ಬಕ್ಕ ಬರಿದಾದ ಕೆಆರ್ಎಸ್, ಕೊಡಗಿನಲ್ಲಿ ಮಳೆ ಸಿಂಚನ
ಮೈಸೂರು, ಮೇ 10 : ಜೀವನಾಡಿ ಕಾವೇರಿ ನದಿಯ ಒಡಲು ದಿನದಿಂದ ದಿನಕ್ಕೆ ಬರಿದಾಗುತ್ತಿದೆ. ಇದರಿಂದ ವಿಶ್ವವಿಖ್ಯಾತ ಕೆಆರ್ ಎಸ್ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಜಲಾಶಯದ ನೀರಿನ ಮಟ್ಟ ತಳ ಸೇರುತ್ತಿದ್ದು, ಇದೀಗ 79 (ಗರಿಷ್ಠ 124.80 ಅಡಿ) ಅಡಿಗಿಳಿದಿದೆ. 74 ಅಡಿಗೆ ಕುಸಿದರೆ ಡೆಡ್ ಸ್ಟೋರೇಜ್ ಹಂತಕ್ಕೆ ಕುಸಿದಂತಾಗುತ್ತದೆ.
ಸದಾ ನೀರಿನಿಂದ ತುಂಬಿ ತುಳುಕುತ್ತಿದ್ದ ಜಲಾಶಯ ಬರಿದಾಗಿದ್ದು ಬರಗಾಲದ ಭೀಕರತೆಯನ್ನು ಸಾರಿ ಹೇಳುತ್ತಿದೆಯೇನೋ ಎಂಬಂತೆ ಗೋಚರವಾಗುತ್ತಿದೆ. ಕಾವೇರಿ ಕಣಿವೆಯಲ್ಲಿ ಉತ್ತಮವಾಗಿ ಮಳೆ ಸುರಿದರೆ ಮಾತ್ರ ಕೆಆರ್ಎಸ್ ಜಲಾಶಯ ಮೈತುಂಬಲು ಸಾಧ್ಯ. ಕಳೆದ ವರ್ಷ ಇದೇ ಸಮಯದಲ್ಲಿ ಕೃಷ್ಣರಾಜ ಸಾಗರದಲ್ಲಿ 85 ಅಡಿಯಷ್ಟು ನೀರಿತ್ತು.
ಆದರೆ ಈ ಬಾರಿ ಕೊಡಗಿನಲ್ಲೂ ವರುಣ ಮುನಿಸಿಕೊಂಡಿದ್ದಾನೆ. ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಸುರಿಯಬೇಕಾದ ಮಳೆ ಮೇ ತಿಂಗಳಿನಲ್ಲಿ ಸುರಿಯುತ್ತಿದೆ. ಕಳೆದೊಂದು ವಾರದಿಂದ ಕೊಡಗಿನ ಅಲ್ಲಲ್ಲಿ ಅಲ್ಪಸ್ವಲ್ಪ ಮಳೆ ಬೀಳುತ್ತಿದ್ದು, ಸ್ವಲ್ಪ ಮಟ್ಟಿಗೆ ಕಾವು ತಗ್ಗುವಂತೆ ಮಾಡಿದೆ ಮತ್ತು ಜನರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಆಗಿದೆ. [ಒಣಗಿದ ಕೆಆರ್ಎಸ್, ಆತಂಕದಲ್ಲಿ ಮಂಡ್ಯದ ಅನ್ನದಾತ]

ತಲಕಾವೇರಿ ಭಾಗಮಂಡಲ ಮಡಿಕೇರಿಯಲ್ಲಿ ಸ್ವಲ್ಪ ಮಳೆಯಾಗಿದೆ. ಕೊಡಗಿನಲ್ಲಿ ಯಾವ ವರ್ಷವೂ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಈ ಬಾರಿ ಬಿಸಿಲಿನಿಂದಾಗಿ ಕಾಫಿ ಗಿಡಗಳು ಒಣಗಿ ಸಾವನ್ನಪ್ಪಿದ್ದರೆ, ಮತ್ತೆ ಕೆಲವೆಡೆ ಕಾಫಿ ತೋಟಗಳಲ್ಲಿ ಫೆಬ್ರವರಿ ಮಾರ್ಚ್ನಲ್ಲಿ ಬಿಡಬೇಕಾಗಿದ್ದ ಹೂ ಈಗ ಅರಳಿದೆ.
ಇಷ್ಟರಲ್ಲೇ ಮಳೆ ಬಾರದೆ ಹೋಗಿದ್ದರೆ ಕಾಫಿ ತೋಟಗಳು ಸರ್ವನಾಶವಾಗುವ ಸಂಭವವೇ ಹೆಚ್ಚಿತ್ತು. ಕೊಡಗಿನಲ್ಲಿ ಮಳೆಗಾಗಿ ತಲಕಾವೇರಿ, ಇಗ್ಗುತ್ತಪ್ಪ ಸೇರಿದಂತೆ ಹಲವು ದೇವಾಲಯಗಳಲ್ಲಿ ಪೂಜೆ, ಹೋಮ, ಹವನಗಳು ನಡೆಯುತ್ತಿವೆ. ಕಳೆದ ಭಾನುವಾರ ಉತ್ಸುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೂಡ ಉತ್ತಮ ಮಳೆಗಾಗಿ ಪೂಜೆ ಸಲ್ಲಿಸಿದರು. [ಸಮೃದ್ಧ ಮಳೆಗಾಗಿ ತಲಕಾವೇರಿಯಲ್ಲಿ ವಿಶೇಷ ಪೂಜೆ]
ಸಂಪೂರ್ಣವಾಗಿ ಬತ್ತಿ ಹೋಗಿದ್ದ ಕಾವೇರಿ ನದಿಯಲ್ಲಿ ಕೆಲವು ದಿನಗಳಿಂದ ಕೊಡಗಿನಲ್ಲಿ ಮಳೆ ಸುರಿಯುತ್ತಿರುವುದರಿಂದಾಗಿ ಸ್ವಲ್ಪ ಮಟ್ಟಿಗೆ ನೀರು ಕಂಡು ಬರುತ್ತಿದೆ. ಪ್ರತಿದಿನ ಮಧ್ಯಾಹ್ನದ ಬಳಿಕ ಮೋಡ ಕಾಣಿಸಿಕೊಳ್ಳುತ್ತಿದ್ದು, ಅಲ್ಲಲ್ಲಿ ಮಳೆ ಬೀಳುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯ ರಭಸ ಹೆಚ್ಚಾದರೆ ಮಾತ್ರ ಜನ ನೆಮ್ಮದಿಯುಸಿರು ಬಿಡಲು ಸಾಧ್ಯ. [ಕೆಆರ್ ಎಸ್ ಹಿನ್ನೀರಿನಲ್ಲಿ ಗತ ವರ್ಷಗಳ ದೇವಾಲಯಗಳು ಪ್ರತ್ಯಕ್ಷ!]












Click it and Unblock the Notifications