ಮೈಸೂರು ಜಿಲ್ಲೆಯಲ್ಲೂ ಮಂಗನ ಕಾಯಿಲೆಯ ಭೀತಿ:ಆತಂಕಗೊಂಡ ಜನ
ಮೈಸೂರು, ಜನವರಿ 25: ಮೈಸೂರಿನ ಎಚ್.ಡಿ.ಕೋಟೆ ಬಳಿ ವಿಚಿತ್ರ ಕಾಯಿಲೆಗೆ ಇಬ್ಬರು ಬಲಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಎಚ್.ಡಿ.ಕೋಟೆಯ ತಿಮ್ಮನ ಹೊಸಹಳ್ಳಿ ಹಾಡಿಯಲ್ಲಿ ಈ ಘಟನೆ ನಡೆದಿದ್ದು, ಮೃತಪಟ್ಟವರನ್ನು ಚಂದ್ರು (45) ಭಾಸ್ಕರ್ (34) ಎಂದು ಗುರುತಿಸಲಾಗಿದೆ. ಇದು ಮಂಗನ ಕಾಯಿಲೆ ಎಂದು ಹಾಡಿವಾಸಿಗಳು ಆತಂಕಗೊಂಡಿದ್ದರೆ, ಇತ್ತ ಮದ್ಯ ಸೇವನೆಯಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಇನ್ನೊಂದೆಡೆ ಕೇರಳದ ಮಾನಂದವಾಡಿಯಲ್ಲಿ ಇಬ್ಬರಿಗೆ ಮಂಗನ ಕಾಯಿಲೆ ಪತ್ತೆಯಾಗಿದೆ. ಈ ಇಬ್ಬರು ಕರ್ನಾಟಕದ ಮಹಿಳೆಯರನ್ನು ಮದುವೆ ಮಾಡಿಕೊಂಡಿದ್ದಾರೆ. ಇದೇ ಹಾಡಿಯ ಮಹಿಳೆಯರನ್ನು ಮದುವೆಯಾಗಿರುವ ಸುರೇಶ, ಸುರೇಶಯ್ಯ ಎಂಬ ಇಬ್ಬರಿಗೆ ಮಂಗನ ಖಾಯಿಲೆ ಇರುವುದು ಧೃಡವಾಗಿದೆ.

ಕೇರಳದ ಡಿಹೆಚ್ ಓ ರಾಜ್ಯದ ಗಡಿ ಭಾಗದ ತಾಲೂಕಿಗೆ ಭೇಟಿ ನೀಡಿದ್ದು, ತಿಮ್ಮನ ಹೊಸಳ್ಳಿಯಲ್ಲಿರುವ ಶಂಕಿತರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇನ್ನು ವಿಷಯ ತಿಳಿದ ಕೂಡಲೇ ಮೈಸೂರು ಜಿಲ್ಲಾ ಡಿಹೆಚ್ ಓ ಕೂಡ ದೌಡಾಯಿಸಿದ್ದು, 2 ರಾಜ್ಯದ ವೈದ್ಯಾಧಿಕಾರಿಗಳು, ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದಾರೆ.
ಹಾಡಿಯಲ್ಲಿ ಮೈಸೂರು ಜಿಲ್ಲಾ ವೈದ್ಯರನ್ನು ನಿಯೋಜನೆ ಮಾಡಲಾಗಿದ್ದು, ಜ್ವರ, ಆರೋಗ್ಯ ಸಮಸ್ಯೆ ಕಂಡು ಬಂದರೆ ಕೂಡಲೇ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಗಾಗಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಕಲ ರೀತಿಯ ತಯಾರಿ ಮಾಡಿಕೊಂಡಿದ್ದಾರೆ. ಇಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಮಂಗನ ಕಾಯಿಲೆ ಬಂದಿದೆ ಎಂದು ಜನರು ಭಯಗೊಂಡಿದ್ದಾರೆ. ಕೇರಳದ ಅಧಿಕಾರಿಗಳು ಬಂದ ಹಿನ್ನೆಲೆ ಮತ್ತಷ್ಟು ಆತಂಕಗೊಂಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಮಂಗನ ಕಾಯಿಲೆಯ ಭೀತಿ ಇಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಸಾರ್ವಜನಿಕರು ಅನಗತ್ಯ ಭೀತಿಗೆ ಒಳಗಾಗಬಾರದು ಎಂದೂ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಮಂಗನ ಕಾಯಿಲೆ ಮುಖ್ಯವಾಗಿ ಕಾಡಂಚಿನ ಗ್ರಾಮಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಚಿಗಟಗಳು ಈ ಕಾಯಿಲೆಯ ಪ್ರಮುಖ ವಾಹಕಗಳು. ವರುಣಾ ಸಮೀಪದ ಹಡಜನ ಗ್ರಾಮದ ಬಳಿ ಗುಡ್ಡದ ಮೇಲಿರುವ ಸರ್ವೆ ತರಬೇತಿ ಸಂಸ್ಥೆಯ ಸಮೀಪ ಕಳೆದ ವಾರ ಮಂಗವೊಂದು ಮೃತಪಟ್ಟಿತ್ತು. ಇದರಿಂದ ಆತಂಕಕ್ಕೊಳಗಾದ ಅಲ್ಲಿನ ವಿದ್ಯಾರ್ಥಿಗಳು ಆರೋಗ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಭೇಟಿ ನೀಡಿದ ಆರೋಗ್ಯ ಇಲಾಖೆಯ ಜಿಲ್ಲಾ ಸರ್ವೇಕ್ಷಣಾಧಿಕಾರಿ ನೇತೃತ್ವದ ತಂಡ ವಿದ್ಯಾರ್ಥಿಗಳನ್ನು ಪರೀಕ್ಷಿಸಿ ಮಂಗನ ಕಾಯಿಲೆ ಇಲ್ಲ ಎಂದು ದೃಢೀಕರಿಸಿತು.
ಎಲ್ಲ ಮಂಗಗಳು ಮಂಗನ ಕಾಯಿಲೆಯಿಂದಲೇ ಮೃತಪಡುವುದಿಲ್ಲ ಎಂಬ ಅರಿವು ಜನರಿಗೆ ಇರಬೇಕು. ಆದರೆ, ಮಂಗಗಳು ಅಸಹಜವಾಗಿ ಸತ್ತರೆ ಆಗ ಆರೋಗ್ಯ ಇಲಾಖೆಯ ಗಮನಕ್ಕೆ ತರಲೇಬೇಕು ಎಂಬ ಮಾಹಿತಿ ನೀಡಿದ್ದಾರೆ.












Click it and Unblock the Notifications