ವಿಶ್ವನಾಥ್ ಗೆ ಎಂಎಲ್ಸಿ ಸ್ಥಾನ; ಸಾರಾ ಮಹೇಶ್ ಹೇಳುತ್ತಿರುವುದೇನು?
ಮೈಸೂರು, ಜುಲೈ 24: ಕಲುಷಿತ ರಾಜಕೀಯ ಕ್ಷೇತ್ರ ಇನ್ನಾದರೂ ಶುದ್ಧಿಯಾಗಲು ಅವಕಾಶ ಸಿಕ್ಕಿದೆ. ಇನ್ನು ಆ ಸಾಹಿತ್ಯ ಕ್ಷೇತ್ರ ಏನಾಗುತ್ತೋ ಎಂದು ಸಾಹಿತ್ಯ ಕ್ಷೇತ್ರದಿಂದ ಪರಿಷತ್ಗೆ ಆಯ್ಕೆಯಾದ ಎಚ್.ವಿಶ್ವನಾಥ್ ಹೆಸರು ಹೇಳದೆ ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಡಿದರು.
Recommended Video
ಮೈಸೂರಿನ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ದುರಂತ ನಾಯಕನೊಬ್ಬನಿಂದ ರಾಜಕೀಯ ಕ್ಷೇತ್ರ ಕೊಚ್ಚೆಗುಂಡಿಯಾಗಿತ್ತು. ಇದೀಗ ರಾಜಕೀಯ ಕ್ಷೇತ್ರ ಬಿಟ್ಟು ಸಾಹಿತ್ಯ ಕ್ಷೇತ್ರಕ್ಕೆ ಹೋಗಿದೆ. ನಾವು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪರಿಂದ ಚಾಮುಂಡಿಗೆ ಪೂಜೆ ಮಾಡಿದ್ವಿ. ಅಂತಹ ಸಾಹಿತ್ಯ ಕ್ಷೇತ್ರಕ್ಕೆ ದುರಂತ ನಾಯಕರೊಬ್ಬರು ಬಂದಿದ್ದಾರೆ. ಆ ದೇವರೇ ಸಾಹಿತ್ಯ ಕ್ಷೇತ್ರವನ್ನು ಕಾಪಾಡಬೇಕು" ಎಂದು ಲೇವಡಿಯಾಡಿದರು.

"ಕಾಡಿ ಬೇಡಿ ಎಂಎಲ್ಸಿ ಆಗಿದ್ದೀರಿ"
"ವಿಧಾನ ಪರಿಷತ್ ಸ್ಥಾನ ಅವರು ಬಿಜೆಪಿಯಿಂದ ಪಡೆದ ಭಿಕ್ಷೆ. ಹುಣಸೂರು ಜನರ ಮರ್ಯಾದೆಯನ್ನು ಬಾಂಬೆಯಲ್ಲಿ ತೆಗೆದು ಬಂದ್ರಿ. ಕಾಡಿ ಬೇಡಿ ಅವರಿಂದ ಭಿಕ್ಷೆ ರೂಪದಲ್ಲಿ ಎಂಎಲ್ ಸಿ ಸ್ಥಾನ ಪಡೆದಿದ್ದೀರಿ. ದುರ್ಬಲರಿಗೆ ಸ್ಥಾನ ನೀಡಬೇಕು ಅಂದು ನೀವೇ ಹೀಗೆ ಮಾಡಿದ್ದು ಸರಿನಾ ಎಂದು ಟಾಂಗ್ ನೀಡಿದರು.

"ಇದು ರಾಜ್ಯ ರಾಜಕೀಯದ ದುರಂತ"
ವಿಧಾನ ಪರಿಷತ್ ಸ್ಥಾನಕ್ಕೆ ವಿಶ್ವನಾಥ್ ನೇಮಕ ಮಾಡುವುದಕ್ಕೆ ಬರಲ್ಲ. ರಾಜ್ಯಪಾಲರಿಗೆ ಕನ್ನಡವೂ, ಇಂಗ್ಲೀಷ್ ಕೂಡ ಬರಲ್ಲ. ರಾಜ್ಯಪಾಲರು ಸುಪ್ರೀಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ ಮಾಡಿದ್ದಾರೆ. ಇದು ರಾಜ್ಯದ ರಾಜಕೀಯ ದುರಂತ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ವಿಶ್ವನಾಥ್, ಪರಿಷತ್ ಸ್ಥಾನವಲ್ಲ ಮಂಡಳಿ ಅಧ್ಯಕ್ಷರಾಗಿ ಕೂಡ ಆಯ್ಕೆ ಆಗುವಂತಿಲ್ಲ. ವಿಶ್ವನಾಥ್ ನೇಮಕ ಕಾನೂನು ಬಾಹಿರ. ಅವರು ಪ್ರಮಾಣ ವಚನ ಸ್ವೀಕರಿಸುವಂತಿಲ್ಲ. ಇದು ಸಿಎಂಗೆ ಗೊತ್ತಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಯಾರಾದರೂ ತಪ್ಪು ಮಾಡಿರಲಿ. ಆದರೆ ಆತ್ಮಸಾಕ್ಷಿಗೆ ವಿರುದ್ಧವಾಗಿ ಹೇಗೆ ಪ್ರಮಾಣವಚನ ಸ್ವೀಕರಿಸುತ್ತಾರೆ ಇವರು. ಇವರಿಗೆ ಮನಸಾಕ್ಷಿ ಇದೆಯಾ ಎಂದು ಪ್ರಶ್ನಿಸಿದರು.

