ಮಾತು ಹದ್ದು ಮೀರುತ್ತಿದೆ ಎಂದು ಸಿದ್ದುಗೆ ಗುದ್ದು ನೀಡಿದ ದೇವೇಗೌಡರು
ಮೈಸೂರು, ಡಿಸೆಂಬರ್ 29 : "ರಾಜ್ಯದ ನೆಲ - ಜಲ ವಿಚಾರದಲ್ಲಿ ನಾನು ಪಕ್ಷಾತೀತ ನಾಯಕ. ಸಿದ್ದರಾಮಯ್ಯ ಪ್ರಜ್ಞೆ ಇಟ್ಟುಕೊಂಡು ನನ್ನ ಬಗ್ಗೆ ಮಾತನಾಡಲಿ" ಎಂದು ಮಾಜಿ ಪ್ರಧಾನಿ- ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿರುಗೇಟು ನೀಡಿದರು.
ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಈಗ ಕರ್ನಾಟಕದ ತುಂಬೆಲ್ಲಾ ಯಾತ್ರೆಗಳಲ್ಲಿ ಮಾತನಾಡುತ್ತಿರುವ ವಿಚಾರಗಳನ್ನು ಗಮನಿಸುತ್ತಿದ್ದೇನೆ. ನಾನು ಹೋರಾಟಕ್ಕೆ ನಿಂತರೆ ಇವರ ಬಂಡವಾಳವನ್ನು ಬಯಲು ಮಾಡುತ್ತೇನೆ ಎಂದು ದೇವೇಗೌಡರು ಹೇಳಿದರು.

ಕೃಷ್ಣಾ ನದಿಗೆ ಯೋಜನೆಗಳನ್ನು ರೂಪಿಸಿದವರು ಯಾರು? ದೆಹಲಿಗೆ ಹೋಗಿ ನೀರಾವರಿ ಯೋಜನೆಗಳನ್ನು ಜಾರಿ ಮಾಡಿದವರು ಯಾರು? ಸಿದ್ದರಾಮಯ್ಯನಾ- ದೇವೇಗೌಡರಾ? ಎಂದು ಪ್ರಶ್ನಿಸಿದರು. ಮುಖ್ಯಮಂತ್ರಿಗಳು ಡೋಂಗಿ ವ್ಯವಹಾರಗಳನ್ನು ಬಿಟ್ಟು ವಾಸ್ತವ ಮಾತನಾಡಲಿ. ಹೇಳಿಕೆ ನೀಡುವುದು ಸುಲಭ. ಆದರೆ ಅದನ್ನು ಅರಗಿಸಿಕೊಳ್ಳುವುದು ತುಂಬ ಕಷ್ಟ ಎಂದು ಕಿಡಿ ಕಾರಿದರು.
ನನ್ನ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರದು ಸೌಜನ್ಯದ ಭೇಟಿಯಷ್ಟೇ. ಹಾಸನದ ರೈಲು ಯೋಜನೆ ವಿಚಾರವಾಗಿ ನಾನು ಅವರನ್ನು ಭೇಟಿ ಮಾಡಿದೆ. ಅವರಿರುವ ಸ್ಥಳಕ್ಕೆ ನಾನೇ ಹೋಗಬೇಕಿತ್ತು. ಆದರೆ ವಯಸ್ಸಿನಲ್ಲಿ ದೊಡ್ಡವರು ಅನ್ನೋ ಕಾರಣಕ್ಕೆ ಅವರೇ ನಮ್ಮ ಮನೆಗೆ ಬಂದರು ಎಂದು ತಿಳಿಸಿದರು.
ಆ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು. ಚಿತ್ರನಟ ಸುದೀಪ್ ಜೆಡಿಎಸ್ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುದೀಪ್ ಅವರೊಂದಿಗೆ ಕುಮಾರಸ್ವಾಮಿ ಮಾತನಾಡಿದ್ದಾರೆ. ಆದರೆ ಅವರು ಏನು ನಿರ್ಧಾರ ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದರು.











Click it and Unblock the Notifications