ಮುಂದಿನ ಚುನಾವಣೆಗೆ ಸ್ಪರ್ಧೆ; ಗುಟ್ಟು ಬಿಚ್ಚಿಟ್ಟ ಸಿದ್ದರಾಮಯ್ಯ!
ಮೈಸೂರು, ಡಿಸೆಂಬರ್ 18: 2018ರ ಚುನಾವಣೆಯಲ್ಲಿ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲು ಕಂಡಿದ್ದರು. ಬಾದಾಮಿ ಕ್ಷೇತ್ರದ ಶಾಸಕ, ಪ್ರತಿಪಕ್ಷ ನಾಯಕರಾಗಿರುವ ಅವರು ಶುಕ್ರವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಡೆಸುತ್ತಿದ್ದಾರೆ.
ಶುಕ್ರವಾರ ಸಿದ್ದರಾಮಯ್ಯ ಮೈಸೂರು ಪ್ರವಾಸದಲ್ಲಿದ್ದರು. ತಮ್ಮ ನಿವಾಸದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, "ನನಗೆ ಯಾವ ಆಸೆಗಳೂ ಇಲ್ಲ. ನಾನು ಇನ್ನು ಮುಂದಿನ ಚುನಾವಣೆಗೆ ನಿಲ್ಲಬೇಕಾ?, ಇಲ್ಲವಾ? ಎಂಬುದನ್ನು ತೀರ್ಮಾನಿಸಿಲ್ಲ" ಎಂದು ಹೇಳಿದರು.
"ನನ್ನನ್ನು ಯಾರು, ಯಾವ ಕ್ಷೇತ್ರಕ್ಕೂ ಇದುವರೆಗೂ ಆಹ್ವಾನಿಸಿಲ್ಲ. ಚುನಾವಣೆಗೆ ನಿಲ್ಲುವುದರ ಬಗ್ಗೆ ಇನ್ನು ಆರು ತಿಂಗಳಲ್ಲಿ ತೀರ್ಮಾನ ಮಾಡುತ್ತೇನೆ. ಚಾಮುಂಡೇಶ್ವರಿಯಲ್ಲಿ ಸೋತ ಬಳಿಕ ನಾನು ಕ್ಷೇತ್ರಕ್ಕೆ ಹೋಗಿಲ್ಲ ಎಂಬುದು ಸತ್ಯ. ಇವತ್ತು ಆ ಕ್ಷೇತ್ರದ ಮುಖಂಡರ ಸಭೆ ಕರೆದಿದ್ದೇನೆ" ಎಂದರು.

"ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪರ್ಯಾಯ ನಾಯಕತ್ವ ಕೇಳುತ್ತಿರುವುದು ಒಳ್ಳೆಯ ಬೆಳವಣಿಗೆ. ಕೊನೆ ತನಕ ನಾನೇ ಇರಲು ಸಾಧ್ಯವಿಲ್ಲ. ಯಾರಾದರೂ ಒಬ್ಬರು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಬರಬೇಕಲ್ಲವೆ?. ಕ್ಷೇತ್ರದ ಮುಖಂಡರಿಂದ ಪರ್ಯಾಯ ನಾಯಕತ್ವದ ಮಾತು ಕೇಳಿಬಂದಿದೆ" ಎಂದು ಸಿದ್ದರಾಮಯ್ಯ ತಿಳಿಸಿದರು.
ಎಲ್ಲೂ ಹೋಗಲ್ಲ; ಸಿ. ಎಂ. ಇಬ್ರಾಹಿಂ ಜೆಡಿಎಸ್ ನಾಯಕರನ್ನು ಭೇಟಿ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, "ನನ್ನ ಪ್ರಕಾರ ಸಿ. ಎಂ. ಇಬ್ರಾಹಿಂ ಎಲ್ಲಿಗೂ ಹೋಗಲ್ಲ. ಇಬ್ರಾಹಿಂ ಬಗ್ಗೆ ಏನೇನೋ ಕೇಳಿದ್ದೇನೆ. ಆದರೆ, ಎಲ್ಲಿಗೂ ಹೋಗಲ್ಲ. ಅವರು ಕಾಂಗ್ರೆಸ್ನ ರೂಲಿಂಗ್ ಎಂಎಲ್ಸಿ" ಎಂದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ನ ಜಿ. ಟಿ. ದೇವೇಗೌಡ ವಿರುದ್ಧ ಸಿದ್ದರಾಮಯ್ಯ ಸೋಲು ಕಂಡಿದ್ದರು. ಇಂದು ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆಯನ್ನು ಮಾಡುತ್ತಿದ್ದಾರೆ. ಸಭೆಯಲ್ಲಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾಧು, ಧರ್ಮಸೇನಾ, ಮಾಜಿ ಸಂಸದ ಆರ್. ಧ್ರುವನಾರಾಯಣ್ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ.












Click it and Unblock the Notifications