ಇನ್ಮುಂದೆ ಮೈಸೂರು ಪೊಲೀಸ್ ಠಾಣೆಯಲ್ಲಿ ರಿಸೆಪ್ಷನಿಸ್ಟ್ ಗಳು!
ಮೈಸೂರು, ಜನವರಿ 5 : ನಮಸ್ಕಾರ, ಬನ್ನಿ. ಕುಳಿತುಕೊಳ್ಳಿ. ನಿಮ್ಮ ಸಮಸ್ಯೆ ಏನು? -ಹೀಗೆ ನಗರದ ಎಲ್ಲ ಠಾಣೆಗಳಲ್ಲಿ ಪೊಲೀಸರು ಸಾರ್ವಜನಿಕರನ್ನು ಇನ್ನು ಮುಂದೆ ಇದೇ ರೀತಿ ಮಾತನಾಡಿಸಿ, ಗೌರವಯುತವಾಗಿ ನಡೆಸಿಕೊಳ್ಳಲಿದ್ದಾರೆ!
ಠಾಣೆಗಳಲ್ಲಿ ಆರಂಭ ಆಗಲಿರುವ ಸ್ವಾಗತಕಾರರ ವಿಭಾಗವು ಸಾರ್ವಜನಿಕರನ್ನು ನಗುಮೊಗದಿಂದ ಸ್ವಾಗತಿಸಿ, ಸಮಸ್ಯೆ- ನೋವನ್ನು ಆಲಿಸಬೇಕೆಂದು ನಗರ ಪೊಲೀಸ್ ಆಯುಕ್ತರು ಕಟ್ಟುನಿಟ್ಟು ಸೂಚನೆ ನೀಡಿದ್ದಾರೆ. ಆ ಮೂಲಕ ಪೊಲೀಸ್ ಇಲಾಖೆ ಜನಸ್ನೇಹಿಯಾಗಲು ಮುಂದಡಿ ಇಟ್ಟಿದೆ.
ನಗರದಲ್ಲಿನ ಮೊದಲ ಸ್ವಾಗತಕಾರರ ವಿಭಾಗ ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಆರಂಭಗೊಂಡಿದೆ. ಮೊದಲ ಕೇಂದ್ರದ ಪ್ರಥಮ ಸ್ವಾಗತಕಾರರಾಗಿ ಠಾಣೆಯ ಹೆಡ್ ಕಾನ್ ಸ್ಟೇಬಲ್ ಶಿವಕುಮಾರ್ ಗುರುವಾರ ಬೆಳಗ್ಗೆ ಸಾರ್ವಜನಿಕ ಸೇವೆ ಆರಂಭಿಸಿದರು. ಇದೇ ವೇಳೆ ಎಸ್.ಕೆ.ಗೋಪಾಲರಾವ್ ಎಂಬವರು ಅಪಘಾತ ನಡೆದ ಬಗ್ಗೆ ಮಾಹಿತಿ ನೀಡಲು ಠಾಣೆಗೆ ಆಗಮಿಸಿದರು.

ಅವರನ್ನು ನಗುಮೊಗದಿಂದ ಸ್ವಾಗತಿಸಿದ ಶಿವಕುಮಾರ್, ಸಮಸ್ಯೆ ಆಲಿಸಿದರು. ಬಳಿಕ ಅವರನ್ನು ಅಲ್ಲಿಯೇ ಕುಳ್ಳಿರಿಸಿ, ಇನ್ ಸ್ಪೆಕ್ಟರ್ ರವಿ ಅವರಿಗೆ ಮಾಹಿತಿ ನೀಡಿದರು. ಅವರ ಕರೆಯ ನಂತರ ಗೋಪಾಲರಾವ್ ಅವರನ್ನು ರವಿ ಅವರ ಬಳಿಗೆ ತೆರಳುವಂತೆ ವಿನಯದಿಂದಲೇ ಹೇಳಿದರು.
ಕೆಲ ದಿನಗಳ ಹಿಂದೆ ಮೈಸೂರಿಗೆ ಭೇಟಿ ನೀಡಿದ್ದ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾದ ನೀಲಮಣಿ ಎನ್.ರಾಜು, ಪೊಲೀಸರು-ಸಾರ್ವಜನಿಕರ ಸಂಬಂಧ ಗಟ್ಟಿಗೊಳಿಸಲು ವಿನೂತನ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಹೇಳಿದ್ದರು. ಸ್ವಾಗತಕಾರರ (ರಿಸೆಪ್ಷನಿಸ್ಟ್) ವಿಭಾಗದ ಸ್ಥಾಪನೆ ಕೂಡ ಅದರದೇ ಭಾಗ. ಡಿಜಿಪಿ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬಹ್ಮಣ್ಯೇಶ್ವರರಾವ್, ಈ ಯೋಜನೆ ಕಾರ್ಯರೂಪಕ್ಕೆ ತಂದಿದ್ದಾರೆ.

ಸ್ವಾಗತಕಾರರ ವಿಭಾಗಕ್ಕೆ ಅದೇ ಠಾಣೆಯ ಸಿಬ್ಬಂದಿಯನ್ನು ನೇಮಿಸದಿರಲು ಆಯುಕ್ತರು ನಿರ್ಧರಿಸಿದ್ದಾರೆ. ಹೀಗಾಗಿ ಪ್ರತ್ಯೇಕ ಸಿಬ್ಬಂದಿ ನೇಮಕ ನಡೆಯಲಿದೆ. ಠಾಣಾಧಿಕಾರಿ ಅಧೀನ ಸಿಬ್ಬಂದಿಯನ್ನೇ ನೇಮಿಸಿದರೆ ಕೆಲಸ ಪಾರದರ್ಶಕವಾಗಿರುವುದಿಲ್ಲ ಎಂಬುದು ಆಯುಕ್ತರ ಅನಿಸಿಕೆ.












Click it and Unblock the Notifications