ವರಮಹಾಲಕ್ಷ್ಮಿ ಹಬ್ಬದ ಮರುದಿನ ಮೈಸೂರಿನಲ್ಲಿ ಸರಣಿ ಕಳ್ಳತನ
ಮೈಸೂರು, ಆಗಸ್ಟ್ 5 : ನಿನ್ನೆ ಶುಕ್ರವಾರವಿನ್ನೂ ವರಮಹಾಲಕ್ಷ್ಮಿ ಹಬ್ಬ ಆಚರಿಸಿ, ಸಂಪತ್ತು- ಅಭಿವೃದ್ಧಿ ದಯಪಾಲಿಸುವಂತೆ ಬೇಡಿಕೊಳ್ಳಲಾಗಿದೆ. ಹಬ್ಬದ ಮಾರನೇ ದಿನವಾದ ಶನಿವಾರ ಮೈಸೂರಿನಲ್ಲಿ ಬೆಚ್ಚಿಬೀಳಿಸುವ ರೀತಿ ಸರಣಿ ಕಳ್ಳತನ ನಡೆದಿದೆ. ನಗರದ ಶಿವರಾಮ ಪೇಟೆಯ ಐದು ಅಂಗಡಿಗಳಲ್ಲಿ ಕಳ್ಳರು ಸರಣಿ ಕಳ್ಳತನ ಮಾಡಿದ್ದಾರೆ.
ಐದು ಮಳಿಗೆಳಿಗೆ ಕನ್ನ ಹಾಕಿರುವ ಕಳ್ಳರು ಕ್ಯಾಶ್ ಕೌಂಟರ್ ನಲ್ಲಿದ್ದ ಲಕ್ಷಾಂತರ ರೂಪಾಯಿ ನಗದನ್ನು ದೋಚಿದ್ದಾರೆ. ಇನ್ನು ಶನಿವಾರ ಬೆಳಗ್ಗೆ ಮಾಲೀಕರು ಅಂಗಡಿಯ ಬಾಗಿಲು ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಇದರಿಂದ ಗಾಬರಿಯಾದ ಮಾಲೀಕರು ತಕ್ಷಣವೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ.

ಈ ಸುದ್ದಿ ಹಬ್ಬುತ್ತಿದ್ದಂತೆ ಮೈಸೂರು ನಗರಪಾಲಿಕೆ ಮೇಯರ್ ಎಂ.ಜೆ.ರವಿ ಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವರಮಹಾಲಕ್ಷ್ಮಿ ಹಬ್ಬವಿದ್ದ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಹಣವಿಟ್ಟು , ಪೂಜೆ ಸಲ್ಲಿಸಿದ್ದಾರೆ ಎಂಬ ಖಾತ್ರಿಯ ಮೇಲೆ ಕಳ್ಳರು ಕೈಚಳಕ ತೋರಿದ್ದಾರೆ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.












Click it and Unblock the Notifications