ಮೈಸೂರು : ಬೆಟ್ಟದ ತಾಯಿ ನೇರ ದರ್ಶನಕ್ಕೆ ವಿಶೇಷ ಟಿಕೆಟ್
ಮೈಸೂರು,ಜು.03: ಆಷಾಢ ಶುಕ್ರವಾರಗಳಂದು ಬೆಟ್ಟದ ತಾಯಿ ಚಾಮುಂಡೇಶ್ವರಿಯನ್ನು ಕಾಣಲು ಬರುವ ಭಕ್ತಾದಿಗಳ ಅನುಕೂಲಕ್ಕಾಗಿ ಮುಜರಾಯಿ ಇಲಾಖೆ ಹಾಗೂ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಭಕ್ತಾದಿಗಳ ನೂಕು ನುಗ್ಗಲು ತಪ್ಪಿಸಲು ನೇರ ದರ್ಶನ ಕಲ್ಪಿಸುವ ವಿಶೇಷ ಟಿಕೆಟ್ ಗಳನ್ನು ನೀಡಲಾಗುತ್ತಿದೆ.
ಆಷಾಢ ಶುಕ್ರವಾರಗಳಂದು ಜುಲೈ 4, ಜುಲೈ 11, ಜುಲೈ 18 ಮತ್ತು ಜುಲೈ 25 ರಂದು ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಾರ್ಥವಾಗಿ, ಆಗಮಿಸುವ ಭಕ್ತಾದಿಗಳಿಗೆ ರು. 50/- ಗಳ ವಿಶೇಷ ಪ್ರವೇಶ ಮತ್ತು ಧರ್ಮದರ್ಶನ ವ್ಯವಸ್ಥೆಯನ್ನು ಮಾಡಲಾಗಿದೆ.
ಶ್ರೀಮಹಾಬಲೇಶ್ವರ ಸ್ವಾಮಿ ದೇವಾಲಯದ ಕಡೆಯಿಂದ ಕ್ಯೂ ಪ್ರವೇಶದ ವ್ಯವಸ್ಥೆಯನ್ನು ಮಾಡಲಾಗಿದ್ದು, ಉಳಿದ ದಿನಗಳಲ್ಲಿ ರೂ. 100/- ಗಳ ನೇರ ಪ್ರವೇಶ ಮತ್ತು ರೂ. 30/- ಗಳ ವಿಶೇಷ ಪ್ರವೇಶದ ವ್ಯವಸ್ಥೆ ಮುಂದುವರೆಯುತ್ತದೆ. ಸಾರ್ವಜನಿಕ ಭಕ್ತಾದಿಗಳು ಸಹಕರಿಸುವಂತೆ ಶ್ರೀ ಚಾಮುಂಡೇಶ್ವರಿ ದೇವಾಲಯದ ಕಾರ್ಯನಿರ್ವಾಹಕಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಷಾಢ ಶುಕ್ರವಾರಗಳಂದು ಬೆಳಿಗ್ಗೆ 9.30ರಿಂದ ನಗರ ಬಸ್ ನಿಲ್ದಾಣದಿಂದ ಹೆಚ್ಚಿನ ಬಸ್ಸುಗಳನ್ನು ದೇವಸ್ಥಾನ ಮುಚ್ಚುವವರೆಗೆ ವ್ಯವಸ್ಥೆ ಮಾಡಬೇಕು. ಹೆಲಿಪ್ಯಾಡ್ ಬಳಿಯಿಂದ ಬೆಟ್ಟಕ್ಕೆ 30 ಬಸ್ಗಳ ಸೌಲಭ್ಯ ಒದಗಿಸುವಂತೆ ಕೆಎಸ್ಆರ್ ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಮೈಸೂರು ನಗರ ಪಾಲಿಕೆ ವಿವಿಧೆಡೆ ಪೆಂಡಾಲ್, ಬ್ಯಾರಿಕೇಡ್ ಗಳನ್ನು ಹಾಕುತ್ತಿದ್ದು, ಪಾರ್ಕಿಂಗ್ ವ್ಯವಸ್ಥೆಯನ್ನು ಸರಿಪಡಿಸಲಾಗಿದೆ. ಚುನಾಯಿತ ಪ್ರತಿನಿಧಿಗಳು ಹಾಗೂ ಗಣ್ಯರಿಗೆ ವಿಐಪಿ ಪಾಸ್ ಗಳನ್ನು ನೀಡಲಾಗಿದೆ.
ಬೆಟ್ಟದಲ್ಲಿ ಅಂಬ್ಯುಲೆನ್ಸ್, ತುರ್ತು ಚಿಕಿತ್ಸಾ ಕೇಂದ್ರ ಸ್ಥಾಪಿಸಲಾಗಿದೆ. ಭಕ್ತಾದಿಗಳಿಗೆ ವಿತರಿಸುವ ಪ್ರಸಾದವನ್ನು ಆರೋಗ್ಯ ಅಧಿಕಾರಿಗಳು ಪರೀಕ್ಷಿಸಲಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಟ್ಟದ ತಪ್ಪಲಿನ ಸಸ್ಯ ಹಾಗೂ ಪ್ರಾಣಿಗಳ ರಕ್ಷಣೆಗೆ ಮುಂದಾಗಿದ್ದಾರೆ ಎಂದು ಜಿಲ್ಲಾಡಳಿತ ಪ್ರಕಟಿಸಿದೆ.
ಆಷಾಢ ಶುಕ್ರವಾರಗಳಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಉಂಟಾಗುವ ಸಂಚಾರ ದಟ್ಟಣೆ ಹಿನ್ನಲೆಯಲ್ಲಿ ಬೆಟ್ಟಕ್ಕೆ ವಾಹನಗಳ ಮಾರ್ಗಗಳನ್ನು ಬದಲಾವಣೆ ಮಾಡಿ ಸಂಚಾರಿ ಪೊಲೀಸರು ಆದೇಶ ಹೊರಡಿಸಿದ್ದಾರೆ. ನಗರ ಸಾರಿಗೆ ಬಸ್ಸುಗಳನ್ನು ಹೊರತು ಪಡಿಸಿ ಉಳಿದ ವಾಹನಗಳನ್ನು ಬೆಟ್ಟಕ್ಕೆ ಆಗಮಿಸುವುದನ್ನು ನಿರ್ಬಂಧಿಸಲಾಗಿದೆ. [ಈ ಬಗ್ಗೆ ವಿವರ ಇಲ್ಲಿದೆ]












Click it and Unblock the Notifications