ಮೈಸೂರಿನ ವಿವಿಧ ದೇವಾಲಯದಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜೆ
ಮೈಸೂರು, ಡಿಸೆಂಬರ್ 29 : ಧನುರ್ಮಾಸದ ಶುಕ್ಲ ಪಕ್ಷದ ವೈಕುಂಠ ಏಕಾದಶಿಯು ಎಲ್ಲಾ ಏಕಾದಶಿಗಳಲ್ಲೇ ಶ್ರೇಷ್ಠವಾದುದು. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಶ್ರೀನಿವಾಸ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ಮುಂಜಾನೆಯಿಂದಲೇ ದೇವಾಲಯಗಳಿಗೆ ತೆರಳಿದ ಭಕ್ತರು ದೇವರಿಗೆ ಪೂಜೆ ಸಲ್ಲಿಸಿದರು.
ಪ್ರಮುಖವಾಗಿ ನಗರದ ವಿವಿ ಮೊಹಲ್ಲಾದ ಲಕ್ಷ್ಮಿವೆಂಕಟರಮಣಸ್ವಾಮಿ ದೇವಸ್ಥಾನ, ನಂಜನಗೂಡು ರಸ್ತೆಯಲ್ಲಿರುವ ದತ್ತ ವೆಂಕಟರಮಣಸ್ವಾಮಿ ದೇವಾಲಯ, ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಸ್ಥಾನಗಳು ಸೇರಿದಂತೆ ಬಹುತೇಕ ಕಡೆ ವೈಕುಂಠ ಏಕಾದಶಿ ಆಚರಣೆ ವಿಜೃಂಭಣೆಯಿಂದ ನೆರವೇರಿತು.

ಭಕ್ತರಿಗೆ ಮುಂಜಾನೆಯಿಂದಲೇ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ವೈಕುಂಠ ಏಕಾದಶಿ ಆಚರಣೆ ಸಂಭ್ರಮ ವೆಂಕಟರಮಣಸ್ವಾಮಿ ದೇವಸ್ಥಾನಗಳಲ್ಲಿ ಮಾತ್ರವಲ್ಲದೆ ಇತರೆ ಕಡೆಗಳಲ್ಲೂ ಜೋರಾಗಿತ್ತು. ವಿಜಯನಗರದ ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಎನ್.ಆರ್. ಮೊಹಲ್ಲಾ, ಶ್ರೀರಾಂಪುರ, ಸಯ್ಯಾಜಿರಾವ್ ರಸ್ತೆ, ಕೃಷ್ಣಮೂರ್ತಿಪುರಂ ಶ್ರೀರಾಮಮಂದಿರ ಸೇರಿದಂತೆ ಹಲವು ಕಡೆಗಳಲ್ಲಿ ವೈಕುಂಠ ಏಕಾದಶಿ ಪೂಜಾ ಕಾರ್ಯಗಳು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ-ಭಕ್ತಿಯಿಂದ ನಡೆದವು.

ಒಂಟಿಕೊಪ್ಪಲಿನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಸ್ಥಾನ ಸೇರಿದಂತೆ ಹಲವು ದೇವಾಲಯಗಳಲ್ಲಿ ಹೂವುಗಳಿಂದ ವಿಶೇಷವಾಗಿ ಸ್ವರ್ಗದ ಬಾಗಿಲು ನಿರ್ಮಿಸಲಾಗಿತ್ತು. ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು ಸ್ವರ್ಗದ ಬಾಗಿಲು ಪ್ರವೇಶಿಸಿದರು. ದೇವಸ್ಥಾನಗಳಿಗೆ ಹೆಚ್ಚಿನ ಭಕ್ತರು ಆಗಮಿಸುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.












Click it and Unblock the Notifications