ಸೌದೆ ತರಲೆಂದು ಬಂಡೀಪುರ ಅರಣ್ಯಕ್ಕೆ ಹೋದವ ಮತ್ತೆ ಬರಲೇ ಇಲ್ಲ!
ಮೈಸೂರು, ಜನವರಿ 17:ಸಂಕ್ರಾಂತಿ ಹಬ್ಬದ ಹಿನ್ನಲೆಯಲ್ಲಿ ಸೌದೆ ತರಲೆಂದು ಕಾಡಿಗೆ ಹೋದ ವ್ಯಕ್ತಿಯೊಬ್ಬ ಕಾಡಾನೆ ದಾಳಿಗೆ ಮೃತಪಟ್ಟಿರುವ ಘಟನೆ ಎಚ್.ಡಿ.ಕೋಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಮೊಳೆಯೂರು ವಲಯದ ಕುಣಿಗಲ್ ಸಮೀಪದಲ್ಲಿ ನಡೆದಿದೆ. ಆಲನಹಳ್ಳಿ ಗಿರಿಜನ ಹಾಡಿಯ ನಿವಾಸಿ ಜಡೆಯ(45) ಎಂಬಾತನೇ ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ದುರ್ದೈವಿ.
ಈತ ಹಬ್ಬದ ಹಿನ್ನಲೆಯಲ್ಲಿ ಸೌದೆ ತರಲೆಂದು ತನ್ನ ಹಾಡಿಗೆ ಸಮೀಪದಲ್ಲಿರುವ ಬಂಡಿಪುರ ರಾಷ್ಟ್ರೀಯ ಅಭಯಾರಣ್ಯಕ್ಕೆ ತೆರಳಿದ್ದನು. ಸಾಮಾನ್ಯವಾಗಿ ಸೌದೆಗೆ ಹೋದವರು ಸ್ವಲ್ಪ ಹೊತ್ತಿನಲ್ಲಿಯೇ ಹಿಂತಿರುಗುವುದು ವಾಡಿಕೆ. ಆದರೆ ಈತ ರಾತ್ರಿಯಾದರೂ ಮನೆಗೆ ಸೌದೆಯೊಂದಿಗೆ ಮನೆಗೆ ಬಂದಿರಲಿಲ್ಲ. ಇದು ಮನೆಯವರಲ್ಲಿ ಭಯವನ್ನುಂಟು ಮಾಡಿತ್ತು.
ಸುತ್ತಮುತ್ತಲಿನವರ ಬಳಿ ವಿಚಾರಿಸಿದರೂ ಪ್ರಯೋಜನವಾಗಿರಲಿಲ್ಲ. ಆ ನಂತರ ಮನೆಯವರು ಸೇರಿದಂತೆ ಹಾಡಿವಾಸಿಗಳು ಆರ್ಎಫ್ಓ ಮಂಜುನಾಥ್ ಅವರನ್ನು ಭೇಟಿ ಮಾಡಿ ಕಾಡಿಗೆ ಹೋದ ಜಡೆಯ ಮನೆಗೆ ಮರಳಿ ಬಾರದಿರುವ ಕುರಿತು ವಿಷಯ ತಿಳಿಸಿ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

ಕೂಡಲೇ ಕ್ರಮ ಕೈಗೊಂಡ ಆರ್ಎಫ್ಓ ಮಂಜುನಾಥ್ ಅವರು ಸಿಬ್ಬಂದಿಗೆ ನೀಡಿದ ಸೂಚನೆ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಅರಣ್ಯದಲ್ಲಿ ಹುಡುಕಾಟ ನಡೆಸಿದಾಗ ಜಡೆಯ ಶವ ಕಾಡಿನಲ್ಲಿ ದೊರೆತಿದ್ದು, ಈತ ಕಾಡಾನೆ ತುಳಿತಕ್ಕೆ ಸಿಲುಕಿ ಸಾವನ್ನಪ್ಪಿರುವುದು ಖಚಿತಗೊಂಡಿದೆ.
ತಕ್ಷಣ ಮೇಲಾಧಿಕಾರಿ ಎಪಿಎಫ್ ಪರಮೇಶ್ ಸೇರಿದಂತೆ ಮತ್ತಿತರರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆ ನಂತರ ಶವವನ್ನು ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಾಸುದಾರರಿಗೆ ಶವವನ್ನು ನೀಡಲಾಯಿತು.
ಶವಸಂಸ್ಕಾರಕ್ಕೆ ಮೃತನ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಯಿತು. ಕೆಲವು ದಿನಗಳ ಹಿಂದೆಯಷ್ಟೆ ಇದೇ ರೀತಿಯ ಘಟನೆ ನಡೆದಿದ್ದು, ಸೌದೆಗೆ ತೆರಳಿದ್ದ ಗಿರಿಜನ ವ್ಯಕ್ತಿಯ ಮೇಲೆ ಹುಲಿ ದಾಳಿ ಮಾಡಿತ್ತು. ಇದೀಗ ಕಾಡಾನೆ ದಾಳಿಗೆ ವ್ಯಕ್ತಿ ಸಾವನ್ನಪ್ಪುವಂತಾಗಿದೆ. ಮೇಲಿಂದ ಮೇಲೆ ಇಂತಹ ಘಟನೆಗಳು ನಡೆಯುತ್ತಿರುವುದರಿಂದ ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ಗಿರಿಜನವಾಸಿಗಳು ಭಯಭೀತರಾಗಿದ್ದಾರೆ.












Click it and Unblock the Notifications