ಅಂಚೆ ಕಚೇರಿ, ಅಂಚೆಯಣ್ಣ ಎಲ್ಲ ಸ್ಮಾರ್ಟ್, ಇಲ್ಲಿದೆ ಡೀಟೇಲ್ಸ್
ಮೈಸೂರು, ಜೂನ್ 10: ಅಂಚೆ ಇಲಾಖೆಯಲ್ಲಿ ಇಷ್ಟಿಷ್ಟೇ ಬದಲಾವಣೆ ತರುತ್ತಾ ಇದೀಗ ಅಂಚೆಯಣ್ಣನಿಗೆ ಸ್ಮಾರ್ಟ್ ಫೋನ್ ಒದಗಿಸಲು ಯೋಜನೆ ಬಂದಿದೆ.
ಈ ಸ್ಮಾರ್ಟ್ ಫೋನ್ ನಲ್ಲಿ ಪೋಸ್ಟ್ ಮ್ಯಾನ್ ಮೊಬೈಲ್ ಅಪ್ಲಿಕೇಶನ್ ಅಳವಡಿಸಲಾಗಿದ್ದು, ಸ್ಪೀಡ್ ಪೋಸ್ಟ್, ರಿಜಿಸ್ಟರ್ಡ್ ಪೋಸ್ಟ್, ಸರಕು (ಪಾರ್ಸೆಲ್), ಎಲೆಕ್ಟ್ರಾನಿಕ್ ಮನಿ ಆರ್ಡರ್ ನ ಸ್ಥಿತಿಗತಿ ಬಗ್ಗೆ ಗ್ರಾಹಕರಿಗೆ ಮಾಹಿತಿ ಒದಗಿಸಲಾಗುತ್ತದೆ. ಸರಕು ಕಳುಹಿಸುವ ಮತ್ತು ಸ್ವೀಕರಿಸುವ ವ್ಯಕ್ತಿಯ ಮೊಬೈಲ್ ಗೆ ಎಸ್ಎಂಎಸ್ ಬರುತ್ತದೆ.
ಸರಕು ರವಾನೆ ಮಾಡಲು ವಿಳಾಸಕ್ಕೆ ತೆರಳುವ ಅಂಚೆಯಣ್ಣ ಇದರ ಸಹಕಾರದಿಂದಲ್ಲಿ ಗ್ರಾಹಕರಿಂದ ಡಿಜಿಟಲ್ ಸಹಿ ಪಡೆದುಕೊಳ್ಳಬಹುದು. ಮೈಸೂರಿನ ಅಂಚೆ ತಂತ್ರಜ್ಞಾನದ ಉತ್ಕೃಷ್ಟ ಕೇಂದ್ರದಲ್ಲಿ (ಸಿಇಪಿಟಿ) ಇಲಾಖೆ ಸಿಬ್ಬಂದಿಯೇ ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ.
ಬೆಂಗಳೂರು, ತಿರುವನಂತಪುರ, ಜೈಪುರ, ಕೋಲ್ಕತ್ತದಲ್ಲಿ ಪ್ರಾಯೋಗಿಕವಾಗಿ ಈ ಸೇವೆ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ ವಿಸ್ತರಿಸಲು ಇಲಾಖೆಯು ಯೋಜನೆ ರೂಪಿಸಿದೆ. ಆನ್ ಲೈನ್ ಮೂಲಕ ವಹಿವಾಟು ನಡೆಸುವ ಇ -ಕಾಮರ್ಸ್ ಕಂಪೆನಿಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಇದೆ.

