ಮೈಸೂರಿನ ಮುಸ್ಲಿಮರಿಂದ ಮನೆಗಳಲ್ಲೇ ರಂಜಾನ್ ಆಚರಣೆ
ಮೈಸೂರು, ಮೇ 25: ಲಾಕ್ ಡೌನ್ ಹಿನ್ನೆಲೆಯಲ್ಲಿ ಮುಸ್ಲಿಮರು ತಮ್ಮ ಪವಿತ್ರ ಹಬ್ಬವಾದ ರಂಜಾನ್ ನ್ನು ವಿಶೇಷ ಪ್ರಾರ್ಥನೆಯೊಂದಿಗೆ ತಮ್ಮ ಮನೆಗಳಲ್ಲಿಯೇ ಆಚರಿಸಿದರು.
ಈದ್ ನಮಾಜ್ ನ್ನು ಪ್ರತಿ ವರ್ಷವೂ ಈದ್ಗಾ ಮೈದಾನದಲ್ಲಿ ಅಥವಾ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯ ಮೂಲಕ ಆಚರಿಸುವ ಸಂಪ್ರದಾಯವಿದ್ದು, ಲಾಕ್ ಡೌನ್ ಇರುವ ಕಾರಣ ಇದಕ್ಕೆ ಅವಕಾಶವಿರಲಿಲ್ಲ. ಈ ಕಾರಣದಿಂದ ಮುಸಲ್ಮಾನ ಸಮುದಾಯದವರು ತಮ್ಮ ಮನೆಗಳಲ್ಲಿ ನಮಾಜ್ ಮಾಡಿದರು.
ಸ್ನೇಹಿತರು, ಬಂಧು ಬಾಂಧವರ ಜೊತೆ ಈದ್ಗಾ ಮೈದಾನದಲ್ಲಿ ಸಂಭ್ರಮದಿಂದ ನಮಾಜ್ ಆಚರಿಸುವ ಮುಸಲ್ಮಾನರಿಗೆ ಈ ಬಾರಿ ಅಂತಹ ಅವಕಾಶ ದೊರೆಯಲಿಲ್ಲ. ಇದರಿಂದ ಸಂಭ್ರಮದ ಕೊರತೆ ಎದ್ದು ಕಾಣುತ್ತಿತ್ತು. ಅದಾಗ್ಯೂ ಮನೆಗಳಲ್ಲಿ ನಮಾಜ್ ಆಚರಿಸಿ ಕುಟುಂಬದವರ ಜತೆ ಸಂತಸ ಹಂಚಿಕೊಂಡರು.

ಈದುಲ್ ಫಿತ್ರ್ ನಮಾಜ್ ಬಳಿಕ ಮುಸಲ್ಮಾನರು ಈದ್ಗಾ ಅಥವಾ ಮಸೀದಿಯಿಂದ ನೇರವಾಗಿ ಖಬರಸ್ತಾನ್ (ಸ್ಮಶಾನ) ಗೆ ಆಗಮಿಸಿ ಮೃತ ಪಟ್ಟಿರುವ ತಮ್ಮ ಬಾಂಧವರ ಸಮಾಧಿ ಬಳಿ ಪ್ರಾರ್ಥನೆ ನಡೆಸುವುದು ವಾಡಿಕೆ. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡಲಿಲ್ಲ.
ಟಿಪ್ಪು ಸರ್ಕಲ್ ಬಳಿಯ ಬಡಾ ಮಕಾನ್ ಸೇರಿದಂತೆ ನಗರದ ಬಹುತೇಕ ಮುಸ್ಲಿಂ ಸ್ಮಶಾನದ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಬಹುತೇಕ ಮುಸಲ್ಮಾನರು ಸ್ಮಶಾನದ ಬಳಿ ಆಗಮಿಸಿ ಪೊಲೀಸರನ್ನು ಕಂಡು ದೂರದಿಂದಲೇ ಸ್ಮಶಾನಕ್ಕೆ ನಮಿಸಿ ಹಿಂತಿರುಗಿದ್ದು ಕಂಡುಬಂತು.
ನಮಾಜ್ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ಪ್ರಾರ್ಥನೆಯಲ್ಲಿ ಮಹಾಮಾರಿ ಕೊರೊನಾ ವೈರಸ್ ಜಗತ್ತಿನಿಂದ ದೂರ ಹೋಗುವಂತೆ ಪ್ರಾರ್ಥಿಸಲಾಯಿತು.












Click it and Unblock the Notifications