ಮಂಡ್ಯದಿಂದ ಬರುವವರ ಮೇಲೆ ಕಣ್ಣಿಟ್ಟಿರುವ ಮೈಸೂರು ಜಿಲ್ಲಾಡಳಿತ
ಮೈಸೂರು, ಮೇ 22: ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪೂರ್ತಿ ನಿಯಂತ್ರಣದಲ್ಲಿದೆ. ಹಾಗಾಗಿ ಹೊರ ಜಿಲ್ಲೆ ಹೊರ ರಾಜ್ಯಗಳಿಂದ ಬಂದವರನ್ನು ಕ್ವಾರಂಟೈನ್ ಮಾಡಲಾಗುವುದು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
Recommended Video
ಚಾಮರಾಜ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಸಚಿವರು, ಮಂಡ್ಯದಿಂದ ಮೈಸೂರು ಭಾಗಕ್ಕೆ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಪೊಲೀಸರು ಮಫ್ತಿಯಲ್ಲೂ ಗಮನಹರಿಸುತ್ತಿದ್ದಾರೆ. ಮಂಡ್ಯ ಚೆಕ್ ಪೋಸ್ಟ್ ಅನ್ನು ಸದ್ಯ ತೆರವುಗೊಳಿಸದಿರುವಂತೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಅಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಳಗೊಂಡ ಹಿನ್ನೆಲೆಯಲ್ಲಿ ನಮ್ಮ ಮೈಸೂರು ಜಿಲ್ಲೆಯಲ್ಲೂ ಅನಗತ್ಯವಾಗಿ ಬರಬಾರದು ಎಂಬ ನಿಟ್ಟಿನಲ್ಲಿ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಮಂಡ್ಯದಿಂದ ಬರುವವರ ಮೇಲೆ ನಿಗಾ
ಮೈಸೂರಿನಲ್ಲಿ ಇಂದು ಯಾವುದೇ ಪಾಸಿಟಿವ್ ಪ್ರಕರಣ ಇಲ್ಲ. ಕೇವಲ 200 ಜನರ ವರದಿ ಬಾಕಿ ಇದೆ. ಈಗಾಗಲೇ 500 ಜನರ ಟೆಸ್ಟ್ ಮಾಡಲಾಗಿದೆ. ಇದರಲ್ಲಿ ಇಬ್ಬರಿಗೆ ಮಾತ್ರ ಪಾಸಿಟಿವ್ ಬಂದಿದೆ. 200 ಜನರ ವರದಿ ಬಂದ ನಂತರ ಗರ್ಭಿಣಿಯರು ಆರೋಗ್ಯ ಸಮಸ್ಯೆಯಿರುವವರ ಪರೀಕ್ಷೆ ನಡೆಸಲಾಗುವುದು.
ಮಂಡ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಕಂಡುಬರುತ್ತಿರುವುದರಿಂದ ಮಂಡ್ಯದಿಂದ ಬರುವವರನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಅಷ್ಟೆ ಅಲ್ಲದೇ, ಕ್ವಾರಂಟೈನ್ ನಲ್ಲಿಡಲಾಗುವುದು. ಅವರಿಗೆ ಸೋಂಕಿಲ್ಲವೆಂದಾದಲ್ಲಿ ಮಾತ್ರ ಬಿಡುಗಡೆಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

