ಈ ಬಾರಿ ದಸರಾಕ್ಕೆ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಸೇವೆ ಲಭ್ಯವಿಲ್ಲ
ಮೈಸೂರು, ಸೆಪ್ಟೆಂಬರ್. 27 : ದೇಶ, ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ದೃಷ್ಟಿಯಿಂದ ಹಾಗೂ ಕರ್ನಾಟಕದ ಪುರಾತತ್ವ ಸ್ಮಾರಕಗಳ ಸಿರಿವಂತಿಕೆ ಹಾಗೂ ಅದರ ಐತಿಹ್ಯವನ್ನು ಅನುಭವಿಸುವಂತೆ ಮಾಡುವ ಉದ್ದೇಶದಿಂದ ಆರಂಭಿಸಿದ ದಕ್ಷಿಣ ಭಾರತದ ಪ್ರಪ್ರಥಮ ಹಾಗೂ ಏಕೈಕ ಸುಖವಿಲಾಸಿ ಎ' ದರ್ಜೆಯ ಪ್ರವಾಸಿ ರೈಲು ಸುವರ್ಣ ರಥ' (ಗೋಲ್ಡನ್ ಚಾರಿಯಟ್) ಈ ಬಾರಿ ದಸರಾ ಮಹೋತ್ಸವದ ಸಂದರ್ಭದಲ್ಲಿ ಸೇವೆಗೆ ಲಭ್ಯವಿಲ್ಲ.
ಸುವರ್ಣ ರಥ' ಕಳೆದ ತಿಂಗಳಿಂದ ದುರಸ್ತಿಯಲ್ಲಿದ್ದು, ಇದೀಗ ಅದರ ದುರಸ್ತಿ ಕಾರ್ಯ ಪೂರ್ಣಗೊಂಡಿದೆ. ಹೊರ ಮೈಗೆ ಬಣ್ಣ ಲೇಪನ ಹಾಗೂ ವಿನ್ಯಾಸ ಆರಂಭವಾಗಿದೆ. ಒಳಾವರಣ ಅಲಂಕಾರ ಪೂರ್ಣಗೊಂಡಿದ್ದರೂ ಇದು ಪೂರ್ಣಪ್ರಮಾಣದಲ್ಲಿ ಸಂಚಾರಕ್ಕೆ ಸಜ್ಜುಗೊಳ್ಳಲು ಕನಿಷ್ಠ 15 ದಿನದ ಅಗತ್ಯವಿದೆ.
ಸುವರ್ಣ ರಥ ದಸರಾ ಮುನ್ನವೇ ಸಿದ್ಧವಾದರೂ ಇದನ್ನು ದಸರಾ ಸಮಯದಲ್ಲಿ ಬಳಸಲು ಸಾಧ್ಯವಾಗುತ್ತಿಲ್ಲ. ಸುವರ್ಣ ರಥವನ್ನು ಕಳೆದ 10 ವರ್ಷದಿಂದ ನಿರ್ವಹಣೆ ಮಾಡುತ್ತಿದ್ದ ಟೆಂಡರ್ ದಾರರ ಅವಧಿ ಪೂರ್ಣಗೊಂಡಿದ್ದು, ಹೊಸದಾಗಿ ಟೆಂಡರ್ ಕರೆಯಲಾಗಿದೆ.

ಟೆಂಡರ್ ಪ್ರಕ್ರಿಯೆಗಳು ಮುಗಿದು, ಯಶಸ್ವಿ ಬಿಡ್ ದಾರರಿಗೆ ಅಕ್ಟೋಬರ್ 15ರೊಳಗೆ ಕಾರ್ಯಾದೇಶ ನೀಡಲಾಗುವುದು. ಆದರೆ ಅವರು ಇದರ ಮಾರ್ಕೆಟಿಂಗ್, ಇದಕ್ಕೆ ಅಗತ್ಯವಾದ ಸಿಬ್ಬಂದಿ ನೇಮಕ, ತರಬೇತಿ, ನಂತರ ಇದರ ಮುಂದುವರಿದ ಭಾಗವಾಗಿ ಇತರೆ ಸಂಸ್ಥೆಗಳೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳಬೇಕಾಗುತ್ತದೆ.
ಪೂರ್ವ ಸಿದ್ಧತೆಗಾಗಿ ಗುತ್ತಿಗೆದಾರರಿಗೆ ಕನಿಷ್ಠ 1- 2 ತಿಂಗಳ ಕಾಲಾವಕಾಶ ಅಗತ್ಯವಿದೆ. ಹೀಗಾಗಿ ನವೆಂಬರ್ ಅಂತ್ಯ ಇಲ್ಲವೇ ಡಿಸೆಂಬರ್ ನಿಂದ ಇದು ಸಂಚಾರಕ್ಕೆ ಸಿದ್ಧವಾಗಬಹುದು.
ಗಾಲಿಗಳ ಮೇಲಿನ ಸುವರ್ಣ ರಥ ಎಂದೇ ಕರೆಯುವ ಗೋಲ್ಡನ್ ಚಾರಿಯಟ್ ದಕ್ಷಿಣ ಸಕ್ರ್ಯೂಟ್ ನಲ್ಲಿ ಕರ್ನಾಟಕದ ಪ್ರಮುಖ ಪ್ರವಾಸಿ ಧಾಮಗಳನ್ನು ಸಂಪರ್ಕಿಸುತ್ತದೆ.
7 ರಾತ್ರಿಗಳ ಈ ಪ್ರವಾಸದಲ್ಲಿ ಮೈಸೂರು ಅರಮನೆ, ಸುತ್ತಮುತ್ತಲಿನ ಪ್ರವಾಸಿ ತಾಣಗಳು, ಕಬಿನಿ ಹಿನ್ನೀರಿನಲ್ಲಿ ಮೋಜು, ಅರಣ್ಯ ಸಫಾರಿ, ವಿಜಯನಗರ ವೈಭವವನ್ನು ಸಾರುವ ಹಂಪಿ, ಬೀಚ್ ಗಳ ಮನಮೋಹಕ ತಾಣ ಗೋವಾ ಭೇಟಿ ಇದ್ದು ಇದು ಪ್ರವಾಸವನ್ನು ಅವಿಸ್ಮರಣೀಯಗೊಳಿಸಲಿದೆ.
ನಾಡಹಬ್ಬ ದಸರಾ ಮಹೋತ್ಸವವನ್ನು ಪ್ರವಾಸೋದ್ಯಮದ ಬೆಳವಣಿಗೆಗೆ ಪೂರಕವಾಗಿ ಬಳಸಿಕೊಳ್ಳಲು ಮುಂದಾಗಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ (ಕೆಎಸ್ ಟಿಡಿಸಿ) ಕಳೆದ ವರ್ಷದ ದಸರಾ ಸಂದರ್ಭದಲ್ಲಿ 2 ಟ್ರಿಪ್ ಗೋಲ್ಡನ್ ಚಾರಿಯಟ್ (ಸುವರ್ಣ ರಥ) ಅನ್ನು ಪರಿಚಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications