ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ; 75 ಕೋಟಿ ಅನುದಾನ ಮಂಜೂರು
ಮೈಸೂರು, ಸೆಪ್ಟೆಂಬರ್ 28; ಕರ್ನಾಟಕ ಸರ್ಕಾರ ಮೈಸೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಯೋಜನೆ ಭೂ ಸ್ವಾಧೀನಕ್ಕಾಗಿ 75 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. 2024ರ ಜನವರಿಯಿಂದ ರನ್ ವೇ ವಿಸ್ತರಣೆ ಕಾಮಗಾರಿ ಆರಂಭವಾಗಲಿದೆ.
ರಾಜ್ಯ ಸರ್ಕಾರದ ಮೂಲಕವೇ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ ಯೋಜನೆಗೆ ಅಗತ್ಯವಿರುವ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ಬಳಿಕ ಅದನ್ನು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರ ಮಾಡಲಾಗುತ್ತದೆ.

ಮೈಸೂರು ಸಂಸದ ಪ್ರತಾಪ್ ಸಿಂಹ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳ ಜೊತೆ ಆಗಸ್ಟ್ನಲ್ಲಿ ಸಭೆ ನಡೆಸಿದ್ದರು. ಆಗ 2024ರ ಜನವರಿಯಲ್ಲಿ ಕಾಮಗಾರಿ ಆರಂಭಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದರು. ಭೂ ಸ್ವಾಧೀನ ಕಾರ್ಯ ಪೂರ್ಣಗೊಂಡರೆ ಕಾಮಗಾರಿ ಆರಂಭಿಸಲಾಗುತ್ತದೆ.
ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ; ಮೈಸೂರು ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆ ಮಾಡಬೇಕು ಎಂಬುದು ಬಹಳ ವರ್ಷಗಳ ಬೇಡಿಕೆಯಾಗಿದೆ. ಪ್ರಸ್ತುತ 1.75 ಕಿ. ಮೀ. ಉದ್ದದ ರನ್ ವೇ ಇದೆ. ಮೊದಲ ಹಂತದಲ್ಲಿ ರನ್ ವೇಯನ್ನು 2.75 ಕಿ. ಮೀ. ವಿಸ್ತರಣೆ ಮಾಡಲು ಯೋಜನೆ ರೂಪಿಸಲಾಗಿದೆ. 2ನೇ ಹಂತದಲ್ಲಿ 3.5 ಕಿ. ಮೀ.ಗಳಿಗೆ ವಿಸ್ತರಣೆ ಮಾಡಲಾಗುತ್ತದೆ.
ಮೊದಲ ಹಂತದ ರನ್ ವೇ ವಿಸ್ತರಣೆ ಯೋಜನೆಗೆ 240 ಎಕರೆ ಭೂಮಿ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ 160 ಎಕರೆ ಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ಎ320 ಮಾದರಿಯ ವಿಮಾನಗಳು ಸಹ ಇಳಿಯಲು ಅನುಕೂಲವಾಗುವಂತೆ ರನ್ ವೇ ವಿಸ್ತರಣೆ ಮಾಡಲಾಗುತ್ತದೆ.
ಸಂಸದ ಪ್ರತಾಪ್ ಸಿಂಹ ಯೋಜನೆ ಬಗ್ಗೆ ಮಾತನಾಡಿ, "2.75 ಕಿ. ಮೀ. ರನ್ ವೇ ವಿಸ್ತರಣೆಗೆ 240 ಎಕರೆ ಸರ್ಕಾರಿ ಹಾಗೂ 160 ಎಕರೆ ಖಾಸಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತದೆ. ರಾಜ್ಯ ಸರ್ಕಾರ ಇದಕ್ಕಾಗಿ 150 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಉಳಿದ 46.22 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲು 90 ಕೋಟಿ ರೂ. ಅವಶ್ಯಕತೆ ಇದೆ" ಎಂದು ಹೇಳಿದ್ದರು.
"ಶಿವಮೊಗ್ಗ ವಿಮಾನ ನಿಲ್ದಾಣದ ಮಾದರಿಯಲ್ಲಿಯೇ ಮೈಸೂರಿನಲ್ಲಿಯೂ 3.5 ಕಿ. ಮೀ. ರನ್ ವೇ ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕವಾಗಿ 91 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಕೆಐಎಡಿಬಿಗೆ ಪ್ರಸ್ತಾವನೆ ಕಳಿಸಲಾಗುತ್ತದೆ" ಎಂದು ಸಂಸದರು ತಿಳಿಸಿದ್ದರು.
ಮೈಸೂರು ಪ್ರಸಿದ್ಧವಾದ ಪ್ರವಾಸಿ ತಾಣ. ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ. ಆದ್ದರಿಂದ ಮುಂದಿನ ಪೀಳಿಗೆಗೂ ಸಮಸ್ಯೆಯಾಗದಂತೆ ರನ್ ವೇ ವಿಸ್ತರಣೆ ಮಾಡಲಾಗುತ್ತಿದೆ. ರನ್ ವೇ ಮಾತ್ರವಲ್ಲದೇ ಟರ್ಮಿನಲ್ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಿರುವ 46 ಎಕರೆ ಭೂ ಸ್ವಾಧೀನಕ್ಕೆ ಅಗತ್ಯವಿರುವ ಅನುದಾನಕ್ಕಾಗಿ ಸಂಬಂಧಿಸಿದ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆಯಲ್ಲಿ ಕೆಳ ಸೇತುವೆ ನಿರ್ಮಾಣದ ಯೋಜನೆಯನ್ನು ಭದ್ರತಾ ಕಾರಣಗಳಿಂದಾಗಿ ಕೈ ಬಿಡಲಾಗಿತ್ತು. ಇದರ ಬದಲು ರಸ್ತೆ ಮಾರ್ಗವನ್ನು ಬದಲಾವಣೆ ಮಾಡುವ ತೀರ್ಮಾನ ಮಾಡಲಾಗಿತ್ತು. ವರ್ತುಲ ರಸ್ತೆಯಿಂದ ಮುಂದಕ್ಕೆ ತೆರಳುವಾಗ ದಳವಾಯಿ ಕೆರೆ ಬಳಿಯಿಂದ ಎಡ ತಿರುವು ತೆಗೆದುಕೊಂಡು 7 ಕಿ. ಮೀ. ಸಾಗಿ ವಿಮಾನ ನಿಲ್ದಾಣ ಬಳಿಯಿಂದ ನಂಜನಗೂಡು ಮುಖ್ಯ ರಸ್ತೆಗೆ ಸೇರುವಂತೆ ರಸ್ತೆ ನಿರ್ಮಾಣ ಮಾಡಲಾಗುತ್ತದೆ.












Click it and Unblock the Notifications