55 ಸಿಬ್ಬಂದಿಗೆ ಸ್ಮಾರ್ಟ್ ಫೋನ್
ಬೆಂಗಳೂರಿನ ಕೋರಮಂಗಲ, ಜಯನಗರ ಹಾಗೂ ರಾಜಾಜಿನಗರದ ಅಂಚೆ ಕಚೇರಿಗಳ 55 ಸಿಬ್ಬಂದಿಗೆ ಈ ಸ್ಮಾರ್ಟ್ ಫೋನ್ ಗಳನ್ನು ವಿತರಿಸಲಾಗಿದೆ. ಇನ್ನು ಈ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ವೃತ್ತದ ಪೋಸ್ಟ್ ಮಾಸ್ಟರ್ ಜನರಲ್ ಅರವಿಂದ್, ಹಿಂದೆ ಮಾಹಿತಿ ರವಾನೆ ವಿಳಂಬವಾಗುತ್ತಿತ್ತು. ಗ್ರಾಹಕರಿಗೆ ಸರಕು ರವಾನಿಸಿ ವಾಪಸ್ ಕಚೇರಿಗೆ ಬಂದು ಕಂಪ್ಯೂಟರ್ ಗೆ ಮಾಹಿತಿ ಅಪ್ ಲೋಡ್ ಮಾಡಬೇಕಿತ್ತು.

ಕೇಂದ್ರದ ಸರ್ವರ್ ಗೆ ಅಪ್ ಲೋಡ್
ಈಗ ತಂತ್ರಜ್ಞಾನದ ಸಹಾಯದಿಂದ ಕಲೆ ಹಾಕಿದ ಮಾಹಿತಿ ನೇರವಾಗಿ ಕೇಂದ್ರದ ಸರ್ವರ್ ಗೆ ಅಪ್ ಲೋಡ್ ಆಗುತ್ತದೆ. ಇದರಿಂದ ಸಮಯ ಉಳಿತಾಯವಾಗುತ್ತಿದೆ ಎನ್ನುತ್ತಾರೆ.

ಗ್ರಾಹಕರ ಮೊಬೈಲ್ ಗೆ ಸಂದೇಶ
ಪತ್ರ ಅಥವಾ ಸರಕು ಅಂಚೆ ಕಚೇರಿಗೆ ಬಂದ ತಕ್ಷಣವೇ ಗ್ರಾಹಕರ ಮೊಬೈಲ್ ಗೆ ಸಂದೇಶ ಬರುತ್ತದೆ. ಸರಕು ತಲುಪಿಸುವ ಅಂಚೆ ಸಿಬ್ಬಂದಿಯ ಹೆಸರು, ಎಷ್ಟು ಗಂಟೆಗೆ ವಿತರಿಸಲಾಗುತ್ತದೆ ಎಂಬ ಮಾಹಿತಿಯನ್ನು ನೀಡಲಾಗುತ್ತದೆ. ಸರಕು ನಿಗದಿತ ವಿಳಾಸ ತಲುಪಿದ ಕೂಡಲೇ ಅದನ್ನು ಯಾರು, ಎಲ್ಲಿ ಮತ್ತು ಯಾವ ಸಮಯದಲ್ಲಿ ಪಡೆದರು ಎಂಬುದರ ವಿವರ ಸರ್ವರ್ ನಲ್ಲಿ ದಾಖಲಾಗುತ್ತದೆ. ಇದರಿಂದ ಗ್ರಾಹಕರಿಗೂ ಮಾಹಿತಿ ರವಾನೆಯಾಗುತ್ತದೆ.

ಎಸ್ ಎಂಎಸ್ ಮೂಲಕವೇ ಮಾಹಿತಿ
ಸರಕು ಬಂದಾಗ ಮನೆಯಲ್ಲಿ ವಿಳಾಸದಾರರು ಇಲ್ಲದಿದ್ದರೆ ಬದಲಿಗೆ ಯಾರು, ಎಷ್ಟೊತ್ತಿಗೆ ಸ್ವೀಕರಿಸಿದ್ದಾರೆ ಎಂಬ ಮಾಹಿತಿಯೂ ಎಸ್ ಎಂಎಸ್ ಮೂಲಕವೇ ಗೊತ್ತಾಗುತ್ತದೆ. ಅಲ್ಲಿಗೆ ಖಾಸಗಿಯವರೇ ಉತ್ತಮ ಎನ್ನುತ್ತಿದ್ದವರಿಗೆ ಅಂಚೆ ಇಲಾಖೆಯಲ್ಲಿನ ಬದಲಾವಣೆ ಕಂಡು ಆಶ್ಚರ್ಯ ಆಗಲೇಬೇಕು.












Click it and Unblock the Notifications