ಮೈಸೂರು: ರಿಯಲ್ ಎಸ್ಟೇಟ್ ವಂಚಕರು ಬಲೆಗೆ
ಮೈಸೂರು,ಡಿ. 24: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿವೇಶನಗಳ ಆಮಿಷವೊಡ್ಡಿ ಯಾರದೋ ಜಮೀನು ತೋರಿಸಿ ಸುಮಾರು 1.62 ಕೋಟಿ ರು.ಗಳಷ್ಟು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೇಟಗಳ್ಳಿ ಪೊಲೀಸರು ಭಾರತ್ ಗೃಹ ನಿರ್ಮಾಣ ಸಂಸ್ಥೆಯ ನಿರ್ದೇಶಕರಾದ ಶಂಕರೇಗೌಡ, ವಿಷ್ಣುಮೂರ್ತಿ, ಈಶ್ವರಚಾರಿ ಅವರನ್ನು ಮಂಗಳವಾರ ಬಂಧಿಸಿದ್ದಾರೆ.
ಮೈಸೂರಿನ ಹೆಬ್ಬಾಳ ಪ್ರದೇಶದಲ್ಲಿ ನಿವೇಶನ ನೀಡುವುದಾಗಿ ಸಾವಿರಕ್ಕೂ ಹೆಚ್ಚು ಮಂದಿಯಿಂದ 1.62 ಕೋಟಿ ರು ಸಂಗ್ರಹಿಸಿ ನಿವೇಶನ ನೀಡದೆ ವಂಚಿಸಿದ್ದಾರೆ ಎಂದು ವಂಚನೆಗೊಳಗಾದವರು ಠಾಣೆಗೆ ದೂರು ನೀಡಿದ್ದಾರೆ.
ಭಾರತ್ ಗೃಹ ನಿರ್ಮಾಣ ಸಂಸ್ಥೆಯ ಅಧ್ಯಕ್ಷ ಬೆಂಗಳೂರು ಮೂಲದ ಯೋಗಾನಂದ ಎಂಬುವರು ತನ್ನ ಸಂಸ್ಥೆಯ ನಿರ್ದೇಶಕರ ವಿರುದ್ಧ ವಂಚನೆಯ ದೂರು ನೀಡಿದ್ದಾನೆ. ಜಯಭಾರತ್ ಲ್ಯಾಂಡ್ ಡೆವಲಪರ್ಸ್ ಸಂಸ್ಥೆ ಮಾಡಿಕೊಂಡಿದ್ದ ಈತ ಮೈಸೂರಿನಿಂದ ಬೆಂಗಳೂರಿಗೆ ಬಂದು ಭಾರತ್ ಗೃಹ ನಿರ್ಮಾಣ ಸಂಸ್ಥೆ ಸ್ಥಾಪಿಸಿ ಆರೋಪಿಗಳಾದ ಮೂವರನ್ನು ನಿರ್ದೇಶಕರನ್ನಾಗಿ ನೇಮಿಸಿಕೊಂಡಿದ್ದ. ಇವರು ಭೂಮಿ ಅಭಿವೃದ್ಧಿ ಮಾಡುತ್ತೇವೆ ಎಂದು ಸಾರ್ವಜನಿಕರಿಂದ ಈವರೆಗೆ ಕೋಟ್ಯಂತರ ರೂಪಾಯಿಗಳನ್ನು ಸಂಗ್ರಹಿಸಿದ್ದಾರೆ.

ಈ ಯೋಗಾನಂದ ಮೈಸೂರಿನ ಬೆಳಗೊಳದ ಬಳಿ ಜಮೀನ್ದಾರ್ ರೊಬ್ಬರ ಸ್ನೇಹ ಬೆಳೆಸಿ ಕೆಐಎಡಿಬಿ ವಶಪಡಿಸಿಕೊಂಡಿದ್ದ ಭೂಮಿಯನ್ನು ತೋರಿಸುವಂತೆ ತಿಳಿಸಿದ್ದ. ಅದರಂತೆ ನಿರ್ದೇಶಕರು ನಿವೇಶನ ಆಕಾಂಕ್ಷಿಗಳನ್ನು ಈ ಜಮೀನಿನ ಬಳಿ ಕರೆದುಕೊಂಡು ಹೋಗಿ ಜಮೀನು ತೋರಿಸಿ ಒಬ್ಬೊಬ್ಬರಿಂದ ಮುರ್ನಾಲ್ಕು ಲಕ್ಷಗಳನ್ನು ಪಡೆದು ಸುಮಾರು ಸಾವಿರ ಜನರಿಗೆ ವಂಚಿಸಿದ್ದಾರೆ. ಬೆಳಗೊಳದ ರೈತ ಏಳು ಎಕರೆ ಜಾಗವನ್ನು ಕೆಐಎಡಿಬಿಗೆ ನೀಡಿದ್ದ. ಅದರ ಹಳೆಯ ದಾಖಲೆಗಳನ್ನು ಈ ವಂಚಕರು ನಿವೇಶನ ನೋಡಲು ಬರುವವರಿಗೆ ತೋರಿಸಿ ವಂಚಿಸುತ್ತಿದ್ದರು.
ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ನಿವೇಶನಕ್ಕೆಂದು ಹಣ ಕಟ್ಟಿದವರು ಕಂಗಾಲಾಗಿದ್ದಾರೆ. ಮೇಟಗಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.











Click it and Unblock the Notifications