ವಿಷಪ್ರಸಾದ ಆರೋಪಿ ಮಹದೇವಸ್ವಾಮಿ ಗೂಂಡಾಗಿರಿ ವೀಡಿಯೋ ವೈರಲ್
ಮೈಸೂರು, ಡಿಸೆಂಬರ್ 19 : ವಿಷಪ್ರಸಾದ ಪ್ರಕರಣದಲ್ಲಿ ಮೊದಲು ಹೆಸರು ಥಳಕು ಹಾಕಿಕೊಂಡಿದ್ದು ಸಾಲೂರು ಮಠದ ಕಿರಿಯ ಸ್ವಾಮೀಜಿ ಇಮ್ಮಡಿ ಮಹದೇವಸ್ವಾಮಿಯವರದ್ದು. ಇವರ ಹೆಸರು ಕುಕೃತ್ಯದಲ್ಲಿ ಇದೇ ಮೊದಲೇನಲ್ಲ. ಈ ಹಿಂದೆ ಅವರು ರೌಡಿಸಂ ನಡೆಸಿದ್ದರು ಎನ್ನಲಾಗಿದೆ.
ಮಹದೇವಸ್ವಾಮಿ ವಿರುದ್ಧ ಸಂಗಮೇಶ್ ಎಂಬುವವರು ಆರೋಪಿಸಿದ್ದು, ಸಂಗಮೇಶ್ ಎಂಬುವವರಿಗೆ ಸ್ವಾಮೀಜಿ ಕಳೆದ ಕೆಲವು ದಿನಗಳ ಕೆಳಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾದ ವೀಡಿಯೋವೊಂದು ವೈರಲ್ ಆಗಿದೆ. ಸಂಗಮೇಶ್ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯಗಳು ಮಠದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸರಿಯಾಗಿ ಒಂದು ವರ್ಷದ ಹಿಂದೆ ಮಠದಲ್ಲಿ ಮಹದೇವಸ್ವಾಮಿ ಗುಂಡಾಗಿರಿ ನಡೆಸಿ, ಸಾರ್ವಜನಿಕವಾಗಿ ಹಲ್ಲೆ ಮಾಡಿ ಎಳೆದಾಡಿರುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು ಸಾಕಷ್ಟು ಅನುಮಾನ ಮೂಡಿಸಿದೆ.

ಸಂಗಮೇಶ್ ಎಂಬುವವರು ಸಾಲೂರು ಮಠಕ್ಕೆ ಹಣಕಾಸು ಸಹಾಯ ಮಾಡುತ್ತಿದ್ದರು. ಅಲ್ಲದೇ ಹಿರಿಯ ಸ್ವಾಮೀಜಿಯೊಂದಿಗೆ ಶಿಷ್ಯತ್ವ ಚೆನ್ನಾಗಿತ್ತು ಎಂಬ ಕಾರಣಕ್ಕಾಗಿ ಸಂಗಮೇಶ್ ಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
ಅಲ್ಲದೇ ತಮ್ಮ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ವಿದ್ಯುತ್ ಬೇಲಿ ಹಾಕಿಸಿ ಆನೆಯೊಂದನ್ನು ಸಾಯಿಸಿದ ಹೆಸರಲ್ಲೂ ಇವರ ಹೆಸರು ಕೇಳಿಬಂದಿತ್ತು. ಅಲ್ಲದೇ ಮಾರಮ್ಮನ ದೇಗುಲದ ದುಮ್ಮಪ್ಪ ಸ್ವಾಮೀಜಿ ಎಂಬುವವರ ಸಾವೀಗೂ ಇವರೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ. ಇಮ್ಮಡಿ ಸ್ವಾಮೀಜಿಯವರ ನಡವಳಿಕೆ ವಿಚಾರವಾಗಿ ಭಕ್ತರಲ್ಲೂ ಅಸಮಾಧಾನವಿದೆ ಎನ್ನಲಾಗಿದೆ.
ವಿಷ ಪ್ರಸಾದ ದುರಂತದ ಪ್ರಮುಖ ಆರೋಪಿಗಳಾದ ಟ್ರಸ್ಟ್ ಅಧ್ಯಕ್ಷ ಇಮ್ಮಡಿ ಮಹದೇವಸ್ವಾಮೀಜಿ, ವ್ಯವಸ್ಥಾಪಕ ಮಾದೇಶ್, ಮಾದೇಶನ ಪತ್ನಿ ಅಂಬಿಕಾ, ನಾಗದೇವತೆ ದೇವಾಲಯದ ಅರ್ಚಕ ದೊಡ್ಡಯ್ಯರನ್ನು ಕೊಳ್ಳೆಗಾಲದ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಆರೋಪಿಗಳನ್ನು ಕೋರ್ಟ್ ಗೆ ಹಾಜರುಪಡಿಸಲಿರುವ ಹಿನ್ನೆಲೆಯಲ್ಲಿ ಕೊಳ್ಳೆಗಾಲ ಡಿವೈಎಸ್ ಪಿ ಕಚೇರಿ ಮುಂದೆ ಜನಜಂಗುಳಿ ಕುತೂಹಲದಿಂದ ಕಾಯುತ್ತಿದ್ದು, ನ್ಯಾಯಾಲಯದ ಸುತ್ತಮುತ್ತ ವ್ಯಾಪಕ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.












Click it and Unblock the Notifications