಾಜ್ ಇಂದು ಶುಕ್ರವಾರ ರಾಜೀನಾಮೆ ನೀಡಿ ಎಲ್ಲರಿಗೂ ಶಾಕ್ ಕೊಟ್ಟಿದ್ದಾರೆ. ದಿಢೀರ್ ಬೆಳವಣಿಗೆಗಳಿಂದ ಇಂದು ಏಕಾಏಕಿ ರಾಜೀನಾಮೆ ನೀಡಿದ್ದು ಕಾರಣವನ್ನು ಸಹ ನೀಡಿಲ್ಲ.
ಆದರೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಒತ್ತಾಯ ಮೇರೆಗೆ ಅಧ್ಯಕ್ಷರು ರಾಜೀನಾಮೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದ್ದು, ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ದಿಢೀರ್ ರಾಜಕೀಯ ಬದಲಾವಣೆ ಉಂಟಾಗಿದೆ.
ನನ್ನ ಸ್ವ ಇಚ್ಛೆಯಿಂದ ಅಧ್ಯಕ್ಷರ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದು, ಅವರೊಂದಿಗೆ ನನ್ನ ರಾಜೀನಾಮೆಯನ್ನು ಅಂಗೀಕರಿಸಲು ಕೋರುತ್ತೇನೆ ಎಂದು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.

ರಾಜೀನಾಮೆ ನೀಡುವ ಸಂದರ್ಭದಲ್ಲಿ ಜಿಲ್ಲಾಪಂಚಾಯತ್ ಸದಸ್ಯ ಬೀರಿಹುಂಡಿ ಬಸವಣ್ಣ ಮತ್ತು ನಯೀಮಾ ಪುತ್ರ ರೆಹಮಾನ್ ರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಜಿಪಂ ಸದಸ್ಯರ ನಡವಳಿಕೆ ಗೊಂದಲದ ಗೂಡಾಗಿದ್ದು, ಅತ್ತ ಸಾಮಾನ್ಯ ಸಭೆಗಾಗಿ ಕಾಂಗ್ರೆಸ್ ಸದಸ್ಯರು ಕಾದು ಕುಳಿತಿದ್ದರು.
ಮೈಸೂರು ಜಿಲ್ಲಾ ಪಂಚಾಯತ್ ನಲ್ಲಿ ಜಿಪಂ ಸದಸ್ಯರ ನಡುವೆ ಶೀತಲ ಸಮರ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ..
ಈ ಕುರಿತು ನಯೀಮಾ ಸುಲ್ತಾನ್ ನಜೀರ್ ಅಹ್ಮದ್ ಅವರ ಪುತ್ರ ರೆಹ್ಮಾನ್ ಮಾತನಾಡಿ, ನನ್ನ ತಾಯಿಗೆ ರಾಜೀನಾಮೆ ನೀಡುವಂತೆ ಸ್ಥಳೀಯ ಪ್ರಭಾವಿ ವ್ಯಕ್ತಿಗಳಿಂದ ಒತ್ತಡವಿತ್ತು. ಅದಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಇನ್ನು ಒತ್ತಡ ಹೆಚ್ಚಿದಲ್ಲಿ ಮುಂದಿನ ದಿನಗಳಲ್ಲಿ ಅವರು ಜಿಲ್ಲಾ ಪಂಚಾಯತ್ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ ಎಂದರು. ಆದರೆ ರಾಜೀನಾಮೆ ವಿಚಾರವನ್ನು ಸ್ಪಷ್ಟಪಡಿಸಬೇಕಿದೆ ಅಷ್ಟೇ.












Click it and Unblock the Notifications