ಬ್ಲ್ಯಾಕ್ ಮೇಲ್ ಗೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ, ಆರೋಪಿ ನಾಪತ್ತೆ
ತಂದೆ ಇಲ್ಲದ ಹೆಣ್ಣುಮಗಳು ಚೈತ್ರಾ, ಮೈಸೂರಿನ ಬನ್ನೂರಿನ ಸಮೀಪದ ತುರಗನೂರಿನವಳು. ಹಣಕ್ಕಾಗಿ ಪೀಡಿಸಿ, ಆಕೆಯ ತಾಯಿ ಮಾನ ಕಳೆಯುವುದಾಗಿ ಅದೇ ಊರಿನ ವ್ಯಕ್ತಿಯೊಬ್ಬ ಬೆದರಿಸಿದ್ದಾನೆ. ಬೇಸತ್ತ ಚೈತ್ರಾ ಆತ್ಮಹತ್ಯೆಗೆ ಶರಣಾಗಿದ್ದಾಳೆ
ಮೈಸೂರು, ಫೆಬ್ರವರಿ 24: ವ್ಯಕ್ತಿಯೊಬ್ಬ ಮಾಡುತ್ತಿದ್ದ ಬ್ಲ್ಯಾಕ್ ಮೇಲ್ ನಿಂದ ಬೇಸತ್ತ ವಿದ್ಯಾರ್ಥಿಯೊಬ್ಬಳು ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಬನ್ನೂರು ಸಮೀಪದ ತುರುಗನೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ದಿ.ಉಮೇಶ್ ಮತ್ತು ಮಮತಾ ದಂಪತಿ ಪುತ್ರಿ ಚೈತ್ರಾ (20) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ಚೈತ್ರಾ ಮಂಡ್ಯದ ಸರಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ಹಿಂದೆ ಬಿದ್ದಿದ್ದ ಅದೇ ಗ್ರಾಮದ ದಾಸಪ್ಪ ನಾಗರಾಜು ಎಂಬುವರ ಪುತ್ರ ಟ್ರ್ಯಾಕ್ಟರ್ ರವಿ ಆಗಾಗ ಕಿರುಕುಳ ನೀಡುತ್ತಿದ್ದ. ಆತನ ಕಿರುಕುಳ ಮೂರು ತಿಂಗಳಿನಿಂದ ನಿರಂತರವಾಗಿತ್ತು. ಚೈತ್ರಾ ಅದನ್ನು ಸಹಿಸಿಕೊಂಡಿದ್ದಳು.[ದುರಾಸೆಯಿಂದ ದರೋಡೆ ಮಾಡಿದ್ದ ಮೈಸೂರು ಹುಡುಗರು ಈಗ ಎಲ್ಲಿದಾರೆ?]

ಈ ಮಧ್ಯೆ ಆಕೆಯ ಕಾಲೇಜು ಬಳಿಗೆ ತೆರಳಿ, ನಿನ್ನ ತಾಯಿಯ ವಿಡಿಯೋ ನನ್ನ ಬಳಿಯಿದೆ. ಅದನ್ನು ವಾಟ್ಸಪ್, ಫೇಸ್ ಬುಕ್ ನಲ್ಲಿ ಹಾಕುವುದಾಗಿ ಬೆದರಿಸಿದ್ದ. ಅದನ್ನು ಹಾಕದಂತೆ ಇರಬೇಕಾದರೆ ನಿನ್ನ ಅಮ್ಮನಿಗೆ ಹೇಳಿ ಒಂದು ಲಕ್ಷ ರುಪಾಯಿ ಕೊಡಿಸು ಎಂದು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ದೂರಲಾಗಿದೆ.
ಇಷ್ಟಕ್ಕೆ ಸುಮ್ಮನಾಗದೆ ಫೆಬ್ರವರಿ 21ರಂದು ಕಾಲೇಜಿಗೆ ತೆರಳಿ, ಎಲ್ಲ ವಿದ್ಯಾರ್ಥಿಗಳಿಗೆ ನಿನ್ನ ನಡವಳಿಕೆ ಬಗ್ಗೆ ಹೇಳುವುದಾಗಿ ಬೆದರಿಸಿದ್ದ. ಇದೆಲ್ಲದರಿಂದ ನೊಂದ ಚೈತ್ರಾ, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.[ಚಾಮರಾಜನಗರದ ಬ್ರಹ್ಮ ರಥಕ್ಕೆ ಬೆಂಕಿ ಹಾಕಿದ ಆರೋಪಿ ಸೆರೆ]
ಈ ಸಂಬಂಧ ಆಕೆಯ ತಾಯಿ ಮಮತಾ ನೀಡಿದ ದೂರಿನ ಮೇರೆಗೆ ಬನ್ನೂರು ಪಿಎಸ್ ಐ ಲತೇಶಕುಮಾರ್, ಸರ್ಕಲ್ ಇನ್ ಸ್ಪೆಕ್ಟರ್ ಮನೋಜ್ ಕುಮಾರ್ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ತಲೆ ಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications