ಕಲಾವಿದರನ್ನು ಪ್ರಶ್ನಿಸುವ ಹಕ್ಕು ಪತ್ರಕರ್ತರಿಗಿದೆ: ಪ್ರಕಾಶ್ ರೈ
ಮೈಸೂರು, ಅಕ್ಟೋಬರ್. 5: ಕಲಾವಿದರು ಬೇಜವಬ್ದಾರಿಯಿಂದ ವರ್ತಿಸುವುದನ್ನು ಮೊದಲು ಬಿಡಬೇಕು. ಕಲಾವಿದ ಜನರಿಂದ ಬೆಳೆದಿರುತ್ತಾನೆ. ಹೀಗಾಗಿ ಜವಾಬ್ದಾರಿಯಿಂದ ಇರಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಲಾವಿದರು ಒಂದು ಸ್ಥಾನಕ್ಕೆ ಹೋದ ಮೇಲೆ ತಾವು ಮಾಡಿದ ತಪ್ಪಿಗೆ ಉತ್ತರ ಕೊಡಲೇಬೇಕು. ಅದರಿಂದ ನುಣುಚಿಕೊಳ್ಳುವ ಪ್ರಯತ್ನ ಉನ್ನತ ಸ್ಥಾನದಲ್ಲಿರುವ ಯಾರಿಂದಲೂ ಆಗಬಾರದು.
ಡಾ. ರಾಜ್ ಕುಮಾರ್ ಅವರ ಮಾತಿನ ಸ್ವಚ್ಛತೆ, ಅವರ ನಡವಳಿಕೆ ನಮಗೆ ಮಾದರಿಯಾಗಿದೆ. ಕಲಾವಿದರು ಜನರಿಂದ ಬೆಳೆದಿದ್ದು, ಅವರನ್ನು ಪ್ರಶ್ನಿಸುವ ಹಕ್ಕು ಪತ್ರಕರ್ತರಿಗಿದೆ. ಇದು ನನ್ನ ಬದುಕು ಅಂತ ಹೇಳೋಕೆ ಸಾಧ್ಯವಿಲ್ಲ ಪ್ರಕಾಶ್ ರೈ ಸೂಚಿಸಿದರು.

ಅಕ್ಟೋಬರ್ 7 ರಂದು ಪುಸ್ತಕ ಬಿಡುಗಡೆ
'ಅವರವರ ಭಾವಕ್ಕೆ' ಪುಸ್ತಕ ಬಿಡುಗಡೆ ಕುರಿತು ಮಾಹಿತಿ ನೀಡಿದ ಪ್ರಕಾಶ್ ರೈ, ಅ.7 ರ ಸಂಜೆ 5 ಗಂಟೆಗೆ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಮಾಡಲಾಗುವುದು. ನನ್ನ ಮೊದಲ ಪುಸ್ತಕವನ್ನು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ್ದೆ. ಎರಡನೇ ಪುಸ್ತಕವನ್ನು ಮೈಸೂರಿನಲ್ಲಿ ಬಿಡುಗಡೆ ಮಾಡುತ್ತಿದ್ದೇನೆ.
ನಾನು ಹೇಳುವುದನ್ನು ಬರೆಯಲು ಗೆಳೆಯರು ಹೇಳಿದರು. ಹೀಗಾಗಿ ನನಗೆ ಅನಿಸಿದ್ದನ್ನು ಬರೆಯಲು ಮುಂದಾದೆ. ಈಗ ಬರೆಯದೇ ಇರಲು ಆಗುತ್ತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ ಅವರು ಕತೆಗಾರ ದೇವನೂರ ಮಹಾದೇವ ಅವರಿಗೆ ಮೊದಲ ಪ್ರತಿಯನ್ನು ಹಸ್ತಾಂತರ ಮಾಡಲಿದ್ದಾರೆ.

ಪ್ರಜಾವಾಣಿ' ದಿನಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಲೇಖಕ ಡಾ.ಸಿ.ನಾಗಣ್ಣ, ರಂಗಕರ್ಮಿ ಮಂಡ್ಯ ರಮೇಶ್, ಎನ್ಎಸ್ ಡಿ ರಂಗಕರ್ಮಿ ಕೆ.ಆರ್.ಸುಮತಿ ಉಪಸ್ಥಿತರಿರಲಿದ್ದಾರೆ.
ನಂತರ ನೆರೆದ ಸಭಿಕರೊಂದಿಗೆ ಮಾತುಕತೆ ನಡೆಸಲಿದ್ದೇನೆ. ಜನಮನ ಮತ್ತು ನೆಲೆ ಹಿನ್ನೆಲೆ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದೆ ಎಂದು ಪ್ರಕಾಶ್ ರೈ ತಿಳಿಸಿದರು.











Click it and Unblock the Notifications