ಮೈಸೂರು ಜಿಲ್ಲೆಗೂ ಶ್ರೀ ಶಿವಕುಮಾರ ಸ್ವಾಮೀಜಿಗೂ ಅವಿನಾಭಾವ ಸಂಬಂಧ
ಮೈಸೂರು, ಜನವರಿ 22: ಶಿವಕುಮಾರ ಸ್ವಾಮೀಜಿಗೂ ಮೈಸೂರು ಭಾಗದ ಜನರಿಗೂ ಎಲ್ಲಿಲ್ಲದ ನಂಟು. ಅದರಲ್ಲೂ ಸುತ್ತೂರು ಮಠಕ್ಕೂ ಸಿದ್ಧಗಂಗಾ ಮಠಕ್ಕೂ ಅವಿನಾಭಾವ ಸಂಬಂಧ.
ಸಿದ್ಧಗಂಗಾ ಮಠದ ಅಪಾರ ಭಕ್ತರು, ಅಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಮೈಸೂರಿನಲ್ಲಿ ನೆಲೆಸಿದ್ದಾರೆ. ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೆಲ್ಲಾ ಸೇರಿ ಸಿದ್ಧಗಂಗಾ ಮಠದ ಹಿರಿಯ ವಿದ್ಯಾರ್ಥಿಗಳು ಮತ್ತು ಹಿತೈಶಿಗಳು ಎಂಬ ಸಂಘ ಕೂಡ ಕಟ್ಟಿಕೊಂಡಿದ್ದಾರೆ.
ಸ್ವಾಮೀಜಿ ಜನ್ಮದಿನದಂದು ಶಿವರಾತ್ರೀಶ್ವರ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕಾರ್ಯಕ್ರಮ ನಡೆಸುತ್ತಾರೆ. ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯ ವೃತ್ತವೊಂದಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡಲಾಗಿದೆ. ವಿಶೇಷವಾಗಿ 2008ರಲ್ಲಿ ದಸರಾ ಮಹೋತ್ಸವವನ್ನು ಸಿದ್ಧಗಂಗಾ ಶ್ರೀ ಉದ್ಘಾಟಿಸಿದ್ದರು.
ಸುತ್ತೂರು ಮಠದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸ್ವಾಮೀಜಿ ಹಲವಾರು ಬಾರಿ ಮೈಸೂರಿಗೆ ಭೇಟಿ ನೀಡಿದ್ದರು. ಸುತ್ತೂರು ಮಠದ ಸ್ವಾಮೀಜಿ ಕೂಡ ಸಿದ್ಧಗಂಗಾ ಮಠಕ್ಕೆ ತೆರಳುತ್ತಿರುತ್ತಾರೆ. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಈ ಎರಡೂ ಮಠಗಳ ದಾಸೋಹ ಕ್ರಾಂತಿ ಗ್ರಾಮೀಣ ಯುವಜನತೆಯ ಬದುಕಿನ ದಿಕ್ಕನ್ನೇ ಬದಲಾಯಿಸಿದೆ. ಎಲ್ಲರಿಗೂ ಜ್ಞಾನದ ಹೆಬ್ಬಾಗಿಲು ತೆರೆಸಿದೆ. ಮುಂದೆ ಓದಿ...

ಶ್ರೀಮಂತ ಹೃದಯ ಭಕ್ತರಿದ್ದಾರೆ
ಹಿರಿಯ ಜಗದ್ಗುರು ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಕಾಲದಿಂದಲೂ ಸುತ್ತೂರು ಮಹಾಸಂಸ್ಥಾನವು ಸಿದ್ಧಗಂಗಾ ಶ್ರೀ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. ಆ ಸಂಬಂಧ ಹಾಗೆಯೇ ಮುಂದುವರೆದಿದೆ. ಶಿವಕುಮಾರ ಸ್ವಾಮೀಜಿ ರಾಜೇಂದ್ರ ಸ್ವಾಮೀಜಿಗಿಂತ 10 ವರ್ಷ ಹಿರಿಯರು. ಇವರಿಬ್ಬರೂ ತಮ್ಮ ಕಾರ್ಯಕ್ಷೇತ್ರವನ್ನು ಜ್ಞಾನಾನ್ನ ದಾಸೋಹಕ್ಕೆ ವಿಸ್ತರಿಸಿದರು. ಎರಡೂ ಮಠಗಳಿಗೆ ಶ್ರೀಮಂತ ಹೃದಯ ಭಕ್ತರಿದ್ದಾರೆ ಎಂದು ಹೇಳುತ್ತಾರೆ ಮೈಸೂರು ವಿ.ವಿ ಬಸವೇಶ್ವರ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಚಂದ್ರಶೇಖರಯ್ಯ.