"ಪುಸ್ತಕ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ"
ಬಾಂಬೆ ಡೈರೀಸ್ ಪುಸ್ತಕದ ಬ್ಲಾಕ್ಮೇಲ್ನಿಂದ ಈ ಸ್ಥಾನ ಸಿಕ್ಕಿದೆ. ಹುಣಸೂರಿನಿಂದ ಬಾಂಬೆವರೆಗೆ ಹೋಗಿದ್ದ ಇವರ ಪ್ರಯಾಣದ ಫಲವೇ ಈ ಸ್ಥಾನ. ಪುಸ್ತಕ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿದ್ದಾರೆ. ಅದಕ್ಕೆ ಈ ಪರಿಷತ್ ಸ್ಥಾನ ಸಿಕ್ಕಿದೆ. ಬ್ಲಾಕ್ಮೇಲ್ಗೆ ಸಿಕ್ಕಿದ ಭಿಕ್ಷೆ ಇದು. ಈ ಬಗ್ಗೆ ನಾನು ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಪತ್ರ ಬರೆಯುತ್ತೇನೆ. ಅವರ ನಾಮನಿರ್ದೇಶನ ಸುಪ್ರೀಂ ಆದೇಶ ಉಲ್ಲಂಘನೆ ಅಂತ ಮನವರಿಕೆ ಮಾಡಿಕೊಡುತ್ತೇನೆ ಎಂದರು.

"ಇವರ ಆಯ್ಕೆಯಿಂದ ಸಾಹಿತ್ಯ ಕ್ಷೇತ್ರ ಕಲುಷಿತವಾಗಿದೆ"
ನಾನು ಎಚ್.ವಿಶ್ವನಾಥ್ ಅವರಿಗೆ ಪತ್ರ ಬರೆಯಲ್ಲ. ಅವರ ಸಹವಾಸ ನಮಗ್ಯಾಕೆ ಸ್ವಾಮಿ. ನಾನು ರಾಜ್ಯಪಾಲರು ಹಾಗೂ ಸ್ಪೀಕರ್ಗೆ ಪತ್ರ ಬರೆಯುತ್ತೇನೆ. ಸಾಹಿತ್ಯ ಕ್ಷೇತ್ರಕ್ಕೂ ನಮಗೂ ಸಂಬಂಧ ಇಲ್ಲ. ನಾವ್ಯಾಕೆ ಅವರಿಗೆ ಪತ್ರ ಬರೆಯಬೇಕು. ಆದರೆ ಆತ್ಮಸಾಕ್ಷಿ ಇದ್ರೆ ಪ್ರಮಾಣ ವಚನ ಸ್ವೀಕರಿಸಬಾರದು ಎಂದರು.
ಸಾಹಿತ್ಯ ಕ್ಷೇತ್ರದವರೆಲ್ಲ ಬೇರೆ ಕ್ಷೇತ್ರ ಹುಡುಕಿಕೊಳ್ಳಬಹುದು. ಇವರ ಆಯ್ಕೆಯಿಂದ ಸಾಹಿತ್ಯ ಕ್ಷೇತ್ರ ಕಲುಷಿತವಾಗಿದೆ. ಮೇಲ್ಮನೆಯಲ್ಲಿ ಎಂತೆಂಥ ನಾಯಕರಿದ್ದರು. ಅದು ರಾಜಕೀಯ ನಾಯಕರಿಗೆ ಪುನರ್ವಸತಿ ಆಗಿದ್ದರೂ ಪರವಾಗಿಲ್ಲ. ಇಂತಹ ನಾಯಕರಿಂದ ಮೇಲ್ಮನೆಯೂ ಕಲುಷಿತವಾಗಿಬಿಡುತ್ತೆ ಅನ್ನೋದೆ ನಮ್ಮ ಸಂಕಟ ಎಂದರು.












Click it and Unblock the Notifications