ಮೈಸೂರು ಡಿಸಿ ವರ್ಗಾವಣೆ; ಸಾ.ರಾ.ಮಹೇಶ್ ಗೆ ಶಾಸಕ ನಾಗೇಂದ್ರ ತಿರುಗೇಟು
ಮೈಸೂರು, ಸೆಪ್ಟೆಂಬರ್ 30: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಬಿ.ಶರತ್ ಅವರ ದಿಢೀರ್ ವರ್ಗಾವಣೆ ಬಗ್ಗೆ ಶಾಸಕ ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ನಾಗೇಂದ್ರ,
"ಸಾ.ರಾ. ಮಹೇಶ್ ಅಧಿಕಾರದಲ್ಲಿದ್ದಾಗ ಯಾರನ್ನೆಲ್ಲ ಹಾಕಿಸಿದ್ದರು ಅನ್ನೋದು ಗೊತ್ತು. ಅವರ ಮಾತುಗಳಿಗೆಲ್ಲ ಉತ್ತರ ನೀಡೋಕೆ ಆಗಲ್ಲ" ಎಂದಿದ್ದಾರೆ.
ಮೈಸೂರಿನಲ್ಲಿ ಇಂದು ಜಿಲ್ಲಾಧಿಕಾರಿಗಳ ವರ್ಗಾವಣೆ ವಿಚಾರ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, "ವರ್ಗಾವಣೆ ಮಾಡುವುದೆಲ್ಲ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಬೇರೆಯವರ ಒತ್ತಡಕ್ಕೆ ಮಣಿದು ವರ್ಗಾವಣೆ ಮಾಡಲು ಆಗೋದಿಲ್ಲ. ಸಾ.ರಾ. ಮಹೇಶ್ ಹೇಳುವ ರೀತಿಯಲ್ಲಿ ಯಾವುದೇ ಒತ್ತಡವಿಲ್ಲ" ಎಂದು ಸ್ಪಷ್ಟಪಡಿಸಿದರು.
ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಸಾ.ರಾ.ಮಹೇಶ್, ಕೇವಲ 29 ದಿನಗಳ ಅವಧಿಯಲ್ಲಿ ಆಂಧ್ರದ ಓರ್ವ ಹೆಣ್ಣು ಮಗಳಿಗೋಸ್ಕರ, ಕನ್ನಡಿಗ, ದಲಿತ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ. ಇದೇ ರಾಜ್ಯ ಸರ್ಕಾರದ ಅತಿದೊಡ್ಡ ಸಾಧನೆಯಾಗಿದೆ ಎಂದು ಲೇವಡಿ ಮಾಡಿದ್ದರು. ಮೈಸೂರು ದಸರಾ ಉನ್ನತ ಮಟ್ಟದ ಸಭೆ ನಡೆದ ಬಳಿಕ, ದಸರಾ ವಿಶೇಷಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯನ್ನೇ ವರ್ಗಾವಣೆ ಮಾಡಿರುವುದು ಇದೇ ಮೊದಲು. ಈ ಹಿಂದೆ ಯಾವ ಸರ್ಕಾರ ಕೂಡ ಮೈಸೂರು ದಸರಾ ವಿಶೇಷಾಧಿಕಾರಿಯಾಗಿರುವ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿರಲಿಲ್ಲ ಎಂದು ರಾಜ್ಯ ಸರ್ಕಾರದ ಆಡಳಿತ ವೈಖರಿಯ ವಿರುದ್ಧ ಶಾಸಕ ಸಾ.ರಾ ಮಹೇಶ್ ಟೀಕಾ ಪ್ರಹಾರ ನಡೆಸಿದ್ದರು.

ಇನ್ನು ದಸರಾ ಉದ್ಘಾಟಕರ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, "ನಾನು ಕಮಿಟಿಗೆ ಯಾವ ಉದ್ಘಾಟಕರ ಹೆಸರನ್ನೂ ಸೂಚಿಸಿಲ್ಲ. ಉದ್ಘಾಟಕರಾಗಿ ಡಾ.ಮಂಜುನಾಥ್ ಮತ್ತು ಡಾ. ರವಿ ಹೆಸರನ್ನು ಪ್ರಸ್ತಾಪಿಸಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ತೀರ್ಮಾನ ಅಂತಿಮ ಆಗಲಿದೆ. ಈಗಾಗಲೇ ಕಮಿಟಿಗಳು ಉದ್ಘಾಟಕರ ಹೆಸರನ್ನು ಆಯಾಯ ಇಲಾಖೆಗಳ ಆಯ್ಕೆಗೆ ಬಿಟ್ಟಿವೆ. ಆಯ್ಕೆ ನಂತರ ತೀರ್ಮಾನವಾಗಲಿದೆ" ಎಂದು ಉತ್ತರಿಸಿದರು.












Click it and Unblock the Notifications