ಪುತ್ರ ಪಟ್ಟಾಭಿಷೇಕದ ಸುಳಿವು ನೀಡಿದ ಸಿಎಂ ಸಿದ್ದರಾಮಯ್ಯ
ಮೈಸೂರು, ಅ.16: ಜನರ ಬೆಂಬಲದಿಂದ ಸಿಕ್ಕಿರುವ ಅಧಿಕಾರವನ್ನು ಯಾವತ್ತೂ ಸ್ವಾರ್ಥಕ್ಕೆ ಬಳಸುವುದಿಲ್ಲ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಭಾಷಣದ ಕೊನೆಗೆ 'ವರುಣಾ ಗ್ರಾಮೀಣ ಭಾಗಗಳಲ್ಲಿ ಪುತ್ರ ರಾಕೇಶ್ ಪಕ್ಷದ ಮುಖಂಡರೊಂದಿಗೆ ಪ್ರವಾಸ ನಡೆಸಲಿದ್ದಾನೆ. ರಾಕೇಶ ಜನರ ಪ್ರೀತಿ ಗಳಿಸಿಕೊಂಡಿದ್ದರೆ ಶಾಸಕನಾಗಲಿ ಬಿಡಿ' ಎಂದೂ ಪುತ್ರನ ಪಟ್ಟಾಭಿಷೇಕದ ಸುಳಿವು ನೀಡಿದರು.
ಕುಟುಂಬ ರಾಜಕಾರಣವನ್ನು ಖಂಡತುಂಡವಾಗಿ ಸದಾ ಖಂಡಿಸುತ್ತಾ ಬಂದಿರುವ ಸಿದ್ದರಾಮಯ್ಯ ಅವರು, ತಮ್ಮ ಕ್ಷೇತ್ರದ ವ್ಯಾಪ್ತಿಗೆ ಬರುವ ಬಿಳಿಗೆರೆಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಪುತ್ರ ರಾಕೇಶ್ ಸಕ್ರಿಯ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದರು.
ಮುಖ್ಯಮಂತ್ರಿಯಾದ ಬಳಿಕ ಸ್ವಕ್ಷೇತ್ರ ವರುಣದ ಮತದಾರರಿಗೆ ಕೃತಜ್ಞತೆ ಅರ್ಪಿಸಲು ಅವರು ಮಂಗಳವಾರ ನಂಜನಗೂಡು ತಾಲೂಕು ಬಿಳಿಗೆರೆ ಗ್ರಾಮದಲ್ಲಿ ಏರ್ಪಡಿಸಿದ್ದ ಸಮಾರಂಭ ಮಾತನಾಡಿ, ಚುನಾವಣೆ ಆದ ತಕ್ಷಣ ಕ್ಷೇತ್ರದ ಜನರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದುಕೊಂಡಿದ್ದೆ. ಆದರೆ ಕೆಲಸದ ಒತ್ತಡದಿಂದ ಆಗಲಿಲ್ಲ. ರಾಜ್ಯಪಾಲರ ಭಾಷಣ, ಬಜೆಟ್ ಅಧಿವೇಶನ, ಉಪ ಚುನಾವಣೆಗಳು ಬಂದಿದ್ದರಿಂದ ಸಾಧ್ಯವಾಗಲಿಲ್ಲ ಎಂದರು.
ಸಿದ್ದರಾಮಯ್ಯ ಅವರು ಭಾಷಣ ಮಾತನಾಡುತ್ತಿದ್ದ ವೇಳೆ ವೇದಿಕೆಯೆದುರು ನಿಂತಿದ್ದ ಸ್ಥಳೀಯ ಕಾರ್ಯಕರ್ತರೊಬ್ಬರು 'ನೀವು ರಾಜಕಾರಣ ಬಿಡಬಾರದು. ಮುಂದಿನ ಚುನಾವಣೆಗೂ ನೀವೇ ನಿಲ್ಲಬೇಕು ಎಂದು ಆಗ್ರಹಪೂರ್ವಕ ಮನವಿ ಮಾಡಿದರು.
ಇದಕ್ಕೆ ತಕ್ಷಣ ಸ್ಪಂದಿಸಿದ ಸಿಎಂ ಸಿದ್ದು, ನನಗೂ ವಯಸ್ಸಾಯಿತಲ್ಲ. ಎಷ್ಟು ಕಾಲ ಅಂತ ನಾನೇ ಇರಲು ಸಾಧ್ಯ? ನಿವೃತ್ತಿಯಾಗಬೇಕಲ್ಲ ಎಂದು ಅಭಿಮಾನಿಯನ್ನು ಸಮಾಧಾನಪಡಿಸತೊಡಗಿದರು.
ಅದೇ ವೇಳೆ ಸಭೆಯಲ್ಲಿದ್ದ ಮತ್ಯಾರೋ ಹಾಗಾದರೆ ತಮ್ಮ ಪುತ್ರ ರಾಕೇಶ್ ಅವರನ್ನು ನಿಲ್ಲಿಸಿ ಎಂದು ಕೂಗಿದರು. ಇದಕ್ಕೂ ಪ್ರತಿಕ್ರಿಯಿಸಿದ ಸಿದ್ದು, ರಾಕೇಶ ನಿಮ್ಮ ಪ್ರೀತಿ ಗಳಿಸಿಕೊಂಡಿದ್ದರೆ ಶಾಸಕನಾಗಲಿ ಬಿಡಿ ಎಂದು ಹೇಳಿದರು.