ಪಂಚರತ್ನ ಯಾತ್ರೆ, ಚುನಾವಣೆಯಲ್ಲಿ ಗೆಲ್ಲುವ ಸೂತ್ರಗಳ ಬಗ್ಗೆ ಅಭ್ಯರ್ಥಿಗಳಿಗೆ ಸಲಹೆ ಕೊಟ್ಟ ಎಚ್ಡಿಕೆ
ಮೈಸೂರು, ಅಕ್ಟೋಬರ್ 19: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬುಧವಾರ ಆರಂಭವಾಗಿರುವ ಎರಡು ದಿನಗಳ ಜೆಡಿಎಸ್ ರಾಜ್ಯ ಮಟ್ಟದ ವಿಶೇಷ ಸಂಘಟನಾ ಸಮಾಲೋಚನಾ ಸಭೆ ಹಾಗೂ ಪಂಚರತ್ನ ರಥಯಾತ್ರೆಯ ಕಾರ್ಯಾಗಾರದ ಮೊದಲ ದಿನ ಕಲಾಪದಲ್ಲಿ ಹಾಲಿ ಶಾಸಕರು, ಮುಂಬರುವ ಚುನಾವಣೆಯ ಅಭ್ಯರ್ಥಿಗಳು ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರಿಗೆ ಪಾಠ ಮಾಡಿರುವ ಮಾಜಿ ಮುಖ್ಯಮಂತ್ರಿ ಮುಖ್ಯವಾಗಿ ಚುನಾವಣೆಯಲ್ಲಿ ಗೆಲ್ಲುವ ಸೂತ್ರಗಳ ಬಗ್ಗೆ ಮಹತ್ವದ ಟಿಪ್ಸ್ ಕೊಟ್ಟಿದ್ದಾರೆ.
ಬುಧವಾರ ಬೆಳಗ್ಗೆಯಿಂದಲೇ ಬಿರುಸಾಗಿ ನಡೆದ ಕಾರ್ಯಗಾರದಲ್ಲಿ ಮೊದಲು ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಸಭೆಯಲ್ಲಿ ಪಾಲ್ಗೊಂಡಿದ್ದವರೆಲ್ಲ ನೋಂದಣಿ ಮಾಡಿಕೊಂಡರು. ಹಿಂದೆ ನಡೆದಿದ್ದ ಬಿಡದಿ ಕಾರ್ಯಗಾರದಲ್ಲಿ ಸಂಭವನೀಯ ಅಭ್ಯರ್ಥಿಗಳಿಗೆ ಕೆಲ ಮಹತ್ವದ ಟಾಸ್ಕ್ಗಳನ್ನು ನೀಡಲಾಗಿತ್ತು. ಇದನ್ನು ಕೆಲವರು ಉತ್ತಮವಾಗಿ ಪೂರ್ಣ ಮಾಡಿದ್ದು, ಇನ್ನೂ ಕೆಲವರು ಉತ್ತಮವಾಗಿ ಮಾಡಬೇಕಿತ್ತು. ಈ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಕುಮಾರಸ್ವಾಮಿ ಟಾಸ್ಕ್ ಪೂರ್ಣ ಮಾಡದವರಿಗೆ ಚಾಟಿ ಬೀಸಿದರು.
Breaking; ಮೈಸೂರಲ್ಲಿ ಜೆಡಿಎಸ್ ಕಾರ್ಯಾಗಾರ, ಜಿ. ಟಿ. ದೇವೇಗೌಡ ಗೈರು!
ರಥಯಾತ್ರೆ ಸ್ವರೂಪ, ಸಾಗುವ ಮಾರ್ಗ, ಹಾದಿ ಉದ್ದಕ್ಕೂ ನಡೆಯಲಿರುವ ಜನ ಸಂಪರ್ಕ ಸಭೆಗಳು, ಯಾತ್ರೆಯ ನಂತರ ಗ್ರಾಮಸಭೆ, ಗ್ರಾಮ ವಾಸ್ತವ್ಯ ಇತ್ಯಾದಿಗಳ ಬಗ್ಗೆ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಪ್ರತಿಯೊಬ್ಬರಿಗೂ ಉದ್ಯೋಗ, ಪ್ರತಿಯೊಂದು ಕುಟುಂಬಕ್ಕೆ ಸೂರು, ಆರೋಗ್ಯ ಸೇರಿದಂತೆ ಐದು ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಲು ನವೆಂಬರ್ 1ರಂದು ಪಂಚರತ್ನ ರಥಯಾತ್ರೆ ಆರಂಭಿಸಲಾಗುತ್ತಿದೆ. ಆರು ಸಾರ್ವಜನಿಕ ಸಭೆ, ಗ್ರಾಮ ವಾಸ್ತವ್ಯ ಮಾಡಲಾಗುವುದು. ನಾಲ್ಕು ಹಂತಗಳಲ್ಲಿ ಫೆಬ್ರವರಿ ತನಕ ನಿರಂತರವಾಗಿ ರಥಯಾತ್ರೆ ನಡೆಯಲಿದೆ. ಎಂಟು ವಾಹನಗಳಲ್ಲಿ ಒಂದೊಂದು ರೀತಿಯ ಕಾರ್ಯಕ್ರಮ ಡಿಸ್ ಪ್ಲೇ ಮಾಡಲಾಗುವುದು.
