ಮಾಗಳಿ ರವಿ ಹತ್ಯೆ ಖಂಡಿಸಿ ಸೋಮವಾರ ಮೈಸೂರು ಬಂದ್
ಟಿಪ್ಪು ಸುಲ್ತಾನ್ ಜಯಂತಿಗೆ ಸಂಬಂಧಿಸಿದಂತೆ ಪೊಲೀಸರು ಕರೆದಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ವಾಪಸ್ ಬರುತ್ತಿದ್ದಾಗ ರವಿಯನ್ನು ಹತ್ಯೆ ಮಾಡಲಾಗಿದೆ. ಇದು ಕಳೆದ ಎರಡು ವರ್ಷಗಳಲ್ಲಿ ನಡೆದ 6ನೇ ಹತ್ಯೆಯಾಗಿದೆ ಎಂದು ಪ್ರತಾಪ್ ದೂರಿದ್ದಾರೆ.
ಮೈಸೂರು, ನವೆಂಬರ್ 05 : ಬಿಜೆಪಿ ಕಾರ್ಯಕರ್ತ ಮಾಗಳಿ ರವಿ ಭೀಕರ ಹತ್ಯೆಯನ್ನು ಖಂಡಿಸಿ ಮೈಸೂರಿನ ನಾಲ್ಕು ತಾಲೂಕುಗಳಲ್ಲಿ ಸೋಮವಾರ ಬಂದ್ ಆಚರಿಸಲು ಮೈಸೂರು-ಮಡಿಕೇರಿ ಸಂಸದ ಪ್ರತಾಪ್ ಸಿಂಹ ಕರೆ ನೀಡಿದ್ದಾರೆ.
ಮಾಗಳಿ ರವಿಯ ಹಿಂದೆ ಜಾತಿ ರಾಜಕಾರಣವಿದೆ ಎಂದು ಪ್ರತಾಪ್ ಸಿಂಹ ಶನಿವಾರ ದೂರಿದ್ದು, ಪಿರಿಯಾಪಟ್ಟಣ, ಹುಣಸೂರು, ಹೆಗ್ಗಡೆದೇವನ ಕೋಟೆ ಮತ್ತು ಕೆಆರ್ ನಗರದಲ್ಲಿ ಬಂದ್ ಆಚರಿಸಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದರು.
"ಟಿಪ್ಪು ಸುಲ್ತಾನ್ ಜಯಂತಿಗೆ ಸಂಬಂಧಿಸಿದಂತೆ ಪೊಲೀಸರು ಕರೆದಿದ್ದ ಎರಡು ಧರ್ಮೀಯರ ಶಾಂತಿ ಸಭೆಯಲ್ಲಿ ಭಾಗವಹಿಸಿ ವಾಪಸ್ ಬರುತ್ತಿದ್ದಾಗ ರವಿಯನ್ನು ಹತ್ಯೆ ಮಾಡಲಾಗಿದೆ. ಇದು ಕಳೆದ ಎರಡು ವರ್ಷಗಳಲ್ಲಿ ನಡೆದ 6ನೇ ಹತ್ಯೆಯಾಗಿದ್ದು, ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗೆ ಕನ್ನಡಿ ಹಿಡಿದಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. [ಬಿಜೆಪಿ ಕಾರ್ಯಕರ್ತ ಮಾಗಳಿ ರವಿ ಅನುಮಾನಾಸ್ಪದ ಸಾವು]

ಈ ವಿಷಯದಲ್ಲಿ ಕಾಂಗ್ರೆಸ್ ಸರಕಾರ ಅನಗತ್ಯವಾಗಿ ರಾಜಕೀಯದಾಟ ಆಡದೆ, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ರವಿ ಕುಟುಂಬದವರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಪ್ರತಾಪ್ ಸಿಂಹ ಆಗ್ರಹಿಸಿದರು.
ಸಿದ್ದರಾಮಯ್ಯನನ್ನು ದೂರಿದ ಯಡಿಯೂರಪ್ಪ
ಮಾಗಳಿ ರವಿಯ ಸಾವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೇರ ಹೊಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೂರಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಸರಕಾರದ ಅಧಿಕಾರಾವಧಿಯಲ್ಲಿ 14ಕ್ಕೂ ಹೆಚ್ಚು ಹಿಂದೂ ಹೋರಾಟಗಾರರು ಮತ್ತು ಆರೆಸ್ಸೆಸ್ ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ ಎಂದು ಅವರು ಕಿಡಿಕಾರಿದರು.
ಟಿಪ್ಪು ಜಯಂತಿ ಹೆಸರಿನಲ್ಲಿ ವೋಟ್ ಬ್ಯಾಂಕ್ ಪಾಲಿಟಿಕ್ಸ್ ಮಾಡುವುದನ್ನು ಸಿದ್ದರಾಮಯ್ಯ ಸರಕಾರ ಬಿಡಬೇಕು ಮತ್ತು ಕರ್ನಾಟಕದಲ್ಲಿ ಹದಗೆಟ್ಟಿರುವ ಕಾನೂನು ಮತ್ತು ಸುವ್ಯವಸ್ಥೆಯನ್ನು ಸರಿದಾರಿಗೆ ತರಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಯಡಿಯೂರಪ್ಪನವರು ಆಗ್ರಹಿಸಿದರು. [ಹಿಂದೂ ಸಂಘಟನೆ ಸದಸ್ಯರು ಎಷ್ಟೊಂದು ಮಂದಿ ಸತ್ತರು?]












Click it and Unblock the Notifications