ಕುಮಾರಸ್ವಾಮಿ ಸಿಎಂ ಆಗಲೆಂದು 11 ವರ್ಷ ಗಡ್ಡ–ತಲೆಗೂದಲು ಬಿಟ್ಟ ಆಸಾಮಿ
ಮೈಸೂರು, ಮೇ 22 : ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ಹರಕೆ ಹೊತ್ತ ಅಭಿಮಾನಿಯೊಬ್ಬರು 11 ವರ್ಷಗಳಿಂದ ಗಡ್ಡ, ತಲೆಗೂದಲು ತೆಗೆಯದೆ ಕಾಯುತ್ತಿದ್ದರು. ಇದೀಗ ಹರಕೆ ಹೊತ್ತಿದ್ದ ಆ ಅಭಿಮಾನಿ ಅದನ್ನು ತೀರಿಸಲು ಮುಂದಾಗಿದ್ದಾರೆ.
ಹೌದು, ಕೃಷ್ಣರಾಜನಗರ ತಾಲೂಕು ಮೇಲೂರು ಗ್ರಾಮದ ರಾಮಕೃಷ್ಣೇಗೌಡ ಈ ರೀತಿ ಹರಕೆ ಹೊತ್ತಿದ್ದವರು. ರೈತರಾದ ಇವರು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಮಾಡಿದ್ದ ಕಾರ್ಯಕ್ರಮಗಳಿಗೆ ಮನ ಸೋತಿದ್ದರು. ಕುಮಾರಸ್ವಾಮಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ರೈತರು, ಶೋಷಿತರು, ಬಡವರ ಆಶಾಕಿರಣ ಆಗಲೆಂದು ಹರಕೆ ಹೊತ್ತಿದ್ದರು.
20 ತಿಂಗಳ ಕಾಲ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ರಾಜಕೀಯ ಮೇಲಾಟದಲ್ಲಿ ಅಧಿಕಾರ ಕಳೆದುಕೊಂಡರು. ಆ ಬಳಿಕ ರಾಜ್ಯದಲ್ಲಿ ನಡೆದ ರೈತರ ಆತ್ಮಹತ್ಯೆ, ಭ್ರಷ್ಟಾಚಾರ ಪ್ರಕರಣಗಳು, ಬಡವರ ಮೇಲಿನ ದಬ್ಬಾಳಿಕೆ ನನ್ನ ಮನ ಕಲುಕಿದವು. ಇಂಥ ಅನಿಷ್ಟಗಳನ್ನೆಲ್ಲಾ ಹೋಗಲಾಡಿಸಿ, ರಾಜ್ಯಕ್ಕೆ ಒಳ್ಳೆಯ ಹೆಸರು ತರಲು ಕುಮಾರಸ್ವಾಮಿ ಅವರಿಂದ ಮಾತ್ರ ಸಾಧ್ಯ ಎನಿಸಿತು ಎನ್ನುತ್ತಾರೆ.

ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿಯಾಗಲಿ ಎಂಬ ಬಯಕೆಯಿಂದ ಅಂದೇ ಯೋಗಾನರಸಿಂಹ ಸ್ವಾಮಿಗೆ ಹರಕೆ ಹೊತ್ತಿದ್ದೆ. 2013ರ ಫೆಬ್ರವರಿಯಲ್ಲಿ ಸಾಲಿಗ್ರಾಮದ ಯೋಗನರಸಿಂಹಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಎಚ್.ಡಿ.ದೇವೇಗೌಡರನ್ನು ನಾನು ಭೇಟಿಯಾದಾಗ ಹರಕೆ ಬಗ್ಗೆ ತಿಳಿಸಿದ್ದೆ. ಆಗ ದೇವೇಗೌಡರು ನನ್ನ ಹೆಗಲ ಮೇಲೆ ಕೈಯಿಟ್ಟು ಭಾವುಕರಾದರು ಎಂದಾಗ ರಾಮಕೃಷ್ಣೇಗೌಡರ ಕಣ್ಣಾಲಿಗಳು ತುಂಬಿದ್ದವು.
ಈ ಬಾರಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ. ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಹೀಗಾಗಿ 11 ವರ್ಷದ ಹಿಂದೆ ರಾಮಕೃಷ್ಣ ಅವರು ಹೊತ್ತಿದ್ದ ಹರಕೆಯನ್ನು ತೀರಿಸಲು ಇದೇ 23ರಂದು ಕಾಶಿಗೆ ತೆರಳಿ ಹರಕೆ ತೀರಿಸಲಿದ್ದಾರೆ.












Click it and Unblock the Notifications