ಪಕ್ಷದ ಕಾರ್ಯಕ್ರಮಗಳನ್ನು ಬಳಸದ ಶಾಸಕರ ನಡೆಗೆ ಬೇಸರ
ನಾನು ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಮುಖ್ಯಮಂತ್ರಿ ಆಗಿದ್ದಾಗ ಅತ್ಯುತ್ತಮ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಆಮೇಲೆ ಪಕ್ಷ ಸಂಘಟನೆಗಾಗಿ ಜನತಾ ಪರ್ವ, ಜನತಾ ಸಂಗಮ, ಜಲಧಾರೆ, ಜನತಾ ಮಿತ್ರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆ. ಚುನಾವಣೆ ಘೋಷಣೆ ಆಗಲಿ ನಂತರ ನೋಡೋಣ ಎಂದು ಕೆಲವರು ಸುಮ್ಮನಿದ್ದೀರಿ. ಕೆಲವರು ಬಳಸಿಕೊಂಡಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿಗಳು ಅತೃಪ್ತಿ ವ್ಯಕ್ತಪಡಿಸಿದರು.
ದೇವೇಗೌಡರು ಸ್ವಂತಕ್ಕಾಗಿ ಸ್ಥಾನಮಾನ ಬಳಸಿಕೊಂಡವರಲ್ಲ. ಜನರ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ. 123 ಸ್ಥಾನಗಳ ಗುರಿ ದಾಟಬೇಕು, ಇದು ಸಾಧ್ಯವಿದೆ. ಈ ನಿಟ್ಟಿನಲ್ಲಿ ಅವರು ಇಳಿವಯಸ್ಸಿನಲ್ಲಿಯೂ ಪಕ್ಷದ ಕೆಲಸ ಮಾಡುತ್ತಿದ್ದಾರೆ , ನಿಮಗೆಲ್ಲಾ ಅವರ ಉತ್ಸಾಹ ಸ್ಪೂರ್ತಿಯಾಗಬೇಕು ಎಂದರು.
ದೆವ್ವ ಕರೆದರೆ ಹೋಗಲು ಆಗುತ್ತಾ..?: ಸುಮಲತಾ ವಿರುದ್ಧ ರವೀಂದ್ರ ಶ್ರೀಕಂಠಯ್ಯ ಕಿಡಿ
ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ನಮ್ಮ ಹೋರಾಟದಿಂದ
ನಮ್ಮ ಹೋರಾಟದ ಪ್ರತಿಫಲದಿಂದ ಯಡಿಯೂರಪ್ಪ ಹಾಗೂ ಶ್ರೀರಾಮುಲು ಬಿಜೆಪಿ ತೊರೆದರು. ನಮ್ಮ ಹೋರಾಟದಿಂದ ಬಿಜೆಪಿ ಹೋಳಾಯಿತು. ಇದರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. 2013 ರಲ್ಲಿ ಕಾಂಗ್ರೆಸ್ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿಲ್ಲ. ಸುಲಭವಾಗಿ ಅವರು ಅಧಿಕಾರಕ್ಕೆ ಬಂದರು ಎಂದು ಅವರು ಹೇಳಿದರು.
