ಚಾಮುಂಡೇಶ್ವರಿ ವರ್ಧಂತಿ ಉತ್ಸವಕ್ಕೆ ಮುಷ್ಕರದ ಬಿಸಿ
ಮೈಸೂರು, ಜುಲೈ 26: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರದ ಬಿಸಿ ಚಾಮುಂಡಿಬೆಟ್ಟಕ್ಕೆ ತೆರಳುವ ಭಕ್ತರಿಗೆ ತಟ್ಟಿದೆ.ಬೆಟ್ಟದ ತಾಯಿಯ ಜನ್ಮ ದಿನೋತ್ಸವಕ್ಕೆ ರಾಜ್ಯದ ವಿವಿಧೆಡೆಗಳಿಂದ ಬರುತ್ತಿದ್ದ ಭಕ್ತರ ಅನುಕೂಲಕ್ಕಾಗಿ ಪ್ರತಿ ವರ್ಷ ಕೆಎಸ್ಸಾರ್ಟಿಸಿ ವಿಶೇಷ ಬಸ್ ವ್ಯವಸ್ಥೆ ಮಾಡುತ್ತಿತ್ತು. ಈ ಬಾರಿ ಬಸ್ ಮುಷ್ಕರದಿಂದಾಗಿ ಭಕ್ತಾದಿಗಳು ಬೆಟ್ಟ ತಲುಪುವಷ್ಟರಲ್ಲಿ ಬಸವಳಿದಿದ್ದಾರೆ.
ಪ್ರತಿ ವರ್ಷ ಆಷಾಢ ಮಾಸದ ಕೃಷ್ಣ ಪಕ್ಷದ ರೇವತಿ ನಕ್ಷತ್ರದ ದಿನವನ್ನು ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವವಾಗಿ ಆಚರಿಸಲಾಗುತ್ತಿದೆ. ಅದರಂತೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ(ಜುಲೈ 26) ಮುಂಜಾನೆ 3 ಗಂಟೆಯಿಂದಲೇ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು ದೇವಾಲಯಕ್ಕೆ ತೆರಳುವವರಿಗೆ ತೊಂದರೆಯಾಗಿದೆ.[ಭಕ್ತಿ ಭಾವದಲ್ಲಿ ತೊಯ್ದು ತೊಪ್ಪೆಯಾದ ಚಾಮುಂಡಿ ಭಕ್ತರು]

ಮುಂಜಾನೆಯಿಂದಲೇ ತುಂತುರು ಮಳೆ ಸುರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ಭಕ್ತರು ದೇವಾಲಯದತ್ತ ತೆರಳುತ್ತಿದ್ದರು. ಆದರೆ ಬಸ್ ಮುಷ್ಕರದ ಕಾರಣ ದೂರದಿಂದ ಬರುವ ಭಕ್ತರಿಗೆ ತೊಂದರೆಯಾಗಿದೆ. ಕೆಲವರು ಮೆಟ್ಟಿಲೇರಿ ದರ್ಶನಕ್ಕೆ ತೆರಳಿದರೆ ಮತ್ತೆ ಕೆಲವರು ಲಲಿತಮಹಲ್ ಬಳಿಯಿರುವ ಹೆಲಿಪ್ಯಾಡ್ಗೆ ತೆರಳಿ ಅಲ್ಲಿಂದ ಖಾಸಗಿ ಬಸ್ ಗಳಲ್ಲಿ ಬೆಟ್ಟಕ್ಕೆ ತೆರಳುತ್ತಿದ್ದಾರೆ.[ಚಾಮುಂಡಿ ಬೆಟ್ಟದಲ್ಲಿ 'ಆಪರೇಷನ್ ಚಾಮುಂಡಿ' ಯಾಕೆ?]
ದೇವರಿಗೆ ಮುಂಜಾಣೆ 3.30ಕ್ಕೆ ಅಭ್ಯಂಜನ ಮಜ್ಜನ (ಎಣ್ಣೆ ಸ್ನಾನ) ನೆರವೇರಿದ್ದು, ಬಳಿಕ ಪಂಚಾಮೃತ ಅಭಿಷೇಕ, ಏಕದಶವಾರ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಬೆಳಗ್ಗೆ 8 ಗಂಟೆ ಬಳಿಕ ಮಹಾಮಂಗಳಾರತಿ ನಡೆದಿದ್ದು, ಇದೀಗ ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಸಾರಿಗೆ ಬಸ್ುಷ್ಕರದ ಕಾರಣ ಜಿಲ್ಲಾಡಳಿತ ಭಕ್ತರ ಅನುಕೂಲಕ್ಕಾಗಿ ಸುಮಾರು 25 ಖಾಸಗಿ ಬಸ್ ಗಳ ವ್ಯವಸ್ಥೆಯನ್ನು ಮಾಡಿದೆ.
ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶವನ್ನು ನಿರ್ಬಂಧಿಸಿದ ಕಾರಣ ಖಾಸಗಿ ಬಸ್ ಗಳಲ್ಲಿ ನೂಕು ನುಗ್ಗಲು ಉಂಟಾಗಿದೆ. ಹಳ್ಳಿಗಳಿಂದ ಹಾಗೂ ನಗರದ ದೂರ ಪ್ರದೇಶಗಳಿಂದ ಬರುವ ಭಕ್ತರಿಗೆ ತೊಂದರೆಯುಂಟಾಗಿದೆ. ಕೆಲವರು ತಾವಿರುವ ಸ್ಥಳಗಳಿಂದ ಖಾಸಗಿ ಬಸ್ ವ್ಯವಸ್ಥೆಯಿರುವ ಸ್ಥಳಕ್ಕೆ ದುಬಾರಿ ಹಣ ನೀಡಿ ಆಟೋಗಳಲ್ಲಿ ತೆರಳುತ್ತಿದ್ದಾರೆ.
ರಾತ್ರಿವರೆಗೂ ಚಾಮುಂಡಿಬೆಟ್ಟಕ್ಕೆ ತೆರಳಲು ಖಾಸಗಿ ಬಸ್ ಗಳಿಗೆ ಅವಕಾಶ ನೀಡಲಾಗಿದೆ. ಆದರೆ ಇತರೆ ಪ್ರದೇಶಗಳಿಂದ ಮೈಸೂರಿಗೆ ಬರಲು ಸಾರಿಗೆ ಬಸ್ ಇಲ್ಲದ ಕಾರಣ ಭಕ್ತರಿಗೆ ತೊಂದರೆಯಾಗಿದೆ.












Click it and Unblock the Notifications