"ಜುಬಿಲಿಯಂಟ್ ಕುರಿತು ಸರ್ಕಾರದಿಂದ ಮಾಹಿತಿ ಇಲ್ಲ"
ನಂಜನಗೂಡಿನಲ್ಲಿನ ಜುಬಿಲಿಯಂಟ್ ಕಾರ್ಖಾನೆ ಮತ್ತೆ ಪ್ರಾರಂಭವಾಗುತ್ತಿದೆ ಎಂಬ ಬಗ್ಗೆ ಸುದ್ದಿಯನ್ನು ನೋಡಿದೆ. ಜುಬಿಲೆಂಟ್ ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಅನುಮತಿ ನೀಡಿರಬಹುದು. ನನಗೆ ಇನ್ನು ಆ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಗೃಹಸಚಿವರು ಮೈಸೂರಿಗೆ ಬಂದ ಮೇಲೆ ಖಚಿತ ಮಾಹಿತಿ ಸಿಗಲಿದೆ. ಜುಬಿಲಿಯಂಟ್ ಅಷ್ಟೇ ಅಲ್ಲ ಎಲ್ಲ ಕಾರ್ಖಾನೆಗಳಿಗೂ ಅನುಮತಿ ನೀಡಲಾಗಿದೆ.ಕಾರ್ಖಾನೆ ಆರಂಭಕ್ಕೆ ಜುಬಿಲಿಯಂಟ್ ಕಾರ್ಖಾನೆಯವರೇ ಮನವಿ ಮಾಡಿದ್ದರು. ಸದ್ಯಕ್ಕೆ ಈ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯೆ ನೀಡಿದರು.

ಬಸ್, ರೈಲಿನಲ್ಲೂ ಸಾಮಾಜಿಕ ಅಂತರ
ಇಂದಿನಿಂದ ಮೈಸೂರಿನಲ್ಲಿ ರಾಜ್ಯದಲ್ಲಿ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಬಸ್, ರೈಲು ಸಂಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗುತ್ತಿದೆ. ಪರೀಕ್ಷೆಗೊಳಪಟ್ಟವರು ಮಾತ್ರ ಈಗ ಹೆಚ್ವಿನ ಸಂಖ್ಯೆಯಲ್ಲಿ ಹೋಗುತ್ತಿದ್ದಾರೆ. ಅಲ್ಲೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗುತ್ತಿದೆ ಎಂದು ಸಚಿವ ಸೋಮಶೇಖರ್ ಮಾಹಿತಿ ನೀಡಿದರು.
ಚೆಕ್ಪೋಸ್ಟ್ ನಿರ್ಬಂಧ ತೆರವು ವಿಚಾರವಾಗಿ ಮಾತನಾಡಿ, "ಮೈಸೂರು ಜಿಲ್ಲೆಗೆ ಪ್ರತ್ಯೇಕ ನಿಯಮ ರೂಪಿಸಿ.ಯಾವುದೇ ಕಾರಣಕ್ಕೂ ಮೈಸೂರು ಜಿಲ್ಲೆ ಚೆಕ್ಪೋಸ್ಟ್ ತೆರವು ಸಾಧ್ಯವಿಲ್ಲ. ಅದರಲ್ಲೂ ಮಂಡ್ಯ ಭಾಗದ ಚೆಕ್ಪೋಸ್ಟ್ ಕಠಿಣಗೊಳಿಸಬೇಕು.ಈ ಸಂಬಂಧ ಸಿಎಂ ಯಡಿಯೂರಪ್ಪ ಅವರಿಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮೂಲಕ ಮನವಿ ಮಾಡಲಾಗುವುದು.ಮೇ 31ರವೆಗೂ ಚೆಕ್ಪೋಸ್ಟ್ನಲ್ಲಿ ಕಠಿಣ ತಪಾಸಣೆ ನಡೆಯಲಿದೆ ಎಂದರು.

ಮದುವೆಗಳಿಗೆ 50 ಜನ ಮಾತ್ರ
ಮದುವೆ ಸಮಾರಂಭಗಳಿಗೆ ಸರ್ಕಾರದಿಂದ 50 ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ನಂಜನಗೂಡಿನಲ್ಲಿ ನಡೆದ ವಿವಾಹ ಸಮಾರಂಭದ ಮಾಹಿತಿ ಪಡೆದಿದ್ದೇನೆ. ಅಲ್ಲಿ 60 ಜನ ಮಾತ್ರ ಭಾಗವಹಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ. ಇನ್ನು ಭಾನುವಾರ ಮದುವೆಗಳು ಮೊದಲೇ ನಿಗದಿಯಾಗಿದ್ದರೆ ನೆರವೇರಿಸಿಕೊಳ್ಳಲಿ ಎಂದು ಹೇಳಿದರು.












Click it and Unblock the Notifications