ಪ್ರವೀಣ್ ಗೋಡ್ಖಿಂಡಿ 'ಪಿಟಿಲು' ವಾದಕರಂತೆ! ದಸರಾ ಆಹ್ವಾನ ಪತ್ರಿಕೆಯಲ್ಲಿ ಪ್ರಮಾದ
ಮೈಸೂರು, ಸೆಪ್ಟೆಂಬರ್ 20 : ಪ್ರವೀಣ್ ಗೋಡ್ಖಿಂಡಿ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ನೀವೇ ಹೇಳಿ? ಸಂಗೀತ ಕ್ಷೇತ್ರದಲ್ಲಿಯೇ ಅದರಲ್ಲೂ ಕೊಳಲು ವಾದನದಲ್ಲಿ ವಿಶ್ವವಿಖ್ಯಾತರು ಪ್ರವೀಣ್ ಗೋಡ್ಖಿಂಡಿ. ಆದರೆ ನಮ್ಮ ರಾಜ್ಯ ಸರ್ಕಾರಕ್ಕೆ ಮಾತ್ರ ಪ್ರವೀಣ್ ಗೋಡ್ಖಿಂಡಿ ಯಾವ ವಾದ್ಯ ನುಡಿಸುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ.
ಮೈಸೂರು ದಸರಾ ಸಾಂಸ್ಕೃತಿಕ ಉತ್ಸವ ಸಮಿತಿ ಪ್ರವೀಣ್ ಗೋಡ್ಖಿಂಡಿ ನುಡಿಸುವ ವಾದ್ಯವನ್ನೇ ಬದಲಿಸಿ ದಸರಾ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿದೆ. ಸೆ. 28ರಂದು ಸಂಜೆ 7.30ಕ್ಕೆ ಹಿಂದೂಸ್ತಾನಿ ಗಾಯನ ಮತ್ತು ಕೊಳಲುವಾದನ ಜುಗಲ್ ಬಂದಿ ನಡೆಯಲಿದೆ. ಇದರಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಜಯತೀರ್ಥ ಮೇವುಂಡಿ ಮತ್ತು ಪ್ರಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಆದರೆ ಮೈಸೂರು ದಸರಾ ಸಾಂಸ್ಕೃತಿಕ ಉತ್ಸವ ಸಮಿತಿ ಆಮಂತ್ರಣ ಪತ್ರಿಕೆಯಲ್ಲಿ ಪ್ರವೀಣ್ ಗೋಡ್ಖಿಂಡಿ ಖ್ಯಾತ ಪಿಟೀಲು ವಾದಕರು ಎಂದು ತಪ್ಪಾಗಿ ಮುದ್ರಿಸಿ ಪೇಚಿಗೆ ಸಿಲುಕಿದೆ.

ವಾಟ್ಸಪ್ ಗ್ರೂಪ್ ವೊಂದರಲ್ಲಿ ಈ ಕುರಿತು ಚರ್ಚೆಯಾಗಿದ್ದು, 'ನಾನು ಪಿಟೀಲು ನುಡಿಸುವುದು ನನಗೆ ಗೊತ್ತಿಲ್ಲವೇ' ಎಂದು ಸ್ವತಃ ಖ್ಯಾತ ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಯಾರು ಯಾವ ವಾದ್ಯ ನುಡಿಸುತ್ತಾರೆ ಎಂದು ಸರಿಯಾಗಿ ತಿಳಿಯದೆ ಅಪ್ರತಿಮ ಕಲಾವಿದರ ವಿಷಯದಲ್ಲಿ ಈ ರೀತಿ ನಡೆದುಕೊಳ್ಳುವುದು ಎಷ್ಟು ಸರಿ ಎಂದು ಸಂಗೀತ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.













Click it and Unblock the Notifications