Breaking: ದಸರಾ ಉದ್ಘಾಟನೆಗಾಗಿ ಮೈಸೂರಿಗೆ ಆಗಮಿಸಿದ ಎಸ್.ಎಂ. ಕೃಷ್ಣರಿಗೆ ಅದ್ಧೂರಿ ಸ್ವಾಗತ
ಮೈಸೂರು, ಅಕ್ಟೋಬರ್ 6: ನಾಡಹಬ್ಬ ದಸರಾ ಹಿನ್ನಲೆ ಹಾಗೂ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆಗಾಗಿ ಆಗಮಿಸಿದ ಮಾಜಿ ಸಿಎಂ ಎಸ್.ಎಂ. ಕೃಷ್ಣರನ್ನು ಜಿಲ್ಲಾಡಳಿತದಿಂದ ಅದ್ಧೂರಿ ಸ್ವಾಗತ ನೀಡಲಾಯಿತು.
ನಗರದ ಮೈಸೂರು- ಬೆಂಗಳೂರು ಮುಖ್ಯರಸ್ತೆಯ ಕೊಲಂಬಿಯಾ ಏಷ್ಯಾ ಜಂಕ್ಷನ್ ಬಳಿ ಎಸ್.ಎಂ. ಕೃಷ್ಣ ಆಗಮಿಸಿದಾಗ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ಇತರ ಗಣ್ಯರು ಹೂಗುಚ್ಛ ನೀಡಿ, ಆತ್ಮೀಯವಾಗಿ ಸ್ವಾಗತಿಸಿದರು.
ಈ ಬಾರಿಯ ಮೈಸೂರು ದಸರಾ ಉದ್ಘಾಟಕರ ಸ್ವಾಗತದ ವೇಳೆ ಡೊಳ್ಳು ಕುಣಿತ, ಕಂಸಾಳೆ, ವೀರಭದ್ರ ಕುಣಿತದ ಕಲಾವಿದರ ತಂಡ ಮೆರಗು ನೀಡಿತು. ಈ ವೇಳೆ ಶಾಸಕ ಜಿ.ಟಿ. ದೇವೇಗೌಡ, ಎಲ್. ನಾಗೇಂದ್ರ, ಎಂಎಲ್ಸಿ ಎಚ್. ವಿಶ್ವನಾಥ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಮೇಯರ್ ಸುನಂದಾ ಪಾಲನೇತ್ರ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇದ್ದರು.

ಎಸ್.ಎಂ. ಕೃಷ್ಣ ಆಯ್ಕೆಯನ್ನು ಸ್ವಾಗತಿಸಿದ ಎಚ್. ವಿಶ್ವನಾಥ್
ವಿಶ್ವವಿಖ್ಯಾತ ಮೈಸೂರು ದಸರಾ ಗುರುವಾರ ಉದ್ಘಾಟನೆ ಆಗುತ್ತಿದೆ. ಮೈಸೂರು ಎಲ್ಲ ರೀತಿಯಲ್ಲೂ ಸಜ್ಜಾಗುತ್ತಿದ್ದು, ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣ ಉದ್ಘಾಟನೆ ಮಾಡುತ್ತಿದ್ದಾರೆ. ಈ ನಡುವೆ ದಸರಾ ಉದ್ಘಾಟನೆಗೆ ಮಾಜಿ ಸಿಎಂ ಎಸ್.ಎಂ. ಕೃಷ್ಣರನ್ನು ಆಯ್ಕೆ ಮಾಡಿರುವ ನಿರ್ಧಾರವನ್ನು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಸ್ವಾಗತಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಈ ಕುರಿತು ಮಾತನಾಡಿದ ಎಚ್. ವಿಶ್ವನಾಥ್, ದಸರಾಗೆ ಎಸ್.ಎಂ. ಕೃಷ್ಣರ ಆಯ್ಕೆ ಸ್ವಾಗತಾರ್ಹ. ಇವರ ಆಯ್ಕೆ ರಾಜಕೀಯ, ರಾಜಕಾರಣದ ಅಸ್ಪೃಶ್ಯತೆ ನಿವಾರಣೆಯಾಗಿದೆ. ಇದು ಅತ್ಯಂತ ಸಂತೋಷ ಹಾಗೂ ಹೆಮ್ಮೆಯ ಸಂಗತಿ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಎಸ್.ಟಿ. ಸೋಮಶೇಖರ್ಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಬಸವರಾಜ ಬೊಮ್ಮಾಯಿ ಸರ್ಕಾರ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ. ಸಾಂಸ್ಕೃತಿಕ ವ್ಯಕ್ತಿತ್ವದ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣ. ರಾಜಕಾರಣದ ಬಗ್ಗೆ ಇದ್ದ ತಾತ್ಸಾರ ಮನೋಭಾವ ದೂರ ಮಾಡುವ ನಿಟ್ಟಿನಲ್ಲಿ ಇದೊಂದು ಸೂಕ್ತ ತೀರ್ಮಾನ. ಇದುವರೆಗೂ ಸಾಹಿತಿ, ವಿಜ್ಞಾನಿಗಳು ಸೇರಿದಂತೆ ಹಲವು ಕ್ಷೇತ್ರದ ಗಣ್ಯರು ಉದ್ಘಾಟಿಸಿದ್ದರು. ರಾಜಕೀಯ ಕ್ಷೇತ್ರದ ಎಸ್.ಎಂ. ಕೃಷ್ಣ ಉದ್ಘಾಟಿಸುತ್ತಿರುವುದು ಸಂತಸ ತಂದಿದೆ. ಎಸ್.ಎಂ. ಕೃಷ್ಣ ಹಿರಿಯ ರಾಜಕಾರಣಿಗಳು, ಜನಾದೇಶ ಪಾಲಿಸಿ ಆಡಳಿತ ನಡೆಸಿದವರು ಎಂದು ಎಚ್. ವಿಶ್ವನಾಥ್ ತಿಳಿಸಿದರು.
ಎಸ್. ಎಂ. ಕೃಷ್ಷರವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸತತ ಮೂರು ವರ್ಷ ಬರಗಾಲ ಎದುರಾಯಿತು. ಡಾ. ರಾಜಕುಮಾರ್ರನ್ನು ವೀರಪ್ಪನ್ ಅಪಹರಿಸಿದ. ಮಾಜಿ ಸಚಿವ ನಾಗಪ್ಪನವರ ಹತ್ಯೆಯಾಯಿತು. ಇಂತಹ ಹಲವು ಸಮಸ್ಯೆಗಳ ನಡುವೆಯೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೃಷ್ಣ ಶ್ರಮಿಸಿದ್ದಾರೆ.

