ಮೈಸೂರು ಝೂ ಗೆ 125 ವರ್ಷದ ಸಂಭ್ರಮ
ಮೈಸೂರು, ಆಗಸ್ಟ್ 9: ಮೈಸೂರು ಮೃಗಾಲಯದ 125ನೇ ವರ್ಷದ ಅಂಗವಾಗಿ ಇದೇ ಆಗಸ್ಟ್ 10 ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮೈಸೂರು ಮೃಗಾಲಯದ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನ 3ಗಂಟೆಗೆ ಕಾರ್ಯಕ್ರಮಗಳ ಉದ್ಘಾಟನೆ ನೆರವೇರಿಸಲಿದ್ದು, ಇತ್ತೀಚೆಗೆ ಜನ್ಮ ತಾಳಿದ ಅನೆ ಮರಿಗೆ ನಾಮಕರಣ ಮಾಡಲಿದ್ದಾರೆ ಎಂದರು. ಇದೇ ವೇಳೆ ವನರಂಗಮಂದಿರ ಉದ್ಘಾಟನೆ, ಭಾರತ ದೇಶದ ಕಾರ್ಯನಿರ್ವಾಹಕರ ಸಮ್ಮೇಳನ, ಪಶುವೈದ್ಯರ ಸಮ್ಮೇಳನ, ಸಂರಕ್ಷಣೆಯ ನುಡಿ, ಮೃಗಾಲಯಕ್ಕೆ ಶೈಕ್ಷಣಿಕ ಚಟುವಟಿಕೆಗಳು ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಲು ತೀರಮಾನಿಸಲಾಗಿದೆ ಎಂದರು.
ಗದಗ ಮೃಗಾಲಯವನ್ನು ದತ್ತು ಸ್ವೀಕರಿಸಲಿದೆ:
ಮೈಸೂರು ಮೃಗಾಲಯದಿಂದ ಗದಗ ಮೃಗಾಲಯ ದತ್ತು ಪಡೆಯಲು ನಿರ್ಧಾರಿಸಲಾಗಿದ್ದು, ಗದಗ ಮೃಗಾಲಯಕ್ಕೆ 125 ಲಕ್ಷ ರೂ.ನೀಡಲು ಚಿಂತನೆ ನಡೆಸಲಾಗಿದೆ. ಮೈಸೂರು ಮೃಗಾಲಯಕ್ಕೆ 2015 ,16 ನೇ ಸಾಲಿನಲ್ಲಿ ಪ್ರಾಣಿಗಳ ದತ್ತು ಯೋಜನೆ ಅಡಿ 35 ಲಕ್ಷ ಆದಾಯ ಬರುತ್ತಿದೆ. 2017 ರಿಂದ ಜುಲೈ ವರೆಗೆ 12 ಲಕ್ಷ ಪ್ರಾಣಿ ದತ್ತು ಯೋಜನೆ ಅಡಿ ಗಳಿಕೆ ಈ ಸಾಲಿಗೆ 40 ಲಕ್ಷ ಆದಾಯ ನಿರೀಕ್ಷಿಸಲಾಗಿದೆ.

ಮೃಗಾಲಯಕ್ಕೆ ಆಗಮಿಸುವ ಜನರಿಗಾಗಿ ವಸ್ತು ಪ್ರದರ್ಶನದ ಆವರಣದಲ್ಲಿ ಟ್ಯೂರಿಸ್ಟ್ ಹಬ್ ನಿರ್ಮಿಸಲು ಚಿಂತನೆ ನಡೆಸಲಾಗಿದೆ ಎಂದರು. ಪ್ರಸ್ತುತ ರಾಜ್ಯದ ಅರಣ್ಯ ಪ್ರದೇಶಗಳಲ್ಲಿ 5500ರಿಂದ 6000 ಆನೆಗಳಿದ್ದು ರಾಷ್ಟ್ರದಲ್ಲೇ ಪ್ರಥಮವಾಗಿದೆ.

400ರಿಂದ 410 ಹುಲಿಗಳಿವೆ, ವನ್ಯಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆನಾಶ, ಮಾನವ ಪ್ರಾಣಹಾನಿ, ಸಾಕು ಪ್ರಾಣಿಗಳ ಪ್ರಾಣಹಾನಿ, ಶಾಶ್ವತ ಅಂಗವಿಕಲತೆ, ಗಾಯಗೊಂಡವರಿಗೆ ಹಾಗೂ ಆಸ್ತಿಪಾಸ್ತಿ ನಷ್ಟ ಸಂಬಂಧಿಸಿದಂತೆ ದೇಶದಲ್ಲೇ ಅತಿ ಹೆಚ್ಚು ಮೊತ್ತದ ಪರಿಹಾರ ಧನವನ್ನು ರಾಜ್ಯ ನೀಡುತ್ತಿದೆ. 5 ಲಕ್ಷರೂ.ಗಳ ಪರಿಹಾರ ಧನವನ್ನು ಮಾನವ ಪ್ರಾಣಹಾನಿಗೆ ನೀಡಲಾಗುತ್ತಿದೆ ಎಂದರು. ಇನ್ನು ಪ್ರತಿ ಮಂಗಳವಾರ ಉಚಿತವಾಗಿ ವಿಕಲಚೇತನರನ್ನು ಮೃಗಾಲಯದ ವೀಕ್ಷಣೆಗೆ ಬಿಡಲಾಗುವುದು ಎಂದು ತಿಳಿಸಿದರು.












Click it and Unblock the Notifications