ಆಸ್ತಿಗಾಗಿ ವೃದ್ಧನ ಅಪಹರಣ : ಬಿಜೆಪಿ ಮುಖಂಡನ ಸೆರೆ
ಮೈಸೂರು, ಜನವರಿ 30: ಆಸ್ತಿ ಕಬಳಿಸಲು ವಯೋವೃದ್ಧನೊಬ್ಬನನ್ನು ತನ್ನ ಸ್ನೇಹಿತನ ಸಹಾಯದಿಂದ ಅಪಹರಿಸಿದ್ಧ ಬಿಜೆಪಿ ಮುಖಂಡ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ಮೈಸೂರಿನಲ್ಲಿ ಜರುಗಿದೆ.

ಬಂಧಿತ ಬಿಜೆಪಿ ಮುಖಂಡರು ಆಲನಹಳ್ಳಿ ಪುಟ್ಟಸ್ವಾಮಿ ಹಾಗೂ ಕಿಶೋರ್ ಎಂದು ಗುರುತಿಸಲಾಗಿದೆ. ಅಗ್ರಹಾರ ಗುರುಸಿದ್ದಪ್ಪ ಅಪಹರಣಕ್ಕೊಳಗಾದವರು. ಅಗ್ರಹಾರ ನಿವಾಸಿ ಗುರುಸಿದ್ದಪ್ಪ ಅವರ ಬಳಿ ಅವರ ಹೆಸರಿನಲ್ಲಿ ಅಲ್ಲಿನ ಗಣಪತಿ ದೇವಾಲಯದ ಎದುರು 1.5 ಕೋಟಿ ಬೆಲೆಬಾಳುವ ಕಾಂಪ್ಲೆಕ್ಸ್ ಇತ್ತು. ಆಸ್ತಿಯ ಆಸೆಗಾಗಿ ಪುಟ್ಟಸ್ವಾಮಿ ಮತ್ತು ಕಿಶೋರ್, ಬೆಂಗಳೂರು ರಸ್ತೆಯಲ್ಲಿರುವ ಬೇಬಿ ಆಯಿಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗುರುಸಿದ್ದಪ್ಪ ಅವರನ್ನು ಭಾನುವಾರ ಮಧ್ಯಾಹ್ಯ 1:30 ರ ಸುಮಾರಿಗೆ ಅಪಹರಿಸಿದ್ದು, ನಂತರ ಜಗನ್ಮೋಹನ ಅರಮನೆ ಬಳಿ ಕರೆತಂದ ಐದು ಖಾಲಿ ಬಾಂಡ್ ಪೇಪರ್ ಗೆ ಸಹಿ ಮಾಡಿಸಿಕೊಂಡಿದ್ದಾರೆ ಎನ್ನಲಾಗಿದೆ.[ಸಿನಿಮಾ ಸ್ಟೈಲ್ ಕಿಡ್ನಾಪ್ ಮಾಡಲು ಹೋಗಿ 12 ಗಂಟೆಯೊಳಗೆ ಅಂದರ್]

ಪುಟ್ಟಸ್ವಾಮಿ ತನ್ನ ಇನ್ನೊವ ಕಾರಿನಲ್ಲಿ ಗುರುಸಿದ್ದಪ್ಪ ಹಾಗೂ ಅವರ ರಕ್ಷಕ ಸೋಮಣ್ಣ ಇಬ್ಬರನ್ನು ಸಿನಿಮೀಯ ರೀತಿಯಲ್ಲಿ ಆಸ್ಪತ್ರೆಯಿಂದಲೇ ಅಪಹರಿಸಿ ಬಾಂಡ್ ಪೇಪರ್ ಗಳಿಗೆ ಸಹಿ ಪಡೆದಿದ್ದರು. ಎನ್. ಆರ್. ಠಾಣೆ ಪೋಲಿಸರು ಕಾರ್ಯಾಚರಣೆ ನಡೆಸಿ ಪುಟ್ಟಸ್ವಾಮಿ, ಹಾಗೂ ಕಿಶೋರ್ ಅವರನ್ನು ಬಂಧಿಸಿದ್ದಾರೆ.
ಎನ್.ಆರ್.ಠಾಣೆಯ ಇನ್ಸಪೆಕ್ಟರ್ ಶಬ್ಬೀರ್ ಹುಸೇನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ಒಳಪಡಿಸಲಾಗಿದ್ದು, ಎನ್.ಆರ್.ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications