ಕಬಿನಿ ಒಳಹರಿವು ಹೆಚ್ಚಳ: ನೀರನ್ನು ನೋಡಲು ಹರಿದುಬಂದ ಪ್ರವಾಸಿಗರ ದಂಡು
ಮೈಸೂರು, ಜುಲೈ 10: ಹೆಚ್.ಡಿ ಕೋಟೆ ತಾಲೂಕಿನಲ್ಲಿರುವ ಕಬಿನಿ ಜಲಾಶಯದಲ್ಲಿ ತಿಂಗಳ ಅವಧಿಯಲ್ಲಿ 4ನೇ ಬಾರಿ ಒಳ ಹರಿವಿನಲ್ಲಿ ಹೆಚ್ಚಳವಾಗಿದ್ದು, ತಮಿಳುನಾಡಿಗೆ ಭಾರಿ ಪ್ರಮಾಣದ ನೀರನ್ನು ಹರಿಸಲಾಗುತ್ತಿದೆ. ಇಲ್ಲಿಯವರೆಗೆ ಒಟ್ಟು 21 ಟಿಎಂಸಿ ನೀರು ಬಿಡಲಾಗಿದೆ.
ಕಳೆದ ಜೂನ್ ತಿಂಗಳ ಪ್ರಾರಂಭದಲ್ಲಿ ಕಬಿನಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿ, ಮೊದಲ ಬಾರಿಗೆ ಭರ್ತಿ ಆಗುತ್ತಿದ್ದಂತೆ ಅಂದು ನದಿಗೆ ಬಿಡಲಾಗಿತ್ತು. ಅಲ್ಲಿಂದ ಈವರೆಗೆ ಹಂತ ಹಂತವಾಗಿ ಭಾರೀ ಪ್ರಮಾಣದಲ್ಲಿ ನೀರು ಹರಿದುಹೋಗುತ್ತಿದೆ.
ಈ ಮೂಲಕ ಇದೇ ಮೊದಲ ಬಾರಿಗೆ ಜಲಾಶಯದ ಇತಿಹಾಸದಲ್ಲೇ ಒಂದೇ ತಿಂಗಳಲ್ಲಿ ನಾಲ್ಕು ಬಾರಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗುತ್ತಿದೆ. ತಾಲೂಕಿನ ಮತ್ತು ಕೇರಳದ ವೈನಾಡು ಪ್ರದೇಶದಲ್ಲಿ ಶುಕ್ರವಾರದಿಂದ ಮತ್ತೆ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಗಣನೀಯ ಪಮಾಣದಲ್ಲಿ ಹೆಚ್ಚಾಗಿದ್ದು, ಜಲಾಶಯದ ಹಿತದೃಷ್ಟಿಯಿಂದ ಬರುತ್ತಿರುವ ಎಲ್ಲ ಒಳಹರಿವಿನ ನೀರನ್ನು ನದಿಗೆ ಬಿಡಲಾಗುತ್ತಿದೆ.

ಜಲಾಶಯದಿಂದ 30 ಸಾವಿರ ಕ್ಯೂಸೆಕ್ಸ್ ನೀರನ್ನು ಕ್ರಸ್ಟ್ ಗೇಟ್ ಗಳ ಮೂಲಕ ಹೊರಕ್ಕೆ ಬಿಡಲಾಗುತ್ತಿದೆ. ಕಳೆದ ಶನಿವಾರ, ಭಾನುವಾರ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಒಳಹರಿವಿನ ಪ್ರಮಾಣ ದಿಢೀರ್ ಕುಸಿತ ಕಂಡು ಜಲಾಶಯದಿಂದ ಹೋಗುತ್ತಿದ್ದ ಭಾರೀ ಪ್ರಮಾಣದ ನೀರನ್ನು ಸ್ಥಗಿತಗೊಳಿಸಲಾಗಿತ್ತು.
ಆದರೆ, ಶನಿವಾರ 4ನೇ ಬಾರಿ ಬೆಳಗ್ಗೆಯಿಂದ ನದಿಗೆ ನೀರು ಬಿಡಲಾಗುತ್ತಿದೆ. ಈ ಮೂಲಕ ಇಲ್ಲಿಯವರೆಗೆ ತಮಿಳುನಾಡಿಗೆ ಒಟ್ಟು 21 ಟಿಎಂಸಿ ನೀರು ಹರಿದು ಹೋಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಳೆದ ಒಂದು ತಿಂಗಳಿನಿಂದ ಪ್ರವಾಸಿಗರಿಗೆ ಜಲಾಶಯದಿಂದ ಹೊರಬಿಡುವ ಭಾರೀ ಪ್ರಮಾಣದ ನೀರಿನ ದೃಶ್ಯ ವೀಕ್ಷಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈ ಬಾರಿ ಉತ್ತಮ ಮಳೆಯಿಂದಾಗಿ ಜಲಾಶಯದಿಂದ ಹೊರಹೋಗುವ ನೀರಿನ ದೃಶ್ಯ ಕಣ್ತುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಜಲಾಶಯದ ಭದ್ರತೆಗಾಗಿ ಅಳವಡಿಸಿರುವ ಪೊಲೀಸ್ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಿ ಬಂದೋಬಸ್ತ್ ಏರ್ಪಡಿಸಬೇಕಾಗಿದೆ.











Click it and Unblock the Notifications