ಪುಲ್ವಾಮಾ ದಾಳಿ; ಮೈಸೂರಲ್ಲಿ ಹುತಾತ್ಮ ಯೋಧರ ಸ್ಮರಣೆ
ಮೈಸೂರು, ಫೆಬ್ರವರಿ 14; ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರವರಿ 14ರಂದು ನಡೆದ ಉಗ್ರರ ದಾಳಿಯಲ್ಲಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಈ ದಾಳಿ ನಡೆದು ಇಂದಿಗೆ ಎರಡು ವರ್ಷ ಕಳೆದಿದೆ. ದೇಶದ ಜನರು ಹುತಾತ್ಮರಾಧ ಯೋಧರನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.
ಭಾನುವಾರ ಮೈಸೂರು ನಗರದ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ವೃತ್ತದಲ್ಲಿ ಅಪೂರ್ವ ಸ್ನೇಹ ಬಳಗ ಹಾಗೂ ಪ್ರಜ್ಞಾವಂತ ನಾಗರಿಕ ವೇದಿಕೆ ವತಿಯಿಂದ ದೇಶ ಪ್ರೇಮ ದಿನ ಹಾಗೂ ಪುಲ್ವಾಮಾ ದಾಳಿ ಕರಾಳ ದಿನ ಆಚರಿಸಲಾಯಿತು.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರ ಹಿಡಿದು ಅವರ ತ್ಯಾಗ ಬಲಿದಾನವನ್ನು ಸ್ಮರಿಸಲಾಯಿತು. ಪ್ರೇಮಿಗಳ ದಿನಾಚರಣೆಗೆ ಧಿಕ್ಕಾರ, ವಿಶ್ವ ದೇಶ ಪ್ರೇಮಿಗಳಿಗೆ ಜಯವಾಗಲಿ, ಭಾರತ್ ಮಾತಾಕಿ ಜೈ, ವಂದೇ ಮಾತರಂ, ವೀರ ಯೋಧರು ಅಮರರಾಗಲಿ. ಸೈನಿಕರ ದಿನಾಚರಣೆ ಗೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗಲಾಯಿತು.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ್ ಗೌಡ ಮಾತನಾಡಿ, "ಭಾರತ ದೇಶ ಪುರಾತನವಾದದ್ದು, ಪ್ರೇಮಿಗಳ ದಿನಾಚರಣೆ ನಮ್ಮ ಸಂಸ್ಕೃತಿಯಲ್ಲ. ಪ್ರೀತಿ ಪ್ರೇಮ ಎನ್ನುವುದು ತಂದೆ-ತಾಯಿ, ಗುರು-ಹಿರಿಯರು, ದೇಶದ ಬೆನ್ನಲುಬಾದ ಸೈನಿಕರು ಮತ್ತು ರೈತರ ಮೇಲೆ ಇರಬೇಕು" ಎಂದರು.
ಅಮಿತ್ ಶಾ ನಮನ; ಕೇಂದ್ರ ಗೃಹ ಸಚಿವ ಅಮಿತ್ ಶಾ ಪುಲ್ವಾಮಾ ದಾಳಿಯಲ್ಲಿ ಮೃತಪಟ್ಟ ಸಿಆರ್ಪಿಎಫ್ ಯೋಧರಿಗೆ ನಮನ ಸಲ್ಲಿಸಿದರು. "ಈ ದಾಳಿಯಲ್ಲಿ ಮೃತಪಟ್ಟವರ ತ್ಯಾಗವನ್ನು ಭಾರತದ ಜನರು ಎಂದೂ ಮರೆಯುವುದಿಲ್ಲ" ಎಂದರು.
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರು ತೆರಳುತ್ತಿದ್ದ ಬಸ್ಗೆ ಸ್ಫೋಟಕ ತುಂಬಿದ ಕಾರನ್ನು ಡಿಕ್ಕಿ ಹೊಡೆಸಿ ಆತ್ಮಾಹುತಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು.












Click it and Unblock the Notifications