ಕೊಡಗಿನ ದುರಂತವನ್ನು ಕಣ್ಣಾರೆ ಕಂಡವರು ಹೇಳಿದ್ದು ಹೀಗೆ...
ಮೈಸೂರು, ಆಗಸ್ಟ್ 20: ಬೆಳಗಾದರೆ ಅಂಬಾ... ಎನ್ನುತ್ತಿದ್ದ ದನಕರುಗಳು, ಕೊಕ್ಕೋಕ್ಕೋ ಎಂದು ಮುಂಜಾವಿಗೆ ಒದರುತ್ತಿದ್ದ ಕೋಳಿಗಳು, ಜೀವನದೊಂದಿಗೆ ಅವಿನಾಭಾವವಾಗಿದ್ದ ತೋಟ, ಗದ್ದೆಗಳು ಕೊಡಗು ಜಿಲ್ಲೆಯಲ್ಲಿ ಅಪ್ಪಳಿಸಿದ ಪ್ರವಾಹಕ್ಕೆ ಮಣ್ಣಿನ ರಾಶಿ ಹೊದ್ದು ಸಮಾಧಿಯಾಗಿ ಹೋಗಿವೆ.
ಹಾಗೆ ನೋಡಿದರೆ ಪ್ರವಾಹಕ್ಕೆ ನಲುಗಿದ ಕುಟುಂಬಗಳ ಪಾಡು ಬರೆಯಲು ಪದಗಳು ಸಾಲದು. ಆದರೂ ನೊಂದವರು, ನೋಯುತ್ತಿರುವ ಕೆಲ ಮಹಿಳೆಯರ ಒಡಲಾಳದ ವೇದನೆಯನ್ನು ನಿಮ್ಮ ಮುಂದಿಡಲಾಗುತ್ತಿದೆ.
"ಸುಮಾರು ವರ್ಷಗಳಿಂದ ಮಡದಿ, ಮಕ್ಕಳ ಕಷ್ಟ-ಸುಖಗಳ ಜೊತೆಯಲ್ಲಿಯೇ ದನ ಕರುಗಳೊಂದಿಗೂ ಸುಖೀ ಜೀವನ ನಡೆಸುತ್ತಾ ತೋಟ, ಗದ್ದೆ ಕೆಲಸದಲ್ಲಿ ನಿತ್ಯ ನಿರಂತರವಾಗಿ ದುಡಿದು ನೆಮ್ಮದಿಯ ಜೀವನ ನಡೆಸುತ್ತಿರುವಾಗಲೇ ತನಗರಿವಿಲ್ಲದಂತ ಘಟನೆ ನನ್ನ ಕಣ್ಣೆದುರು ನಡೆದುಹೋಯಿತು.
ಧಾರಾಕಾರ ಮಳೆ...ಅದರಿಂದ ಆದ ನೋವು ನನ್ನ ಜೀವನದಲ್ಲಿ ಮರೆಯಲಾಗದ ಅನುಭವ. ನಡೆಯಲು ದಾರಿಯಿಲ್ಲ, ಬೆಟ್ಟ ಗುಡ್ಡ ನೋಡ ನೋಡುತ್ತಿದ್ದಂತೆ ಜರುಗುತ್ತಿತ್ತು. ಕೆರೆ ಒಡೆದು ನೀರೆಲ್ಲ ಗದ್ದೆ ತೋಟಕ್ಕೆ ನುಗ್ಗಿತು. 6 ಎಕರೆ ತೋಟ 2 ಎಕರೆ ಗದ್ದೆ ನೀರಿನಲ್ಲಿ ಕೊಚ್ಚಿ ನೆಲಸಮವಾಯಿತು.
ನನಗೆ, ನನ್ನ 2 ಮಕ್ಕಳಿಗೆ ದಿಕ್ಕೇ ತೋಚದಂತಾಯಿತು. ಅಕ್ಕಪಕ್ಕದವರ ಜೊತೆ ಸೇರಿ 5 ಕಿ.ಮೀ. ನಡೆದೇ ಮುಂದೆ ಬಂದೆವು. ನಡೆಯಲು ಆಗುತ್ತಿಲ್ಲ. ಧರೆ ಕುಸಿದ ಪರಿಣಾಮ ದಾರಿಯಿಲ್ಲದೆ ಮಣ್ಣಿನೊಳಗೆ ಕಾಲುಗಳ ಮುಕ್ಕಾಲು ಭಾಗ ಹೋಗುತ್ತಿದ್ದರೂ ಜೀವ ಕೈಯಲ್ಲಿ ಹಿಡಿದು ಮುಂದೆ ನಾನು, ಮಕ್ಕಳು ಕೆಲವು ಮಂದಿ ದಾಟಿ ಬಿಟ್ಟೆವು". ಇದು ಸೋಮವಾರಪೇಟೆ ಹಟ್ಟಿಹೊಳೆ ಪಕ್ಕದ ಗ್ರಾಮ ಹಾಡಗೇರಿ ನಿವಾಸಿ ವಿಶಾಲ ಅವರ ಹೃದಯಸ್ಪರ್ಶಿ ಮಾತುಗಳು. ವಿಶಾಲ ಅವರಂತೆ ಇನ್ನು ಅನೇಕರು ತಮ್ಮ ಅನಿಸಿಕೆಗಳನ್ನು ಒನ್ ಇಂಡಿಯಾದೊಂದಿಗೆ ಹಂಚಿಕೊಂಡದ್ದು ಹೀಗೆ...