ಶಿವಕುಮಾರ ಸ್ವಾಮೀಜಿಯಿಂದ ಆಶೀರ್ವಾದ
ಶಿವಕುಮಾರ ಸ್ವಾಮೀಜಿಯಿಂದ ಮೈಸೂರು ಸಂಸ್ಥಾನದ ಮೂರು ತಲೆಮಾರಿನ ರಾಜರು ಆಶೀರ್ವಾದ ಪಡೆದಿದ್ದರು. ಎರಡೂ ಮಠಗಳದ್ದು ಒಂದೇ ಗುರಿ, ಒಂದೇ ಮನಸ್ಸು. ವಿದ್ಯೆ, ವಸತಿ, ಊಟ ನೀಡುತ್ತಿವೆ. ಸಿದ್ಧಗಂಗಾ ಶ್ರೀ ಸುತ್ತೂರು ಜಾತ್ರೆ, ಸಭೆ, ಸಮಾರಂಭಗಳಿಗೆ ಭೇಟಿ ನೀಡುತ್ತಲೇ ಇದ್ದರು ಎಂದು ಸುತ್ತೂರು ಮಠದ ಹಿರಿಕರು ತಿಳಿಸುತ್ತಾರೆ.

ಭಾರತ ರತ್ನ ನೀಡುವಂತೆ ಪತ್ರ ಚಳವಳಿ
ಸಿದ್ಧಗಂಗಾ ಶ್ರೀಗಳು ಚಿಕಿತ್ಸೆ ಪಡೆಯುತ್ತಿದ್ದಾಗ ಮೈಸೂರಿನ ವಿವಿಧ ದೇಗುಲಗಳಲ್ಲಿ ಭಕ್ತರು, ಹಿತೈಶಿಗಳು, ವಿದ್ಯಾರ್ಥಿಗಳು ಪ್ರಾರ್ಥಿಸಿದ್ದರು. ಅವರು ಲಿಂಗೈಕ್ಯರಾದ ಬಳಿಕ ವಿವಿಧ ಬಡಾವಣೆಗಳಲ್ಲಿ ಭಾವಚಿತ್ರ ಇರಿಸಿ ಪೂಜೆ ಸಲ್ಲಿಸಿ ಭಾವುಕರಾದರು, ಶ್ರದ್ಧಾಂಜಲಿ ಸಲ್ಲಿಸಿದರು. ಅಲ್ಲದೇ, ಭಾರತ ರತ್ನ ನೀಡುವಂತೆ ಹಲವು ಸಂಘ ಸಂಸ್ಥೆಗಳು ಪತ್ರ ಚಳವಳಿ ನಡೆಸಿವೆ.

ಮಠದ ಶಿಷ್ಯರು ಮೆಲುಕು ಹಾಕುತ್ತಾರೆ
ಮೈಸೂರಿನಲ್ಲಿರುವ ಮಠದ ಶಿಷ್ಯರು ವಿವಿಧ ಕಾರ್ಯಕ್ರಮ ಆಯೋಜಿಸಿ ಆಹ್ವಾನ ನೀಡಿದಾಗ ಸ್ವಾಮೀಜಿ ಬಂದು ಆಶೀರ್ವದಿಸಿದ್ದಾರೆ. ಈ ನೆನಪುಗಳನ್ನು ಮಠದ ಶಿಷ್ಯರು ಮೆಲುಕು ಹಾಕುತ್ತಾರೆ. ರಾಮಕೃಷ್ಣ ವೃತ್ತದ ಬಳಿ ನನ್ನ ಮನೆ ಇದೆ. ಮನೆಯ ಪೂಜಾ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಶ್ರೀಗಳು ಬಂದಿದ್ದರು. ಶಿಷ್ಯರು ಕರೆದಾಗ ಇಲ್ಲ ಎನ್ನುತ್ತಿರಲಿಲ್ಲ ಎಂದು ಭಾವುಕರಾಗುತ್ತಾರೆ.












Click it and Unblock the Notifications