ಮೈಸೂರು: ಕಿವುಡರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ
ಮೈಸೂರು, ಮಾರ್ಚ್ 6 : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಿನ ಬಜೆಟ್ ನಲ್ಲಿ ಕಿವುಡರಿಗಾಗಿ ಮೀಸಲಾತಿ ಹಾಗೂ ಅವರ ಅಭಿವೃದ್ಧಿಗಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಿವುಡರ ಕಲ್ಯಾಣ ಸಂಘದ ಅಧ್ಯಕ್ಷ ಕೆ.ಹೆಚ್ ಶಂಕರ್ ಅವರ ನೇತೃತ್ವದಲ್ಲಿ ಸೋಮವಾರ ಬೃಹತ್ ಪ್ರತಿಭಟನಾ ಪಾದಯಾತ್ರೆ ನಡೆಯಿತು.
ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ಮಾಡಿ ಜಿಲ್ಲಾಧಿಕಾರಿಗಳಿಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರ ಸಲ್ಲಿಸಿದರು.
ಕಿವುಡ ವ್ಯಕ್ತಿಗಳಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದು ಹಾಗೂ ವಂಚನೆಯನ್ನು ತಡೆಗಟ್ಟುವುದು, ಶೇ.75 ಡೆಸಿಬಲ್ ಕಿವುಡುತನವನ್ನು ಹೊಂದಿದವರಿಗೆ ಮಾತ್ರ ಮೀಸಲಾತಿ ನೀಡಬೇಕು.

ಶ್ರವಣಮಾಂದ್ಯ ಕ್ರೀಡಾಕೂಟಕ್ಕೆ ಹಾಗೂ ಕ್ರೀಡಾಪಟುಗಳಿಗೆ ಸಹಾಯಧನ ನೀಡುವುದು. ಅಂಗವಿಕಲ ದಂಪತಿಗಳಿಗೆ ನೀಡಲಾಗುತ್ತಿರುವ ವಿವಾಹ ಪ್ರೋತ್ಸಾಹ ಧನವನ್ನು ಕಿವುಡ ದಂಪತಿಗಳಿಗೂ ವಿಸ್ತರಿಸುವುದು. ಕಿವುಡರ ಶಾಲೆಗಳಲ್ಲಿ ಶಿಕ್ಷಕರಿಗೆ ಸಂಜ್ಞಾ (ಸನ್ನೆ) ಭಾಷೆಯಲ್ಲಿ ಶಿಕ್ಷಣದ ತರಬೇತಿ ನೀಡಬೇಕು.
ಇವರಿಗೆ ನೀಡುತ್ತಿರುವ ಸಹಾಯಧನವನ್ನು 5 ಸಾವಿರ ರೂ. ಗೆ ಹೆಚ್ಚಿಸಬೇಕು. ಪತಿ-ಪತ್ನಿಯರಲ್ಲಿ ಯಾರಾದರೂ ಒಬ್ಬರು ಸರ್ಕಾರಿ ಕೆಲಸದಲ್ಲಿದ್ದರೆ ಇಬ್ಬರೂ ಒಂದೇ ಸ್ಥಳದಲ್ಲಿ ಜೀವನ ಮಾಡಲು ಅನುಕೂಲವಾಗುವಂತೆ ವರ್ಗಾವಣಾ ವ್ಯವಸ್ಥೆ ಮಾಡಬೇಕು.
ಕಿವುಡ-ಮೂಗರು ಸ್ವಂತ ಉದ್ಯೋಗವನ್ನು ಪ್ರಾರಂಭಿಸಲು ರಿಯಾಯಿತಿ ಬಡ್ಡಿ ದರದಲ್ಲಿ ಹಣಕಾಸಿನ ಸಹಾಯ ಹಾಗೂ ಸಬ್ಸಿಡಿ ಸಾಲವನ್ನು ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸದಾಶಿವ ವರದಿ ತಿರಸ್ಕರಿಸಿ ಪ್ರತಿಭಟನೆ: ಸದಾಶಿವ ವರದಿಯನ್ನು ತಿರಸ್ಕರಿಸಿ ಬಂಜಾರ ಸದ್ಗುರು ಸೇವಾಲಾಲ್ ಮಹಾರಾಜ್ ಪ್ರತಿಷ್ಠಾನದ ವತಿಯಿಂದ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತುಳಿತಕ್ಕೊಳಗಾಗಿರುವ ಬಂಜಾರ ಸಮುದಾಯಗಳಿಗೆ ಕೊಟ್ಟಿರುವ ಮೀಸಲಾತಿಯಿಂದ ಈಗ ತಾನೇ ಅಂಬೆಗಾಲಿಟ್ಟು ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಮರಣ ಶಾಸನವಾದ ಸದಾಶಿವ ಆಯೋಗವನ್ನು ತಂದು ತುಂಬಾ ಹೀನಾಯವಾಗಿ ಕಾಣುತ್ತಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.
ಬಂಜಾರ, ಲಂಬಾಣಿ, ಬೋವಿ, ಕೊರವ ಇನ್ನೂ ಹಲವಾರು ಜಾತಿಯವರು ದಯನೀಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಗುಡ್ಡಗಾಡು, ಅರಣ್ಯ ಪ್ರದೇಶದಲ್ಲಿ ಮನೆಗಳಿಲ್ಲದೇ, ಶಿಕ್ಷಣವಿಲ್ಲದೇ ಸಮಾಜದ ಕಟ್ಟಕಡೆಯ ಜನರಾಗಿ ಉಳಿದುಬಿಟ್ಟಿದ್ದಾರೆ.
ಹೊಟ್ಟೆಪಾಡಿಗಾಗಿ ಹೊರ ರಾಜ್ಯಗಳಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಿದ್ದಾರೆ. ಇದರಿಂದ ಇವರು ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಸದಾಶಿವ ವರದಿಯನ್ನು ತಿರಸ್ಕರಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.












Click it and Unblock the Notifications