ಅಪ್ರಾಪ್ತನಿಂದ ಕಾರು ಚಾಲನೆಗೆ ಮೂವರು ಬಲಿ; ತಂದೆ ಪೊಲೀಸ್ ಕಸ್ಟಡಿಗೆ
ಮೈಸೂರು, ಡಿಸೆಂಬರ್ 12: ಗುರುವಾರ (ಡಿ.11) ರಾತ್ರಿ ಮೈಸೂರು ಹೊರವಲಯದಲ್ಲಿ ನಡೆದ ಬೈಕ್- ಕಾರು ಅಪಘಾತದಲ್ಲಿ ಮೂವರು ಮೃತಪಟ್ಟಿದ್ದ ಘಟನೆ ನಡೆದಿದ್ದು, ತನಿಖೆ ವೇಳೆ ಆ ಕಾರು ಓಡಿಸುತ್ತಿದ್ದುದು ಬಾಲಕ ಎಂದು ತಿಳಿದುಬಂದಿದೆ. ಇದೀಗ ಬಾಲಕನ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕ 9ನೇ ತರಗತಿ ವಿದ್ಯಾರ್ಥಿಯಾಗಿದ್ದು, ಆತನ ತಂದೆ ಕಾರು ಮಾರಾಟ ಮಳಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಎಂದಿನಂತೆ ಬಾಲಕನ ತಂದೆ ಗುರುವಾರ ರಾತ್ರಿ 8 ಗಂಟೆಗೆ ಮನೆಗೆ ಬಂದಿದ್ದಾರೆ. ಜೊತೆಗೆ ಮಾರಾಟ ಮಳಿಗೆಯ ಟ್ರಯಲ್ ಕಾರನ್ನು ತಂದಿದ್ದಾರೆ. ಕಾರನ್ನು ಮನೆಯ ಮುಂದೆ ನಿಲ್ಲಿಸಿ ಅನ್ಯ ಕೆಲಸದ ನಿಮಿತ್ತ ದ್ವಿಚಕ್ರ ವಾಹನದಲ್ಲಿ ತೆರಳಿದ್ದಾರೆ.
ಇದೇ ಸಮಯ ಸಾಧಿಸಿದ ಬಾಲಕ ಕಾರನ್ನು ಚಲಾಯಿಸಿಕೊಂಡು ಬೆಂಗಳೂರು-ಮೈಸೂರು ರಸ್ತೆಗೆ ತೆರಳಿದ್ದಾನೆ. ಆತನ ತಪ್ಪಿನಿಂದ ಅಪಘಾತದಲ್ಲಿ ಮೂವರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ ಸಂಚಾರ ವಿಭಾಗದ ಎಸಿಪಿ ಸಂದೇಶ್ ಅವರು ಬಾಲಕ ಓದುತ್ತಿದ್ದ ಶಾಲೆಗೆ ತೆರಳಿ ಸಂಚಾರ ನಿಯಮದ ಬಗ್ಗೆ ಪಾಠ ಹೇಳಿದ್ದರು. ನೀವು ಯಾವುದೇ ಕಾರಣಕ್ಕೂ ವಾಹನ ಚಾಲನೆಗೆ ಮುಂದಾಗಬಾರದು ಎಂದು ತಿಳಿಹೇಳಿದ್ದರು. ಈ ವಿಚಾರವನ್ನು ಬಾಲಕನೇ ಪೊಲೀಸರ ಮುಂದೆ ಹೇಳಿದ್ದಾನೆ.
ಮಗ ಮಾಡಿದ ತಪ್ಪಿನಿಂದ ಮೂವರು ಸಾವಿಗೀಡಾಗಿದ್ದುದನ್ನು ನೆನೆದು ಬಾಲಕನ ಪೋಷಕರು ಕಣ್ಣೀರು ಹಾಕಿದ್ದಾರೆ. ನಿಯಮದ ಪ್ರಕಾರ ಯಾವುದೇ ಪ್ರಕರಣದಲ್ಲಿ ಅಪ್ರಾಪ್ತರು ವಾಹನ ಚಾಲನೆ ಮಾಡಿ ಅಪಘಾತ ನಡೆಸಿದಲ್ಲಿ ಬಾಲಕರ ಪೋಷಕರೇ ಹೊಣೆಗಾರರಾಗುತ್ತಾರೆ. ಅವರ ವಿರುದ್ಧವೇ ಎಫ್ಐಆರ್ ದಾಖಲಾಗುತ್ತದೆ. ವಿಚಾರಣೆ ವೇಳೆ ನ್ಯಾಯಾಲಯ ಅವರಿಗೆ ಕನಿಷ್ಠ ಎರಡು ವರ್ಷ ಶಿಕ್ಷೆ ವಿಧಿಸುವ ಸಾಧ್ಯತೆಗಳಿವೆ. ಈ ಪ್ರಕರಣದಲ್ಲಿ ಕೂಡ ಪೊಲೀಸರು ಬಾಲಕನ ತಂದೆ ವಿರುದ್ಧ ಎನ್ಆರ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.












Click it and Unblock the Notifications