ಹುಣಸೂರು ಸಿಡಿಪಿಒಯಿಂದ ಕೊಲೆ ಯತ್ನ; ಚಿಕಿತ್ಸೆ ಫಲಿಸದೇ ಪತ್ನಿ ಸಾವು
ಮೈಸೂರು, ಮಾರ್ಚ್ 9: ಮಾರ್ಚ್ 3ರಂದು ಹುಣಸೂರಿನ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ತನ್ನ ಪತ್ನಿಯ ಕೊಲೆ ಯತ್ನ ನಡೆಸಿದ್ದು, ನಾಗವೇಣಿ (41) ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಅವರು ಕಳೆದ ಆರು ದಿನಗಳಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಪತಿ ವೆಂಕಟಪ್ಪ ಕಿರುಕುಳದಿಂದ ನಾಗವೇಣಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ವೆಂಕಟಪ್ಪ ಟಿ.ನರಸೀಪುರ ತಾಲೂಕಿನಲ್ಲಿ ಸಹಾಯಕ ಶಿಶುಯೋಜನಾ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದನು. ಈತನೇ ನಮ್ಮ ಮಗಳನ್ನು ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದ ಎಂದು ನಾಗವೇಣಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ಮೈಸೂರಲ್ಲಿ ಪತ್ನಿಯ ಕೊಲೆಗೆ ಯತ್ನಿಸಿದ ಸಿಡಿಪಿಒ ಅಧಿಕಾರಿ
ವೆಂಕಟಪ್ಪಗೆ 1997ರಲ್ಲಿ ನಾಗವೇಣಿಯನ್ನು ಮದುವೆ ಮಾಡಿಕೊಡಲಾಗಿತ್ತು. ಮೈಸೂರು ತಾಲೂಕಿನ ಸೋಮನಾಥಪುರ ಗ್ರಾಮದಲ್ಲಿ ಈ ದಂಪತಿ ವಾಸವಿದ್ದರು. ಇತ್ತೀಚಿಗೆ ವೆಂಕಟಪ್ಪ ಮಾನಸಿಕ ಹಾಗೂ ದೈಹಿಕವಾಗಿ ಮಗಳಿಗೆ ಕಿರುಕುಳ ನೀಡುತ್ತಿದ್ದನು. ಆದರೆ ಮಾರ್ಚ್ 3ರಂದು ಮನೆಯಲ್ಲಿ ನೇಣು ಬಿಗಿದು ಕೊಲೆ ಮಾಡಲು ಯತ್ನಿಸಿದ್ದ ಎಂದು ಪೋಷಕರು ಆರೋಪ ಮಾಡಿದ್ದರು. ತಕ್ಷಣ ನಾಗವೇಣಿಯನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.
ಅಂದಿನಿಂದ ನಾಗವೇಣಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.