ಸುಳಿವು ಇನ್ನೂ ಸಿಕ್ಕಿಲ್ಲ
"ವಿಷಯ ತಿಳಿಯುತ್ತಿದ್ದಂತೆ ರಕ್ಷಣೆಗೆಂದು ಒಂದಷ್ಟು ಮಂದಿ ಧಾವಿಸಿ ಬಂದಿದ್ದರು, ಹೋಗಲು ಅಸಾಧ್ಯವಾಗಿದ್ದರೂ ಜೀವದ ಹಂಗು ತೊರೆದು ಸಿಲುಕಿಕೊಂಡಿರುವ ಮತ್ತಷ್ಟು ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಅವರು ಹೋದರು.
ಆದರೆ ರಕ್ಷಣೆ ಮಾಡಲು ಹೋದ ಜೀವಗಳು ನಾವು ನೋಡ ನೋಡುತ್ತಿದ್ದಂತೆ ಧರೆ ಕುಸಿದು ಅವರ ಮೇಲೆರಗಿ ಮಣ್ಣಿನೊಂದಿಗೆ ನೀರಲ್ಲಿ ಯಾವ ಕಡೆ ಕೊಚ್ಚಿ ಹೋದರು ಎನ್ನುವುದೇ ಗೊತ್ತಾಗಲಿಲ್ಲ. ಇಂದಿಗೂ ಅವರ ಸುಳಿವಾಗಲಿ, ಶವವಾಗಲಿ ಸಿಗಲಿಲ್ಲ.
ಬದುಕಿದೆಯಾ ಬಡ ಜೀವವೇ ಎಂದು ಅಲ್ಲಿಂದ ನಾವು ಗಾಡಿ ಹತ್ತಿ ಪರಿಹಾರ ಕೇಂದ್ರಕ್ಕೆ ಬಂದೆವು. ಉಳಿದವರು ಹೇಗಿದ್ದಾರೆ ಅಂತಾನೂ ಗೊತ್ತಿಲ್ಲ" ಎನ್ನುತ್ತಾರೆ ಹಾಡಗೇರಿ ನಿವಾಸಿ ವಿಶಾಲ.

