ಹುಣಸೂರು: ಶಿಕ್ಷಕಿಯ ಹಿಗ್ಗಾಮುಗ್ಗಾ ಥಳಿತಕ್ಕೆ ವಿದ್ಯಾರ್ಥಿ ಅಸ್ವಸ್ಥ
ಮೈಸೂರು, ಫಬ್ರವರಿ,16: ಕಸ ಗುಡಿಸಿ ತರಗತಿಯನ್ನು ಸ್ವಚ್ಛಗೊಳಿಸುವ ವಿಚಾರಕ್ಕೆ ಆಕ್ರೋಶಗೊಂಡ ಶಿಕ್ಷಕಿ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಿದ್ದರಿಂದ ತೀವ್ರ ಅಸ್ವಸ್ಥನಾದ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮೈಸೂರಿನ ಹುಣಸೂರು ತಾಲೂಕಿನಲ್ಲಿ ನಡೆದಿದೆ.
ಸೆಂಟ್ ಜೋಸೆಫ್ ಶಾಲೆಯ 9ನೇ ತರಗತಿಯ ನುಮಾನುಲ್ಲಾ ಶರೀಫ್(14) ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿ. ಈತ ವಿ.ಪಿ.ಬೋರೆ ನಿವಾಸಿಯಾದ ಅತಾವುಲ್ಲಾ ಎಂಬುವರ ಪುತ್ರನಾಗಿದ್ದು, ಸೆಂಟ್ ಜೋಸೆಫ್ ಶಾಲೆಯಲ್ಲಿ ಓದುತ್ತಿದ್ದನು.[ಚಾಮರಾಜನಗರ: ಶಿಕ್ಷಕಿ, ಗ್ರಾಮಸ್ಥರ ಜಗಳಕ್ಕೆ ಮಕ್ಕಳು ಬಲಿಪಶು]
ಸೋಮವಾರ ಸಂಜೆ ಶಿಕ್ಷಕರು ಕಸ ತೆಗೆಯುವ ವಿಚಾರವಾಗಿ ವಿದ್ಯಾರ್ಥಿ ನುಮಾನುಲ್ಲಾ ಶರೀಫನಿಗೆ ಬೈದಿದ್ದಾರೆ. ಇದರಿಂದ ವಿದ್ಯಾರ್ಥಿ ನುಮಾನುಲ್ಲಾ ಶರೀಫ್ ಹೊರಹೋಗಿದ್ದಾನೆ. ಆತನ ವರ್ತನೆಯಿಂದ ಆಕ್ರೋಶಗೊಂಡ ಕ್ರೀಡಾ ಶಿಕ್ಷಕಿ ಮತ್ತು ಗುಡ್ಡಪ್ಪ ಅವರು ವಿದ್ಯಾರ್ಥಿಗೆ ಚೆನ್ನಾಗಿ ಥಳಿಸಿದ್ದಾರೆ.
ಇದರಿಂದ ವಿದ್ಯಾರ್ಥಿ ನುಮಾನುಲ್ಲಾ ಶರೀಫ ತೀರಾ ಅಸ್ವಸ್ಥನಾಗಿದ್ದಾನೆ. ಕೂಡಲೇ ವಿದ್ಯಾರ್ಥಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ವಿದ್ಯಾರ್ಥಿ ಪೋಷಕರು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.[ಹಾಸನದ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಶಿಕ್ಷಕ]
ಈಗಾಗಲೇ ವಿದ್ಯಾರ್ಥಿಗಳನ್ನು ಥಳಿಸುವುದು ಕ್ರಿಮಿನಲ್ ಅಪರಾಧವಾಗಿದ್ದು, ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿಕೆ ನೀಡಿದ್ದು ಅವರ ಹೇಳಿಕೆ ಬೆನ್ನಲ್ಲೇ ಈ ಘಟನೆ ನಡೆದಿರುವುದು ಮಾತ್ರ ದುರಂತ.