ದಸರೆ ಬಳಿಕ ಅಂಬಾರಿ ಹೊರುವ ಕ್ಯಾಪ್ಟನ್ ಅರ್ಜುನನ ಗೋಳು ಕೇಳೋರಿಲ್ಲ!
ಮೈಸೂರು, ಏಪ್ರಿಲ್ 30:ದಸರಾ ಅಂಬಾರಿ ಆನೆಯನ್ನು ವೀಕ್ಷಿಸಲು ದೇಶ ವಿದೇಶದಿಂದ ಜನರು ಹರಿದುಬರುತ್ತಾರೆ.ಆ ಆನೆ ಅಷ್ಟು ಸೂಜಿಗಲ್ಲಿನಂತೆ ಸೆಳೆಯುತ್ತದೆ. ದಸರಾ ವೇಳೆ ಅರ್ಜುನನಿಗೆ ಬೆಣ್ಣೆ- ಬೆಲ್ಲದ ರಾಜಾತಿಥ್ಯದ ವೈಭೋಗವಿರುತ್ತದೆ. ಆದರೆ ದಸರೆಯ ಬಳಿಕ ಆತನನ್ನು ಕೇಳೋರೆ ಇಲ್ಲದಂತಾಗಿದೆ.
ಹೌದು, ಅರಮನೆಯ ಆವರಣದಲ್ಲಿದ್ದಾಗ ಸಿರಿತನ, ಕಾಡಿಗೆ ಮರಳಿದ್ರೆ ಮತ್ತೆ ಬಡತನ. ಇದು ಮೈಸೂರಿನ ದಸರಾ ಗಜಪಡೆಯ ಕ್ಯಾಪ್ಟನ್ ಅರ್ಜುನನ ಸ್ಥಿತಿ. ದಸರೆಯಲ್ಲಿ ಮೃಷ್ಠಾನ್ನಾ ಭೋಜನವಿದ್ದರೆ, ವಾಪಾಸ್ ಸ್ವಸ್ಥಾನಕ್ಕೆ ಮರಳಿದಾಗ ಮೇವು, ನೀರಿಲ್ಲದೆ ಆನೆ ದಿನದೂಡಬೇಕಾದ ಸ್ಥಿತಿ ಇದೆ.
ದಸರಾದಲ್ಲಿ ಚಿನ್ನದ ಅಂಬಾರಿ ಹೊರಲು ದಷ್ಟಪುಷ್ಟ ಆನೆ ಅರ್ಜುನ ಬೇಕು. ಎಲ್ಲಾದರೂ ಪುಂಡಾನೆಗಳು ಕಂಡುಬಂದರೆ ಅವನ್ನು ಹತೋಟಿಗೆ ಕರೆತರಲು ಅರ್ಜುನ ಬೇಕು. ಅಲ್ಲದೆ ಹುಲಿ, ಚಿರತೆ ಹಿಡಿಯಲು ಅರ್ಜುನ ಬೇಕು. ಹೌದು, ದಸರೆಯ ವೇಳೆ ರಾಜಾತಿಥ್ಯವುಳ್ಳ ಅರ್ಜುನನಿಗೆ, ನವರಾತ್ರಿ ಮುಗಿದ ಬಳಿಕ ಕಣ್ಣೆತ್ತಿಯೂ ನೋಡಿರುವುದಿಲ್ಲ. ಕಾಡಿನಲ್ಲಿ ಸಿಗುವ ಅರೆಹೊಟ್ಟಿನ ಸೊಪ್ಪನ್ನು ತಿಂದು ನರಳಾಡುತ್ತಿರುವ ಅರ್ಜುನನ ಸ್ಥಿತಿ ನೋಡಿದಾಗ ಎಂಥವರು ಮಮ್ಮಲ ಮರಗುವಂತೆ ಮಾಡುತ್ತದೆ.

ಸದ್ಯ ಬಳ್ಳೆ ಆನೆ ಕ್ಯಾಂಪ್ ನಲ್ಲಿ ನೀರು, ಮೇವಿಗೆ ಬರ ಎದುರಾಗಿದೆ. ಕ್ಯಾಪ್ಟನ್ ಅರ್ಜುನನ ಮೈತೊಳೆಯಲು, ನೀರು ಕುಡಿಸಲು ನಿತ್ಯ ಮೂರು ಕಿಲೋಮೀಟರ್ ಹೋಗಿ ಬರಬೇಕಾದ ಸ್ಥಿತಿ ಎದುರಾಗಿದೆ. ಇದು ಒಂದೆಡೆಯ ಕಷ್ಟವಾದರೆ ಇತ್ತ ಬಿಸಿಲಿನ ಧಗೆ ತಾಳಲಾರದೆ ಅಲ್ಲಿದ್ದ ಮಣ್ಣನ್ನೇ ಕ್ಯಾಪ್ಟನ್ ಅರ್ಜುನ ಮೈಮೇಲೆ ಎರೆಚೆಕೊಳ್ಳುತ್ತಿರುವ ದೃಶ್ಯ ಮತ್ತಷ್ಟು ಬೇಸರ ತರಿಸುತ್ತದೆ.
ಬಿಸಿಲಿನ ಧಗೆಗೆ ಆನೆ ಶಿಬಿರದ ಸುತ್ತಮುತ್ತಲಿನ ಮರಗಳು ಒಣಗಿದ್ದು, ಆಹಾರಕ್ಕೂ ಹಾಹಾಕಾರ ಎದುರಾಗಿದೆ. ಸಾಕಾನೆಗಳನ್ನು ಶಿಬಿರಗಳಲ್ಲಿಟ್ಟು ಸಾಕುವ ಅರಣ್ಯ ಸಿಬ್ಬಂದಿ, ಅವುಗಳನ್ನು ಕಾಡಿಗೆ ಬಿಟ್ಟಾಗ ಕಾಡಾನೆಗಳು ದಾಳಿ ಮಾಡುವುದು ಸಾಮಾನ್ಯವಾಗಿದೆ. ಹೀಗೆಯೇ ಮುಂದುವರೆದರೆ ಅದೇ ಕಾಡಾನೆಗಳು ಅರ್ಜುನನ ಮೇಲೂ ದಾಳಿ ನಡೆಸಿದರೆ ಆಶ್ಚರ್ಯಪಡುವಂತಹದ್ದೇನು ಇಲ್ಲ.
ಅಂಬಾರಿ ಆನೆಯ ಕಥೆ ಹೀಗಾದರೆ, ಆತನನ್ನು ಮುನ್ನಡೆಸುವ ಅರ್ಜುನನ ಮಾವುತ ವಿನೂ ಆನೆಯನ್ನು ಕಟ್ಟಿ ಹಾಕಿರುವ ಮರದ ಪಕ್ಕದಲ್ಲಿ ಹರಿದ ಚೀಲ, ಮುರಿದ ಸಿಮೆಂಟ್ ಮೇಲ್ಛಾಣಿಗಳನ್ನು ಹಾಕಿಕೊಂಡು ಕಾಲ ಕಳೆಯುತ್ತಿದ್ದಾರೆ. ಈ ಬಾರಿ ಸರ್ಕಾರದಿಂದ ದಸರಾ ಆನೆಗಳಿಗಾಗಿ ವಿಶೇಷ ಪ್ಯಾಕೇಜ್ ಇದೆ. ಆದರೆ ಈ ಹಣ ಎಲ್ಲಿಗೆ ಹೋಗುತ್ತಿದೆ ಎಂಬುದು ಮಾತ್ರ ನಿಗೂಢ.












Click it and Unblock the Notifications