ಅಮಿತ್ ಶಾ ಮಾರಿಗುಡಿ ಪೂಜಾರಿ: ಎಚ್.ವಿಶ್ವನಾಥ್
ಮೈಸೂರು, ಜ.4 : 'ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾರಿಗುಡಿ ದೇವಾಲಯದ ಪೂಜಾರಿ ಥರ ಕಾಣ್ತಾರೆ, ಅವರೊಬ್ಬ ಅರೆಹುಚ್ಚ, ಶಾ ಭಸ್ಮಾಸುರ ಅವತಾರ ಅವರಿಗೆ ಮುಳುವಾಗಲಿದೆ, ಕಾಂಗ್ರೆಸ್ ಮುಕ್ತ ಕರ್ನಾಟಕ ಸಾಧ್ಯವಿಲ್ಲದ ಮಾತು' ಹೀಗೆ ವ್ಯಂಗ್ಯವಾಡಿದವರು ಮಾಜಿ ಸಂಸದ ಎಚ್. ವಿಶ್ವನಾಥ್.
ಜನವರಿ 3 ರಂದು ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡುವಂತೆ ಕರೆ ನೀಡಿದ್ದರು. ಇದಕ್ಕೆ ಮೈಸೂರಿನಲ್ಲಿ ಖಾರವಾಗಿಯೇ ಪ್ರತಿಕ್ರಿಯಿಸಿರುವ ವಿಶ್ವನಾಥ್, ಶಾ ಅವರ ವೇಷಭೂಷಣ ಇಟ್ಟುಕೊಂಡು ಟೀಕೆ ಮಾಡಿದ್ದಾರೆ.[ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಅಮಿತ್ ಶಾ ಕರೆ]

ಕೇವಲ ಹೇಳಿಕೆಗಳಿಂದ ಏನೂ ಸಾಧ್ಯವಿಲ್ಲ. ಮೊದಲು ರಾಜ್ಯದ ಪರಿಸ್ಥಿತಿ ಅರಿತು ಮಾತನಾಡುವುದನ್ನು ಬಜೆಪಿಯವರು ಕಲಿತುಕೊಳ್ಳಬೇಕು. ಸಲ್ಲದ ಆರೋಪಗಳಿಂದ ಪ್ರಯೋಜನವಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.
ಸಿದ್ದರಾಮಯ್ಯ ಉತ್ತರ: ಇತ್ತ ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಮಿತ್ ಶಾ ಯಾವುದೋ ಭ್ರಮೆಯಲ್ಲಿ ಮಾತನಾಡುತ್ತಿದ್ದಾರೆ. ಅವರಿಂದ ಕರ್ನಾಟಕದ ಕಾಂಗ್ರೆಸ್ಸಿಗರು ಕಲಿಯಬೇಕಾದದ್ದು ಏನೂ ಇಲ್ಲ ಎಂದು ಹೇಳಿದರು.
ಚಿತ್ರಸಂತೆಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಅಮಿತ್ ಶಾ ತಾವು ಹೋದಲೆಲ್ಲಾ ದಿಗ್ವಿಜಯ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ಅಭಿವೃದ್ಧಿ ಪದದ ಅರ್ಥದ ಬಗ್ಗೆ ನಮಗೆ ಹೇಳಿಕೊಡಬೇಕಾಗಿಲ್ಲ. ಬಿಜೆಪಿಯವರು ರಾಜ್ಯದಲ್ಲಿ ಯಾಕೆ ಅಧಿಕಾರ ಕಳೆದುಕೊಂಡರು ಎಂಬ ಸಂಗತಿ ಎಲ್ಲರಿಗೂ ಗೊತ್ತೆ ಇದೆ ಎಂದು ಹೇಳಿದರು.[ಕಾಂಗ್ರೆಸ್ ಅಸ್ತಿತ್ವ ಸೂರ್ಯ, ಚಂದ್ರ ಇರುವವರೆಗೆ]
ರಾಜ್ಯದ ಬಿಜೆಪಿ ನಾಯಕರು ಶಕ್ತಿ ಕಳೆದುಕೊಂಡಿದ್ದಾರೆ. ಹೀಗಾಗಿ ಅವರ ಪಕ್ಷದ ರಾಷ್ಟ್ರೀಯ ನಾಯಕರನ್ನು ಕರೆಸಿ ಜನರ ಮೇಲೆ ಪ್ರಭಾವ ಬೀರುವ ಯತ್ನ ನಡೆಸುತ್ತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಏರುವ ಹಗಲುಗನಸು ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.












Click it and Unblock the Notifications