ಕನಸು, ಮನಸಿನಲ್ಲಿಯೂ ನೆನೆಯದ ಸ್ಥಿತಿಯಿದು
ಕಳೆದ ದಿನದ ಬದುಕಿನ ನೆನಪಿನೊಂದಿಗೆ ದುಃಖದ ಮಡುವಿನಲ್ಲಿ ಸಾಂತ್ವನ ಕೇಂದ್ರದಲ್ಲಿ ದೀರ್ಘ ಮೌನದಲ್ಲಿ ಕುಳಿತಿದ್ದ ತಂಗಮ್ಮನವರನ್ನು ಮಾತನಾಡಿಸಿದಾಗ...
"ದೂರದಲ್ಲಿರುವ ಹೊಳೆ ವರ್ಷಂಪ್ರತೀ ತುಂಬಿ ಹರಿಯುತ್ತಿತ್ತು. ಇದರೊಂದಿಗೆ 2 ಎಕರೆ ಗದ್ದೆ ಮತ್ತು 10 ಎಕರೆ ತೋಟದೊಂದಿಗೆ 6-7 ಮಂದಿ ಕೆಲಸಗಾರರೊಂದಿಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದೆವು. ಆದರೆ ಈಗ ಬಂದಿರುವುದು ಕನಸಿನಲ್ಲಾಗಲಿ, ಮನಸ್ಸಿನಲ್ಲಾಗಲಿ ನೆನೆಯದ ಸ್ಥಿತಿ.
ಕೊಡಗು ಸಂತ್ರಸ್ಥರಿಗೆ 5 ಲಕ್ಷ ನೆರವು ನೀಡಿದ ನಟ ಪ್ರಕಾಶ್ ರೈ

ಆಕಾಶದೆತ್ತರದ ಗುಡ್ಡಗಳು ಕುಸಿದು ಬಿದ್ದವು
"ನಮ್ಮದೊಂದು ಕುಗ್ರಾಮ, ಸುತ್ತ ಮುತ್ತಲು ಬೆಟ್ಟ ಗುಡ್ಡಗಳಿಂದ ಆವೃತವಾಗಿತ್ತು. ಮಂದಗತಿಯಿಂದ ಹರಿಯುತ್ತಿದ್ದ ಹಳ್ಳ ಮಳೆಯ ರೌದ್ರವತಾರಕ್ಕೆ ಸಿಲುಕಿ, ಯಾವ ಪರಿ ರಭಸವಾಗಿ ಹರಿಯಿತೆಂದರೆ ಊರಿನ ಸುಮಾರು 60 ರಿಂದ 70 ಕುಟುಂಬಗಳ ಅಲ್ಪ ಸ್ವಲ್ಪ ಆಸ್ತಿಯೂ ಕೊಚ್ಚಿ ಹೋಯಿತು.
ಹಾಡಹಗಲಿನಲ್ಲೇ ಆಕಾಶದೆತ್ತರದಲ್ಲಿದ್ದ ಬೆಟ್ಟ ಗುಡ್ಡಗಳು ಕುಸಿದು ಊರನ್ನೇ ನೆಲಸಮ ಮಾಡಿತು. ನಮ್ಮೆಲ್ಲರ ಬದುಕನ್ನೇ ಕಸಿದುಕೊಂಡಿತು ಎಂದು ಗರ್ವಾಲೆ ಪಕ್ಕದ ಶಿರಂಗಲ್ಲಿ ಗ್ರಾಮದಿಂದ ಬದುಕುಳಿದು ಬಂದ ಅನಿತಾ ಮಂದಣ್ಣ ನಿಟ್ಟುಸಿರಿನಿಂದ ನುಡಿದರು.

ಮುಂದಿನ ಜೀವನ ಹೇಗೆ?
ಮುಕ್ಕೋಡ್ಲು ಗ್ರಾಮದ ತಡಿಯಪ್ಪನ ಕುಶಾಲಪ್ಪ ಮತ್ತು ಮನೆಯವರು ಭಾರಿ ಮಳೆ ಮತ್ತು ಗುಡ್ಡ ಕುಸಿತದಿಂದ ಮನೆ ಮತ್ತು ಕಾಫಿ ತೋಟವನ್ನು ಕಳೆದುಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿ ಬಂದಿದ್ದನ್ನು ಮರೆಯುವುದಿಲ್ಲ. ಇವರ ಮುಂದಿನ ಜೀವನ ನಿರ್ವಹಣೆಗೆ ಮತ್ತು ಮಕ್ಕಳ ವಿದ್ಯಾಭ್ಯಾಸ ಹೇಗೆ ನಡೆಸುವುದು ಎಂದು ಕಣ್ಣೀರಿಡುತ್ತಾರೆ.












Click it and Unblock the Notifications