ಅವರ ಕಾಲದಲ್ಲಿ ಐಟಿ- ಬಿಟಿ ಕ್ಷೇತ್ರದಲ್ಲಿ ಬಹುದೊಡ್ಡ ಬೆಳವಣಿಗೆ ಆಯಿತು. ಅವರ ಆಡಳಿತಾವಧಿಯಲ್ಲಿ ಬೆಂಗಳೂರು ಜಾಗತೀಕವಾಗಿ ಗುರುತಿಸಿಕೊಳ್ಳುವಂತಾಯಿತು. ಶಿಸ್ತು ಸಂಯಮಕ್ಕೆ ಹೆಸರಾಗಿರುವ ಎಸ್.ಎಂ. ಕೃಷ್ಣರವರು ಈ ಬಾರಿಯ ದಸರಾ ಉದ್ಘಾಟಿಸುತ್ತಿರುವುದು ದಸರಾಕ್ಕಿರುವ ಮಹತ್ವದಷ್ಟೇ ಕೃಷ್ಣರವರ ಮಹತ್ವವನ್ನು ಸಾರುತ್ತಿದೆ. ಈಗಿನ ನೂತನ ಶಿಕ್ಷಣ ನೀತಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದಾಗಲೇ ಪ್ರಜಾಪ್ರಭುತ್ವೀಕರಣ ಮಾಡಿದ್ದರು ಎಂದು ಎಚ್. ವಿಶ್ವನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮೈಸೂರಲ್ಲಿ ಭರದ ಸಿದ್ಧತೆ
ಗುರುವಾರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಾಡದೇವತೆ ತಾಯಿ ಚಾಮುಂಡೇಶ್ವರಿ ದೇವಿಗೆ ಅಗ್ರ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡುವ ಮೂಲಕ 9 ದಿನಗಳ ಶರನ್ನವರಾತ್ರಿಯ ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ದಸರಾ ಮಹೋತ್ಸವಕ್ಕಾಗಿ ಮೈಸೂರಿನಲ್ಲಿ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದೆ. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮೈಸೂರು ಅರಮನೆಯಲ್ಲಿ ವೇದಿಕೆ ಅಣಿಯಾಗಿದ್ದು, ವಿದ್ಯುತ್ ದೀಪಲಂಕಾರದಿಂದ ಮೈಸೂರು ನಗರ ಝಗಮಗಿಸುತ್ತಿದೆ.
ಚಾಮುಂಡೇಶ್ವರಿ ದೇವಿಗೆ ಗುರುವಾರ ಬೆಳಿಗ್ಗೆ ಎಸ್.ಎಂ. ಕೃಷ್ಣರವರು ಅಗ್ರ ಪೂಜೆ ಸಲ್ಲಿಸುವರು. ಬಳಿಕ ಬೆಳಿಗ್ಗೆ 8.15 ರಿಂದ 8.45 ಗಂಟೆಯೊಳಗೆ ಸಲ್ಲುವ ಶುಭ ಲಗ್ನದಲ್ಲಿ ವೇದಿಕೆಯ ಬೆಳ್ಳಿ ರಥದಲ್ಲಿರುವ ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿಸುವ ಮೂಲಕ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಉದ್ಘಾಟನೆಗೊಳಿಸುವರು.












Click it and Unblock the Notifications