ಕೊರೊನಾ ಬಗ್ಗೆ ಫೇಸ್ಬುಕ್ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿ ಬಂಧನ
ಮೈಸೂರು, ಜೂನ್ 15: ಕೊರೊನಾ ಬಗ್ಗೆ ಫೇಸ್ಬುಕ್ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಮೈಸೂರಿನ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. "ನಂಜನಗೂಡು ಸಮಾಚಾರ" ಎಂಬ ಹೆಸರಲ್ಲಿ ತಪ್ಪು ಮಾಹಿತಿ ನೀಡಿ ನಂಜನಗೂಡು ನಿವಾಸಿ ಪೊಲೀಸರ ಅತಿಥಿಯಾಗಿದ್ದಾನೆ.
ನಗರದ ಎಕ್ಸ್ಟೆನಷನ್ ಬಡಾವಣೆಯ ಪ್ರಜ್ವಲ್ ಕಶ್ಯಪ್ ಬಂಧಿತ ಆರೋಪಿಯಾಗಿದ್ದಾನೆ. ಕೊರೊನಾ ಬಗ್ಗೆ ಪ್ರಜ್ವಲ್ ಕಶ್ಯಪ್ ಅಪ್ ಲೋಡ್ ಮಾಡಿದ ಮಾಹಿತಿ ದೊಡ್ಡ ಎಡವಟ್ಟಾಗಿದೆ. ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಕಾರ್ಖಾನೆ ಕಾರ್ಮಿಕರು ಇದ್ದಾರೆ.
ಪ್ರಜ್ವಲ್ ಕಶ್ಯಪ್ ಫೇಸ್ಬುಕ್ ಮೂಲಕ ನಂಜನಗೂಡಿನ ಐವರಿಗೆ ಕೊರೊನಾ ಸೋಂಕು ಇದೆ ಎಂದು ಸುಳ್ಳು ಮಾಹಿತಿಯನ್ನು ಹಬ್ಬಿಸಿದ್ದ. ಇದನ್ನು ನೋಡಿ ಬಡಾವಣೆಯ ಕಾರ್ಮಿಕರು ದೂರು ನೀಡಿದ್ದು, ಪ್ರಜ್ವಲ್ ಕಶ್ಯಪ್ನನ್ನು ಬಂಧಿಸಲಾಗಿದೆ.

ಮಹಾರಾಷ್ಟ್ರದಿಂದ ಬಂದ 19 ಮಂದಿ ಪೈಕಿ ಐವರಿಗೆ ಕೊರೊನಾ ಸೋಂಕು ಧೃಢವಾಗಿತ್ತು. ಐವರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಐವರೂ ಸಹ ಮೂಲತಃ ನಂಜನಗೂಡಿನ ನಿವಾಸಿಗಳೇ ಆಗಿದ್ದರೂ, ಇವರು ನಂಜನಗೂಡಿಗೆ ಬಂದಿರಲಿಲ್ಲ.
ಆದರೆ, ನಂಜನಗೂಡಿನ ನಾಲ್ಕು ಬಡಾವಣೆಗಳ ಹೆಸರನ್ನ ಉಲ್ಲೇಖಿಸಿ ಪಾಸಿಟಿವ್ ಪತ್ತೆ ಎಂದು ಪ್ರಜ್ವಲ್ ಕಶ್ಯಪ್ ಪೋಸ್ಟ್ ಮಾಡಿದ್ದ. ಇದರಿಂದ ನಾಲ್ಕು ಬಡಾವಣೆಯಲ್ಲಿ ವಾಸವಿದ್ದ ಕೂಲಿ ಕಾರ್ಮಿಕರಿಗೆ ಕೆಲಸ ಕೊಡಲು ಫ್ಯಾಕ್ಟರಿ ನಿರಾಕರಿಸಿದೆ.
ಶಂಕರಪುರ ಬಡಾವಣೆ ನಿವಾಸಿಗಳು ಇದರಿಂದ ಬೇಸತ್ತು ನಂಜನಗೂಡಿನ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಪ್ಪು ಮಾಹಿತಿ ನೀಡಿ ನಾಲ್ಕು ಬಡಾವಣೆ ನಿವಾಸಿಗಳ ಆತಂಕಕ್ಕೆ ಕಾರಣವಾದ ಪ್ರಜ್ವಲ್ ಕಶ್ಯಪ್ ಇದೀಗ ಪೊಲೀಸ್ ಠಾಣೆಯಲ್ಲಿ ಇದ್ದಾನೆ.












Click it and Unblock the Notifications