ಸಚಿನ್ರಿಂದ 2016ರ ಮೈಸೂರು ದಸರಾ ಉದ್ಘಾಟನೆ?
ಬೆಂಗಳೂರು, ಆಗಸ್ಟ್ 04 : ಮೈಸೂರು ದಸರಾ ಜಂಬೂ ಸವಾರಿ ಬಗ್ಗೆ ಎದ್ದಿದ್ದ ಗೊಂದಲಗಳು ಬಗೆಹರಿದಿವೆ. 'ಅಕ್ಟೋಬರ್ 11ರಂದು ಜಂಬೂ ಸವಾರಿ ನಡೆಸಲಾಗುತ್ತದೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಈ ಬಾರಿಯ ದಸರಾವನ್ನು ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಉದ್ಘಾಟಿಸುವ ಸಾಧ್ಯತೆ ಇದೆ.
ವಿಧಾನಸೌಧದಲ್ಲಿ ಗುರುವಾರ 2016ನೇ ಸಾಲಿನ ಮೈಸೂರು ದಸರಾ ಸಿದ್ಧತೆಗಳ ಕುರಿತು ಉನ್ನತ ಮಟ್ಟದ ಸಭೆ ನಡೆಯಿತು. ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾಧಿಕಾರಿ ಸಿ.ಶಿಖಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.[ಐತಿಹಾಸಿಕ ಮೈಸೂರು ದಸರಾದ ಮರೆಯದ ಚಿತ್ರಗಳು]
ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ಅಕ್ಟೋಬರ್ 1ರಂದು 11.40ಕ್ಕೆ 2016ನೇ ಸಾಲಿನ ಮೈಸೂರು ದಸರಾ ಉದ್ಘಾಟನೆಯಾಗಲಿದೆ. 11ನೇ ದಿನ ಅಂದರೆ ಅಕ್ಟೋಬರ್ 11ರಂದು ಜಂಬೂ ಸವಾರಿ ನಡೆಸಲಾಗುತ್ತದೆ' ಎಂದು ಹೇಳಿದರು.[ಮೈಸೂರು ದಸರಾ : ನಂದಿಧ್ವಜ ಪೂಜೆಯಲ್ಲಿ ಮತ್ತೆ ಗೊಂದಲ]
ಈ ಬಾರಿ ಅಕ್ಟೋಬರ್ 1ರಂದು ನವರಾತ್ರಿ ಮಹೋತ್ಸವ ಆರಂಭವಾಗುತ್ತದೆ. ಸಂಪ್ರದಾಯದಂತೆ ನವರಾತ್ರಿ 10ನೇ ದಿನ ಅಂದರೆ ಅಕ್ಟೋಬರ್ 10ರಂದು ಜಂಬೂ ಸವಾರಿ ನಡೆಯಬೇಕಿತ್ತು. ಆದರೆ, ಕ್ಯಾಲೆಂಡರ್ಗಳಲ್ಲಿ ಅಕ್ಟೋಬರ್ 11ರಂದು ಜಂಬೂ ಸವಾರಿ ಎಂದು ಹಾಕಲಾಗಿದೆ. ಆದ್ದರಿಂದ, ಜಂಬೂ ಸವಾರಿ ದಿನಾಂಕದ ಬಗ್ಗೆ ಗೊಂದಲ ಉಂಟಾಗಿತ್ತು.....

ಸಚಿನ್ರಿಂದ ದಸರಾ ಉದ್ಗಾಟನೆ?
ಈ ಬಾರಿಯ ದಸರಾ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು? ಎಂದು ಆಗಸ್ಟ್ 9ರಂದು ನಡೆಯುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಹಿರಿಯ ಸಾಹಿತಿಗಳಾದ ಚನ್ನವೀರ ಕಣವಿ, ಪ್ರೊ.ಕೆ.ಎಸ್. ನಿಸಾರ್ ಅಹಮದ್, ಎಸ್.ಎಲ್.ಭೈರಪ್ಪ, ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತ್ತು ಮಾಜಿ ಕ್ರಿಕೆಟಿಗ ಸಚಿನ್ ತೆಂಡಲ್ಕೂರ್ ಅವರ ಹೆಸರು ಪ್ರಸ್ತಾಪವಾಗಿದೆ.

ವೆಚ್ಚದ ಬಗ್ಗೆ ಅಂತಿಮ ತೀರ್ಮಾನ ಆಗಿಲ್ಲ
'2015ರ ದಸರಾ ಉತ್ಸವಕ್ಕೆ ಸುಮಾರು 4 ಕೋಟಿ ರೂ. ವೆಚ್ಚವಾಗಿತ್ತು. ಈ ಬಾರಿ ಕಾರ್ಯಕಾರಿ ಸಮಿತಿ ಎಷ್ಟು ಅನುದಾನ ಬೇಕು? ಎಂಬ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಿದೆ. ಬಳಿಕ ನಿರ್ಣಯ ಕೈಗೊಳ್ಳಲಾಗುತ್ತದೆ' ಎಂದು ಸಿದ್ದರಾಮಯ್ಯ ಹೇಳಿದರು.

ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ
ಈ ಬಾರಿ ಯುವ ದಸರಾ ಆಚರಿಸಲಾಗುವುದು. ದಸರಾ ಉತ್ಸವದಲ್ಲಿ ದೇಶ-ವಿದೇಶಗಳ ಗಣ್ಯರು ಭಾಗವಹಿಸುವುದರಿಂದ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮಗಳ ಬಗ್ಗೆ ಕಾರ್ಯಕಾರಿ ಸಮಿತಿ ತೀರ್ಮಾನ ಕೈಗೊಳ್ಳಲಾಗಿದೆ.

ಕಳೆದ ವರ್ಷವೂ ಗೊಂದಲ ಉಂಟಾಗಿತ್ತು
2015ರಲ್ಲಿಯೂ ದಸರಾ ಆಚರಣೆ ಬಗ್ಗೆ ಗೊಂದಲ ಉಂಟಾಗಿತ್ತು. ಮೊದಲು ಅಕ್ಟೋಬರ್ 14ರಂದು ದಸರಾ ಉದ್ಘಾಟನೆಯಾಗಲಿದ್ದು, 23ಕ್ಕೆ ಜಂಬೂಸವಾರಿ ನಡೆಯಲಿದೆ ಎಂದು ದಿನಾಂಕ ನಿಗದಿಯಾಗಿತ್ತು. ಆದರೆ, ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಅ.23ರಂದು ಏಕಾದಶಿ ಇರುವುದರಿಂದ ದಿನಾಂಕ ಬದಲಾವಣೆ ಮಾಡಲಾಗಿತ್ತು. ಅ.22ರಂದು ಜಂಬೂ ಸವಾರಿ ನಡೆದಿತ್ತು.

ಎಲ್ಲಾ ಜಿಲ್ಲೆಗಳಿಗೆ ಭಾಗವಹಿಸಲು ಸೂಚನೆ
ದಸರಾ ವಸ್ತು ಪ್ರದರ್ಶನ ಮತ್ತು ದಸರಾ ಉದ್ಘಾಟನೆ ಒಂದೇ ದಿನ ನೆರವೇರಿದರೂ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಲ್ಲಿ ಬಹುತೇಕ ಮಳಿಗೆಗಳು ಖಾಲಿ ಇರುತ್ತಿದ್ದವು. ದಸರಾ ಮುಗಿದರೂ ಅವು ಭರ್ತಿ ಆಗುತ್ತಿರಲಿಲ್ಲ. ಈ ಬಾರಿ ಉದ್ಘಾಟನೆ ದಿನವೇ ಎಲ್ಲ ಇಲಾಖೆಗಳ ಮಳಿಗೆಗಳೂ ಭರ್ತಿ ಆಗಿರಬೇಕು ಎಂದು ಸೂಚಿಸಲಾಗಿದೆ. ಎಲ್ಲಾ ಜಿಲ್ಲೆಗಳ ಮಳಿಗೆಗಳನ್ನು ತೆರೆಯಲು ಜಿಲ್ಲಾ ಪಂಚಾಯಿತಿಗಳಿಗೆ ನಿರ್ದೇಶನ ನೀಡಲು ತೀರ್ಮಾನಿಸಲಾಗಿದೆ.

ಸಚಿನ್ಗಿಂತ ಉತ್ತಮರು ಇಲ್ವಾ?
ಸಚಿನ್ ಅವರನ್ನು ದಸರಾ ಉದ್ಘಾಟನೆಗೆ ಕರೆಸುವ ಅಗತ್ಯವಿಲ್ಲ ಎಂದು ನಮ್ಮ ಓದುಗ M DASHARATHA ಅಭಿಪ್ರಾಯಪಟ್ಟಿದ್ದಾರೆ. 'ಯಾಕೆ ? ಕರ್ನಾಟಕದಲ್ಲಿ ಸಚಿನ್ನಗಿಂತ ಉತ್ತಮರು, ಕರ್ನಾಟಕದ ಚಿಂತಕರು, ವಯಸ್ಸಾದ ಉತ್ತಮ ಕವಿಗಳು ಇಲ್ಲವೇ ? ಕರ್ನಾಟಕದಲ್ಲಿ ಇಲ್ಲದ ಉತ್ತಮರು ಪಕ್ಕದ ರಾಜ್ಯದಲ್ಲಿ ಇದ್ದಾರಾ? ಈ ತರ ಯೋಚನೆ ಯಾರು ನೀಮ್ಮ ತಲೆಗಳಿಗೆ ತುಂಬಿದರು ?' ಎಂದು ಪ್ರಶ್ನಿಸಿದ್ದಾರೆ.












Click it and Unblock the Notifications