ಭಾರತ್ ಜೋಡೋಗೆ ದಿನಕ್ಕೆ 2-3 ಕೋಟಿ ಖರ್ಚು
ಭಾರತ್ ಜೋಡೊ ಬಗ್ಗೆ ನೀವು ತಲೆ ಕೆಡಿಸಿಕೊಳ್ಳಬೇಡಿ. ಒಂದು ದಿನದ ಭಾರತ್ ಜೋಡೋಗೆ ಎರಡರಿಂದ ಮೂರು ಕೋಟಿ ವೆಚ್ಚ ಮಾಡುತ್ತಿದ್ದಾರೆ. ಬಸ್ಗಳಲ್ಲಿ ಜನರನ್ನು ಕರೆತಂದು ಭಾರತ್ ಜೋಡೋಗೆ ಸೇರಿಸುತ್ತಿದ್ದಾರೆ. ಹಾದಿ ಬೀದಿಯಲ್ಲಿ ಜನರೇ ಈ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಾಂಗ್ರೆಸ್ ಪಾದಯಾತ್ರೆಯನ್ನು ಟೀಕಿಸಿದರು.
ಮುಂದಿನ ಆರು ತಿಂಗಳು ಸತ್ವ ಪರೀಕ್ಷೆ, ಇದನ್ನು ಗಂಭೀರವಾಗಿ ಪರಿಗಣಿಸಿ. ಜನರ ಜತೆ ಸಂಪರ್ಕವೇ ಇಲ್ಲದವರು ಶಾಸಕರಾಗಿದ್ದಾರೆ. ನೀವು ಜನರ ಜೊತೆ ಸಂಪರ್ಕ ಇಟ್ಟುಕೊಂಡು, ಅವರ ಕಷ್ಟ ಸುಖಕ್ಕೆ ಸ್ಪಂದಿಸಿದರೆ ನೀವು ಶಾಸಕರಾಗಬಹುದು ಎಂದು ಅವರು ಕಿವಿಮಾತು ಹೇಳಿದರು.
ಹೊಸ ಅಭ್ಯರ್ಥಿಗಳಿಗೆ ಎಚ್ಡಿಕೆ ಪಾಠ
ಉತ್ತರ ಕರ್ನಾಟಕದಲ್ಲಿ ನೆಲೆ ಇಲ್ಲ ಎಂಬುವರಿಗೆ ತಕ್ಕ ಉತ್ತರ ಕೊಡಿ. ನೀವು ಜನಪರ ಕೆಲಸ ಮಾಡಿ, ಸದಾ ಜನ ಸಂಪರ್ಕದಲ್ಲಿದ್ದರೆ 200 ಪರ್ಸೆಂಟ್ ಜನರು ನಿಮ್ಮನ್ನು ಬೆಂಬಲಿಸುತ್ತಾರೆ. ಬಿಜೆಪಿ ಜನ ಸಂಕಲ್ಪ ಯಾತ್ರೆ, ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯಲ್ಲಿ ಜನರಿಗೆ ಏನು ಸಂದೇಶ ಕೊಡುತ್ತಿದ್ದಾರೆ. ಏನೇನು ಇಲ್ಲ. ಸರಕಾರದ ನಡವಳಿಕೆ ಏನು ಎಂದು ಜನರಿಗೆ ತಿಳಿಸಿರಿ. ಕಾಂಗ್ರೆಸ್ ಮತ್ತು ಬಿಜೆಪಿ ಸರಕು ಮುಗಿದಿದೆ. ನಿಮ್ಮ ಸರಕು ಏನೆಂದು ಜನತೆಗೆ ನೀವು ಈಗ ತಿಳಿಸಬೇಕು ಎಂದು ನೂತನ ಅಭ್ಯರ್ಥಿಗಳಿಗೆ ಹೆಚ್ ಡಿಕೆ ಅವರು ಪಾಠ ಮಾಡಿದರು.
ಇದೇ ವೇಳೆ ಪಂಚರತ್ನ ಯೋಜನೆಗಳ ವೆಬ್ ಸೈಟ್ www.pancharathnayojane.com ಗೆ ಚಾಲನೆ ನೀಡಿದರು. ಈ ವೆಬ್ ತಾಣದಲ್ಲಿ ಪಂಚರತ್ನ ರಥಯಾತ್ರೆ, ಯೋಜನೆಗಳ ಮಾಹಿತಿ ಇರುತ್ತದೆ. ಚಿತ್ರಗಳನ್ನು ಡೌನ್ ಲೋಡ್ ಮಾಡಿಕೊಳ್ಳುವ ಆಪ್ಷನ್ ಇರುತ್ತದೆ. ಇದರ ಜೊತೆಗೆ ಪಂಚರತ್ನ ರಥಯಾತ್ರೆಯಲ್ಲಿ ಸಾರ್ವಜನಿಕರು ಮಿಸ್ ಕಾಲ್ ನೀಡುವ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಆ ಸಂಖ್ಯೆ ಹೀಗಿದೆ; 8884984666.