ಹನುಮ ಜಯಂತಿ ವಿಚಾರಕ್ಕೆ ತೆರೆ ಎಳೆಯಲು ಮುಂದಾದ ಮೈಸೂರು ಡಿಸಿ
ಮೈಸೂರು, ಡಿಸೆಂಬರ್ 6 : ಹನುಮ ಜಯಂತಿ ವಿಚಾರವಾಗಿ ಹುಣಸೂರಿನಲ್ಲಿ ನಡೆದ ಎಸ್ಪಿ - ಎಂಪಿ ಕೋಲ್ಡ್ ವಾರ್ ಗೆ ತೆರೆ ಎಳೆಯುವ ಸಲುವಾಗಿ ಮೈಸೂರು ಜಿಲ್ಲಾಡಳಿತ ಮುಂದಾಗಿದ್ದು ಈ ಕುರಿತಾಗಿ ಸ್ಪಷ್ಟನೆ ನೀಡಿದೆ.
ಜಿಲ್ಲಾಧಿಕಾರಿ ಡಿ.ರಣದೀಪ್ ಇಡೀ ಘಟನೆಯ ಸಂಪೂರ್ಣ ವಿವರ ನೀಡಿದ್ದು, ಜಯಂತಿ ಆಚರಣೆಯ ಸಂದರ್ಭದಲ್ಲಿ ತೆಗೆದುಕೊಂಡ ಕ್ರಮಗಳ ಮಾಹಿತಿ ಬಹಿರಂಗಪಡಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಗೃಹ ಕಾರ್ಯದರ್ಶಿಗಳ ನಡುವಿನ ಪತ್ರ ವ್ಯವಹಾರದ ಮಾಹಿತಿಯೂ ಬಹಿರಂಗವಾಗಿದೆ.
ಮೆರವಣಿಗೆಗೆ ಅವಕಾಶವೇ ನೀಡಿಲ್ಲ ಅಂತ ಆರೋಪ ಮಾಡೋದು ಸರಿಯಲ್ಲ. ಎಲ್ಲವೂ ಕಾನೂನಿನ ರೀತಿಯಲ್ಲಿ ನಡೆದಿದೆ. ಹನುಮ ಜಯಂತಿ ವೇಳೆ ನಿಗದಿತ ಸ್ಥಳದಿಂದ ನಿಗದಿತ ಸಮಯಕ್ಕೆ ಮೆರವಣಿಗೆ ಹೊರಟಿಲ್ಲ. ಪರಿಣಾಮ ಸ್ಥಳದಲ್ಲಿ ಹೆಚ್ಚಿನ ಜನ ಸೇರುವಂತಾಯಿತು.

ಪರಿಸ್ಥಿತಿ ನಿಯಂತ್ರಣಕ್ಕೆ ಅಲ್ಲಿನ ಉಪವಿಭಾಗಾಧಿಕರಿಗಳು ಪೊಲೀಸರಿಗೆ ಮನವಿ ಮಾಡಿದ್ದಾರೆ. ಆಗ ಪೊಲೀಸರು ಕನಿಷ್ಠ ಬಲಪ್ರಯೋಗಿಸಿ ಗುಂಪು ಚದುರಿಸಿದ್ದಾರೆ. ಈ ಎಲ್ಲಾ ಕ್ರಮಗಳನ್ನ ಸಾರ್ವಜನಿಕ ಹಿತಾಸಕ್ತಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಡಿಸಿ ರಂದೀಪ್ ಸ್ಪಷ್ಟೀಕರಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತವು ವಿವಿಧ ಹಂತಗಳ ಸಭೆ ನಡೆಸಿತ್ತು. ಎಲ್ಲ ಧಾರ್ಮಿಕ ಆಚರಣೆಗಳನ್ನು ಶಾಂತಿಯುತವಾಗಿ ನಡೆಸಲು ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಲು ಜಿಲ್ಲಾಡಳಿತದ ಜೊತೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ರಂದೀಪ್ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ನಿಲ್ಲದ ಎಂಪಿ ಎಸ್ಪಿ ಹಗ್ಗ ಜಗ್ಗಾಟ : ಸಂಸದ ಪ್ರತಾಪ್ ಸಿಂಹ ಹಾಗೂ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ನಡುವಿನ ಹನುಮಜಯಂತಿ ಕುರಿತ ಹಗ್ಗ ಜಗ್ಗಾಟ ಸದ್ಯಕ್ಕೆ ಮುಗಿಯುವ ಹಾಗೆ ತೋರುತ್ತಿಲ್ಲ.
ಇದೀಗ ಮತ್ತೆ ಸಂಸದ ಪ್ರತಾಪ್ ಸಿಂಹ ರವಿ.ಡಿ.ಚನ್ನಣ್ಣನವರ್ ಮೇಲೆ ಎಫ್ ಬಿ ಲೈವ್ ನಲ್ಲಿ ಮಾತನಾಡಿ ನಿಮ್ಮ ನಿಷ್ಠೆ ಪೊಲೀಸ್ ಇಲಾಖೆಗೋ ಅಥವಾ ಕೆಂಪಯ್ಯನವರಿಗೋ ಎಂದು ಪ್ರಶ್ನಿಸಿದ್ದಾರೆ. ಗೌರವಾನ್ವಿತ ಸಂಸದರೇ ಎಂದು ಮಾತಿನಲ್ಲಿ ಹೇಳಿದರಷ್ಟೇ ಸಾಲದು. ಗೌರವ ನೀಡಿ. ನಿಮ್ಮ ನಮ್ಮ ನಡುವೆ ಮೊಬೈಲ್ ನಲ್ಲಿ ನಡೆದ ಸಂಭಾಷಣೆ ನೀಡಿ. ಆಗ ಸತ್ಯ ಎಲ್ಲರಿಗೂ ತಿಳಿಯುತ್ತದೆ ಎಂದು ಕಿಡಿಕಾರಿದ್ದಾರಲ್ಲದೇ ಕರ್ತವ್ಯದ ಹೆಸರಿನಲ್ಲಿ ಜಿಲ್ಲಾಧಿಕಾರಿಗಳನ್ನು ಎಳೆದು ತರಬೇಡಿ ಎಂದಿದ್ದಾರೆ











Click it and Unblock the Notifications