ತುಷಾರ್ ಬಲಿಯಾಗಿದ್ದು ಬ್ಲ್ಯೂವ್ಹೇಲಿಗಲ್ಲ! ನಿಗೂಢವಾಗಿದೆ ಆತ್ಮಹತ್ಯೆಯ ಕಾರಣ
ಮೈಸೂರು, ಸೆಪ್ಟೆಂಬರ್ 12 : ಡೆಡ್ಲಿ ಬ್ಲ್ಯೂ ವೇಲ್ ಗೇಮ್ ಗೆ ಮೈಸೂರಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಬಲಿಯಾಗಿದ್ದಾನೆಂಬ ಸುದ್ದಿಯನ್ನು ಮೃತನ ಪೋಷಕರು ಅಲ್ಲಗಳೆದಿದ್ದಾರೆ.
ಮೈಸೂರಿನ ಮೇಟಗಳ್ಳಿ ಬಡಾವಣೆಯ ನಿವಾಸಿ ಪ್ರಸನ್ನ ಹಾಗೂ ಪ್ರತಿಮಾ ದಂಪತಿಯ ಪುತ್ರ ತುಷಾರ್ ಸೆ.4 ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಹೆಬ್ಬಾಳದ ದೀಕ್ಷಾ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ ತುಷಾರ್ ಹಠ ಮಾಡಿ ಮೊಬೈಲ್ ಪಡೆದಿದ್ದ. ಮೊಬೈಲ್ ಪಡೆದ ಕಾರಣಕ್ಕೆ ಈತ ಬ್ಲೂವ್ಹೇಲ್ ಗೇಮ್ ಗೆ ಬಲಿಯಾಗಿದ್ದಾನೆ ಎಂದು ಹೇಳಲಾಗುತ್ತಿತ್ತು. ಸೋಮವಾರ ಅಂದರೆ ಸೆಪ್ಟೆಂಬರ್ 4ರಂದು ಸಂಜೆ ಕಾಲೇಜು ಮುಗಿಸಿ ಎಂದಿನಂತೆ ಮನೆಗೆ ಬಂದು ತುಷಾರ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಇಷ್ಟಾದರೂ ತಂದೆ-ತಾಯಿ ಮಾತ್ರ ಮಗ ಸತ್ತಿದ್ದೇಕೆ ಎಂಬ ಸತ್ಯವನ್ನು ಈ ತನಕ ಹೊರಹಾಕಿಲ್ಲ. ಆದರೆ ಆತನ ಮೊಬೈಲ್ನಲ್ಲಿ ಬ್ಲೂ ವ್ಹೇಲ್ ಗೇಮ್ ಆಪ್ಸ್ ಇದ್ದದ್ದು ಖಚಿತವಾಗಿದ್ದರೂ ಪೋಷಕರು ಪೊಲೀಸರಿಗೆ ಈ ಬಗ್ಗೆ ದೂರು ನೀಡಿಲ್ಲ. ಹೆಬ್ಬಾಳ ಪೊಲೀಸರಿಗೆ ಆತ್ಮಹತ್ಯೆ ವಿಷಯ ಗೊತ್ತಾಗಿದ್ದರೂ ಹೆಚ್ಚಿನ ತನಿಖೆ ಮಾಡದೆ, ಮರಣೋತ್ತರ ಪರೀಕ್ಷೆಯನ್ನೂ ಮಾಡಿಸದೆ ಸುಮ್ಮನಾಗಿದ್ದಾರೆ. ಪೋಷಕರು ಮಗ ಆತ್ಮಹತ್ಯೆ ಮಾಡಿಕೊಂಡ ದಿನ ಲಿಖಿತ ಹೇಳಿಕೆ ನೀಡಿದ್ದರೂ ಅದರಲ್ಲಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಅವರನ್ನು ಪ್ರಶ್ನೆ ಮಾಡಿದರೆ, ಮಗ ಏತಕ್ಕಾಗಿ ಸತ್ತ ಅನ್ನೋದು ನಮಗೆ ಗೊತ್ತಿಲ್ಲ. ಅವನಿಗೆ ಯಾವುದೇ ಸಮಸ್ಯೆ ಇರಲಿಲ್ಲ ಅಂತಾರೆ. ಬ್ಲೂ ವ್ಹೇಲ್ ಗೇಮ್ಗೆ ಬಲಿಯಾಗಿದ್ದಾನೆ ಎಂಬುದನ್ನೂ ಅವರು ಒಪ್ಪುತ್ತಿಲ್ಲ.
ನೆರೆಹೊರೆಯವರು, ಸ್ನೇಹಿತರೆಲ್ಲರ ಬಾಯಲ್ಲಿ ಈತನ ಸಾವಿಗೆ ಬ್ಲೂವ್ಹೇಲ್ ಗೇಮ್ ಕಾರಣ ಎಂಬ ದಟ್ಟ ಚರ್ಚೆಯಂತೂ ವಾರದಿಂದ ನಿರಂತರವಾಗಿ ನಡೆಯುತ್ತಲೇ ಇದೆ. ತುಷಾರ್ ನಮ್ಮ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿ. ಕ್ರೀಡಾ ಚಟುವಟಿಕೆಗಳಲ್ಲಿ ಯಾವತ್ತೂ ಮುಂದಿದ್ದ. ಆತನ ಆತ್ಮಹತ್ಯೆ ನಮಗೂ ದಿಗ್ಭ್ರಮೆ ಮೂಡಿಸಿದೆ. ಬ್ಲೂ ವೇಲ್ ಗೇಮ್ಗೆ ಬಲಿಯಾಗುರುವುದು ಸತ್ಯವೋ ಸುಳ್ಳೊ ಎಂಬುದು ನಮಗೂ ತಿಳಿದಿಲ್ಲ ಎಂನ್ನುತ್ತಾರೆ ಕಾಲೇಜಿನ ಪ್ರಾಚಾರ್ಯರು. ಒಟ್ಟಿನಲ್ಲಿ ಪ್ರಕರಣ ದಾಖಲಿಸಿಕೊಂದಿರುವ ಹೆಬ್ಬಾಳ ಪೊಲೀಸರಿಗೂ ತುಷಾರ್ ಸಾವು ನಿಗೂಢವೆನ್ನಿಸಿದೆ.












Click it and Unblock the Notifications