ಮೈಸೂರು; ಸಂಗೀತ ವಿವಿ ನೌಕರರಿಂದ ಉಪವಾಸ ಸತ್ಯಾಗ್ರಹ
ಮೈಸೂರು, ಏಪ್ರಿಲ್ 18; ಕಳೆದ 57 ದಿನದಿಂದ ಪ್ರತಿಭಟನೆ ನಡೆಸುತ್ತಿದ್ದ ಸಂಗೀತ ವಿವಿ ನೌಕರರು ಇದೀಗ ಸರಣಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸಂಗೀತ ವಿವಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 21 ಬೋಧಕೇತರ ಸಿಬ್ಬಂದಿ ವರ್ಗದವರನ್ನು ಕೆಲಸದಿಂದ ವಜಾಗೊಳಿಸಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮುಂಭಾಗ ನಡೆಯುತ್ತಿದ್ದ ಪ್ರತಿಭಟನೆಯನ್ನು ಕುಲಪತಿಗಳಾಗಲಿ, ಸರಕಾರವಾಗಲಿ ಗಂಭೀರವಾಗಿ ಪರಿಗಣಿಸದ ಪರಿಣಾಮ ಇದೀಗ ಬೇಡಿಕೆ ಈಡೇರಿಕೆಗಾಗಿ ಸತ್ಯಾಗ್ರಹ ಆರಂಭವಾಗಿದೆ.
ಚಿಂತಕ ಕೆ. ಎಸ್. ಭಗವಾನ್ ಹಾಗೂ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟ್ಯಾಂಡ್ಲಿ ಉಪವಾಸ ಸತ್ಯಾಗ್ರಹಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಕೆ. ಎಸ್. ಭಗವಾನ್, "11 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ 21 ಮಂದಿಯನ್ನು ಏಕಾಏಕಿ ಕೆಲಸದಿಂದ ತೆಗೆದ ಪರಿಣಾಮ ಇಡೀ ಕುಟುಂಬ ಬೀದಿಗೆ ಬಿದ್ದಿದೆ" ಎಂದರು.

"ವರ್ಷದಿಂದ ಇವರಿಗೆ ಸಂಬಳವನ್ನೂ ನೀಡಿಲ್ಲ. ಹೀಗಾದರೆ ಕೌಟುಂಬಿಕ ಜೀವನವನ್ನು ನಿರ್ವಹಿಸುವುದಾದರೂ ಹೇಗೆ?. ಅಗತ್ಯವಿದ್ದಾಗ ಇವರನ್ನು ಕೆಲಸಕ್ಕೆ ನೇಮಿಸಿಕೊಂಡು ಇದೀಗ ಕೆಲಸದಿಂದ ತೆಗೆದು ಹಾಕಿದರೆ ನೌಕರರು ಎಲ್ಲಿಗೆ ಹೋಗಬೇಕೆಂದು?" ಪ್ರಶ್ನಿಸಿದರು.
ಒಡನಾಡಿ ಸ್ಟ್ಯಾಂಡ್ಲಿ ಮಾತನಾಡಿ, "ನೌಕರರು ಈಗಾಗಲೇ ಬಹಳಷ್ಟು ನೋವನ್ನು ಉಂಡಿದ್ದಾರೆ. ಅವರನ್ನು ಆಮರಣಾಂತ ಉಪಸವಾಸ ಕೂರಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ನೋವುಂಡವರೇ ನೋವುಣ್ಣುವುದೇಕೆ? ಪ್ರಗತಿಪರ ಸಂಘ- ಸಂಸ್ಥೆಗಳಲ್ಲಿ ಉತ್ತಮ ನಾಯಕರಿದ್ದಾರೆ. ನಾವೆಲ್ಲರೂ ಕೂಡ ಸರಣಿ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸಬೇಕು. ಈ ಸರಣಿ ಉಪವಾಸ ಸತ್ಯಾಗ್ರಹದ ಮೊದಲ ದಿನ ನಾನೇ ಉಪವಾಸ ಕೂರುತ್ತಿದ್ದೇನೆ" ಎಂದು ಹೇಳಿದರು.
ದಲಿತ ವೆಲ್ಫೇರ್ ಟ್ರಸ್ಟ್ನ ಶಾಂತರಾಜು, ಹೋರಾಟಗಾರರಾದ ಹೊರಳವಾಡಿ ನಂಜುಂಡಸ್ವಾಮಿ, ಜಾವೀದ್, ಕಲೀಂ, ಚಿಕ್ಕ ಅಂದಾನಿ, ಖದೀರ್ ಆಹಮದ್, ಕುಮಾರಸ್ವಾಮಿ ಹಾಗೂ ವಜಾಗೊಂಡ ಎಲ್ಲಾ ನೌಕರರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು.
ವಜಾಗೊಂಡಿರುವ ನೌಕರೆ ಮಂಜುಳಾ ಮಾತನಾಡಿ, "ಕುಲಪತಿ ಅವರು ತಮ್ಮ ಜೀವ ಭದ್ರತೆಗಾಗಿ ಪೊಲೀಸ್ ಸಹಾಯ ಪಡೆದುಕೊಂಡಿದ್ದಾರೆ. 57 ದಿನಗಳಿಂದಲೂ ನಮ್ಮ ಜೀವ ಉಳಿಕೊಳ್ಳಲು ಪ್ರತಿಭಟಿಸುತ್ತಾ ಬೀದಿಯಲ್ಲಿ ಕುಳಿತಿದ್ದೇನೆ. ನಮ್ಮ ಜೀವಕ್ಕೆ ಬೆಲೆ ಇಲ್ಲವೇ?. ಕೌಟುಂಬಿಕ ಜೀವನ ನಡೆಸಲು ಕಷ್ಟವಾಗುತ್ತಿದೆ. ಏನು ಮಾಡುವುದು?" ಎಂದರು.
ಏನಿದು ಸಮಸ್ಯೆ?: 11 ವರ್ಷದಿಂದ ಸಂಗೀತ ವಿವಿಯಲ್ಲಿ ಕೆಲಸ ಮಾಡುತ್ತಿದ್ದ 21 ಮಂದಿಯನ್ನು ಕೆಲಸದಿಂದ ಏಕಾಏಕಿ ತೆಗೆದು ಹಾಕಲಾಗಿದೆ. ವಿಶ್ವವಿದ್ಯಾಲಯದ ಕ್ರೂಡೀಕೃತ ವೇತನದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇವರಿಗೆ 10 ತಿಂಗಳಿನಿಂದ ವೇತನ ನೀಡಿಲ್ಲ.
2017ರ ನವೆಂಬರ್ನಿಂದ ಅನ್ವಯವಾಗುವಂತೆ ಇವರು ಕ್ರೂಡೀಕೃತ ವೇತನ ಪಡೆಯುತ್ತಿದ್ದರು. ಪ್ರತಿ ಆರು ತಿಂಗಳಿಗೊಮ್ಮೆ ನೇಮಕಾತಿ ನವೀಕರಣವಾಗುತ್ತಿತ್ತು. ಆದರೆ ಇದೀಗ ವಿವಿಯಲ್ಲಿ ಲಭ್ಯವಿರುವ ಅನುದಾನದಲ್ಲಿ ವೇತನ ನೀಡಲು ನಿರಾಕರಿಸಿ ನೌಕರರನ್ನು ವಜಾಗೊಳಿಸಲಾಗಿದೆ.












Click it and Unblock the Notifications