ಮೈಸೂರು; ಸೋಂಕಿತರಿಂದ ಹೋಂ ಐಸೋಲೇಷನ್ ನಿಯಮ ಉಲ್ಲಂಘನೆ
ಮೈಸೂರು, ಮೇ 07; ಮೈಸೂರಿನಲ್ಲಿ ಕೊರೊನಾ ನಿಯಂತ್ರಣ ತಪ್ಪುತ್ತಿದ್ದು, ಲಾಕ್ಡೌನ್ ನಡುವೆಯೂ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ದಿನೇ ದಿನೇ ಏರಿಕೆಯಾಗುತ್ತಿದೆ. ಈ ನಡುವೆ ಹೋಂ ಐಸೊಲೇಷನ್ ಆದವರು ಕೋವಿಡ್ ನಿಯಮ ಉಲ್ಲಂಘನೆ ಮಾಡುತ್ತಿರುವ ವಿಷಯ ಕೂಡ ಆತಂಕ ಮೂಡಿಸಿದೆ.
ಕೊರೊನಾ ಪಾಸಿಟಿವ್ ಆದ ಕಾರಣ ಹೋಂ ಐಸೊಲೇಷನ್ ಇರಬೇಕಾದ ಸೋಂಕಿತರು ವಿನಾಕಾರಣ ನಗರದಲ್ಲಿ ಅಡ್ಡಾದಿಡ್ಡಿ ಓಡಾಡುತ್ತಿದ್ದಾರೆ. ಕೊರೊನಾ ಟೆಸ್ಟ್ ವರದಿ ಪಾಸಿಟಿವ್ ಬಂದ ಬಳಿಕ ಹಲವರು ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿರುವ ವಿಷಯ ಕೂಡ ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಇದರ ಪರಿಣಾಮವಾಗಿ ನಗರದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಹೆಚ್ಚಾಗುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಗುರುವಾರ ನಡೆದ ಸಭೆಯಲ್ಲಿ ಚರ್ಚೆ ಮಾಡಿದ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್, ಕೋವಿಡ್ ಪಾಸಿಟಿವ್ ಆದವರು ಹೊರಗೆ ಬಂದರೆ ಎಫ್ಐಆರ್ ದಾಖಲಿಸುವಂತೆ ಸೂಚನೆ ಸಹ ನೀಡಿದ್ದು, ಅಂತವರ ಲೊಕೇಶನ್ ಪತ್ತೆ ಹಚ್ಚಿ ಕ್ರಮಕ್ಕೆ ಆದೇಶ ನೀಡಿದ್ದಾರೆ. ಆ ಮೂಲಕ ಕೊರೊನಾ ಹರಡಲು ಕಾರಣವಾದವರ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

9 ನವಜಾತ ಶಿಶುಗಳಿಗೆ ಸೋಂಕು; ಈಚೆಗಷ್ಟೇ ಜನಿಸಿದ 9 ನವಜಾತ ಶಿಶುಗಳಿಗೆ ಕೊರೊನಾ ಸೋಂಕು ತಗುಲಿರುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಟಿ. ಅಮರನಾಥ್ ಮಾಹಿತಿ ನೀಡಿದರು. ಕೆ. ಆರ್. ಕ್ಷೇತ್ರ ವ್ಯಾಪ್ತಿಯ ಕೋವಿಡ್-19 ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಈಗ 9 ಮಕ್ಕಳಿಗೆ ಸೋಂಕು ತಗುಲಿದೆ. ಇದು ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು. ತಾಯಿ- ಮಗುವಿಗಾಗಿ ತುಳಸಿದಾಸ್ ಆಸ್ಪತ್ರೆ ಮೀಸಲಿಡಲಾಗುವುದು ಎಂದರು.
ಅಲ್ಲದೇ, ಜಯಲಕ್ಷ್ಮೀಪುರಂನ ಶ್ರೀಮತಿ ಲಕ್ಷ್ಮೀದೇವಮ್ಮ ಶಂಕರಶೆಟ್ಟಿ ಮೆಟರ್ನಿಟಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ್ದು, ಮೇ 1ರಿಂದ 30ಹಾಸಿಗೆಗಳ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಯಾರಿಗೆ ಐಸಿಯು, ವೆಂಟಿಲೇಟರ್, ಆಕ್ಸಿಜನೇಟೆಡ್ ಬೆಡ್ ಅವಶ್ಯಕತೆ ಇದೆ ಅಂತವರನ್ನು ಚೆಲುವಾಂಬ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತದೆ.
ಜೈಲು ಸಿಬ್ಬಂದಿಗೆ ಸೋಂಕು; ಮತ್ತೊಂದೆಡೆ ಮಹಾಮಾರಿ ಕೊರೊನಾ ಅಟ್ಟಹಾಸ ಇದೀಗ ಮೈಸೂರಿನ ಕೇಂದ್ರ ಕಾರಾಗೃಹಕ್ಕೂ ಕಾಲಿಟ್ಟಿದ್ದು, ಕೊರೊನಾ ಎರಡನೇ ಅಲೆಗೆ ಮೈಸೂರು ಕೇಂದ್ರ ಕಾರಾಗೃಹದ 6 ಜನರಿಗೆ ಸೋಂಕು ತಗುಲಿದೆ. ಸೋಂಕಿತರನ್ನು ಕೋವಿಡ್ ಸೆಂಟರ್ಗೆ ಸ್ಥಳಾಂತರ ಮಾಡಲಾಗಿದೆ.
ಈ ಹಿಂದೆ ಮೊದಲನೇ ಅಲೆಯಲ್ಲೂ ಜೈಲು ಹಕ್ಕಿಗಳಿಗೆ ಪಾಸಿಟಿವ್ ಆಗಿತ್ತು. ಇದೇ ಕಾರಣಕ್ಕೆ ಸಂದರ್ಶಕರ ಭೇಟಿಗೆ ನಿರ್ಬಂಧ ಹೇರಲಾಗಿತ್ತು. ಇದೀಗ ಎರಡನೇ ಅಲೆಯ ಹೊಡೆತಕ್ಕೆ ಜೈಲು ಸಿಬ್ಬಂದಿ ಸಿಲುಕಿರುವುದು ಜೈಲಿನ ಅಧಿಕಾರಿಗಳು ಹಾಗೂ ಕೈದಿಗಳಲ್ಲಿ ಆತಂಕ ಮೂಡಿಸಿದೆ.











Click it and Unblock the Notifications