ಮೈಸೂರು ನ್ಯಾಯಾಲಯದಲ್ಲಿ ಸ್ಫೋಟ, ಆರೋಪಿಗೆ ಕ್ಷಮಾದಾನ
ಬೆಂಗಳೂರು, ಡಿಸೆಂಬರ್ 09 : ಮೈಸೂರು ನ್ಯಾಯಾಲಯದ ಆವರಣದಲ್ಲಿ ನಡೆದ ಸ್ಫೋಟ ಪ್ರಕರಣದ ಆರೋಪಿ ಮೊಹಮದ್ ಅಯೂಬ್ಗೆ ಆರೋಪಿ ಸ್ಥಾನದಿಂದ ಹೊರಗುಳಿಯಲು ಕರ್ನಾಟಕ ಹೈಕೋರ್ಟ್ ಕ್ಷಮಾದಾನ ನೀಡಿದೆ.
ಆರೋಪಿ ಮೊಹಮದ್ ಅಯೂಬ್ ವಿಚಾರಣಾ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಲು (ಅಪ್ರೂವರ್) ಕಾರಣ ಹೈಕೋರ್ಟ್ ಆತನಿಗೆ ಆರೋಪಿ ಸ್ಥಾನದಿಂದ ಹೊರಗುಳಿಯಲು ಕ್ಷಮಾದಾನ ನೀಡಲಾಗಿದೆ.
ಅಯೂಬ್ ಮೊದಲು ಕ್ಷಮಾದಾನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಎನ್ಐಎ ವಿಶೇಷ ಕೋರ್ಟ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಎನ್ಐಎ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.

ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಹಾಗೂ ನ್ಯಾಯಮೂರ್ತಿ ಕೆ.ಸೋಮಶೇಖರ್ ಅವರಿದ್ದ ನ್ಯಾಯಪೀಠ ಎನ್ಐಎ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಪುರಸ್ಕರಿಸಿ ಕ್ಷಮಾದಾನ ನೀಡಲು ಒಪ್ಪಿಗೆ ನೀಡಿದೆ.
ಎನ್ಐಎ ಪರವಾಗಿ ವಾದ ಮಂಡಿಸಿದ ವಕೀಲ ಪಿ.ಪ್ರಸನ್ನ ಕುಮಾರ್ ಅವರು, 'ಪ್ರಕರಣದ ಇತರ ಆರೋಪಿಗಳು ನನ್ನ ಮನೆಯಲ್ಲಿ ಬಾಂಬ್ ತಯಾರಿಸಿದ್ದರು ಎಂಬುದನ್ನು ಮೊಹಮದ್ ಅಯೂಬ್ ಒಪ್ಪಿಕೊಂಡಿದ್ದಾನೆ. ಅಂತೆಯೇ ಬಾಂಬ್ ಸ್ಫೋಟಗೊಂಡ ನಂತರ ಬೇಸ್ ಮೂವ್ಮೆಂಟ್ ಘಟನೆಯ ಹೊಣೆ ಹೊತ್ತುಕೊಂಡಿದೆ ಎಂಬುದನ್ನು ಈತ ತನ್ನ ಮೊಬೈಲ್ ಪೋನ್ನಿಂದ ಬಹಿರಂಗಪಡಿಸಿದ್ದಾನೆ' ಎಂದರು.
'ವಿಚಾರಣಾ ನ್ಯಾಯಾಲಯದಲ್ಲಿ ಇದನ್ನು ಒಪ್ಪಿಕೊಳ್ಳಲು ಸಿದ್ಧವಿರುವುದಾಗಿ ಆತ ಹೇಳಿರುವ ಕಾರಣ ಕ್ಷಮಾದಾನ ನೀಡಬೇಕು. ಒಂದು ವೇಳೆ ಪ್ರತಿಕೂಲ ಹೇಳಿಕೆ ನೀಡಿದರೆ ಆತನನ್ನು ಮತ್ತೆ ಆರೋಪಿ ಸ್ಥಾನದಲ್ಲಿ ಇರಿಸಿ ವಿಚಾರಣೆ ನಡೆಸಬೇಕು' ಎಂದು ವಾದಿಸಿದರು.
ಪ್ರಕರಣವೇನು? : 2016ರ ಆಗಸ್ಟ್ 1ರಂದು ಮೈಸೂರು ನ್ಯಾಯಾಲಯದ ಸಾರ್ವಜನಿಕ ಶೌಚಾಲಯದಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಕುರಿತು ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೆ.20ರಂದು ಎನ್ಐಎ ಪ್ರಕರಣದ ತನಿಖೆಯನ್ನು ಆರಂಭಿಸಿತ್ತು.












Click it and Unblock the Notifications