ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಗಾಂಜಾ –ಅಫೀಮು ದಂಧೆ ?
ನಾಡಿನ ಅದಿದೇವತೆ ಚಾಮುಂಡೇಶ್ವರಿ ತಾಯಿ ನೆಲೆಸಿರುವ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಅನೈತಿಕ ಚಟುವಟಿಕೆಗಳು ಶುರುವಾಗಿದ್ದು, ಗಾಂಜಾ ,ಮದ್ಯ ಸೇವನೆ ಅಡ್ಡೆಯಾಗಿ ಮಾರ್ಪಟ್ಟಿದೆ ಎಂಬ ಆರೋಪ ಕೇಳಿ ಬಂದಿದೆ.
ಧಾರ್ಮಿಕ ಕಾರ್ಯಕ್ರಮವೆಂದರೆ ಅಲ್ಲಿಗೆ ಬರುವವರು ಸಭ್ಯರೇ ಆಗಿರುತ್ತಾರೆ ಎಂಬದು ನಂಬಿಕೆ.
ಆದರೆ, ಅದಕ್ಕೆ ಅಪವಾದವೆಂಬಂತೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಮಠವೊಂದರಲ್ಲಿ ನಡೆಯುವ ತಿಂಗಳ ಕಾರ್ಯಕ್ರಮವನ್ನು ನೆಪವಾಗಿಸಿಕೊಂಡು ಗಾಂಜಾ, ಮದ್ಯ ಸೇವನೆಗೆಂದೇ ನೂರಾರು ಯುವಕರು ಬರುವ ವಿಚಾರ ಬೆಳಕಿಗೆ ಬಂದಿದೆ. ಅದೂ ಯುವಕನೊಬ್ಬನ ಹತ್ಯೆಯಾದ ನಂತರ..!
ಅದು ದತ್ತಾತ್ರೇಯ ಜ್ಞಾನಪೀಠ ಮಠ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಮಠಕ್ಕೆ ಶತಮಾನದ ಇತಿಹಾಸವಿದೆ. ಶೀ ನಂಜುಂಡ ಸ್ವಾಮಿ ಗುರುಗಳ ಸಮಾಧಿ ಇಲ್ಲಿದೆ. ಅವರ ನೆನಪಿಗಾಗಿ ಪ್ರತೀ ತಿಂಗಳು ಪೌರ್ಣಮಿಯ ದಿನದಂದು ಅಲ್ಲಿ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಇದು ಹಲವಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ.

ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಅವರ ನೂರಾರು ಅನುಯಾಯಿಗಳು ಮಠಕ್ಕೆ ಬರುತ್ತಾರೆ. ರಾತ್ರಿಯ ಅಡುಗೆ ಅಲ್ಲಿಯೇ ತಯಾರಾಗುತ್ತದೆ. ಅಲ್ಲಿಯೇ ಊಟ ಸೇವಿಸುವ ಅವರೆಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ವಾಪಸಾಗುತ್ತಾರೆ.
ರಾತ್ರಿ ವೇಳೆ ಅದೂ ಹೆಚ್ಚಿನ ಜನ ಸಂಚಾರ ವಿಲ್ಲದ ಸ್ಥಳದಲ್ಲಿ ಅನ್ನ ಸಂತರ್ಪಣೆಯಂತಹ ಕಾರ್ಯಕ್ರಮ ನಡೆಯುತ್ತದೆ ಎಂಬುದನ್ನು ತಿಳಿದ ಮದ್ಯ ಹಾಗೂ ಗಾಂಜಾ ಸೇವನೆಯ ಚಟಕ್ಕೆ ಬಿದ್ದ ಅನೇಕ ಯುವಕರು ಪೌರ್ಣಮಿಯ ದಿನದಂದು ಅಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ. ದಿನಗಳೆಂದತೆ ಅಂತಹ ವ್ಯಸನಿಗಳ ಆಗಮನದ ಸಂಖ್ಯೆ ಹೆಚ್ಚುತ್ತಲೇ ಇದೆ.
ಇದೀಗ ಗಾಂಜಾ ಸೇವನೆಯ ಕಾರಣದಿಂದಲೇ ಮತ್ತಿನಲ್ಲಿದ್ದ ಯುವಕರು ಬಡಿದಾಡಿಕೊಂಡು ಒಂದು ಕೊಲೆಯೂ ನಡೆದುಹೋಗಿದೆ. ಹೀಗಾಗಿ ಪೊಲೀಸರು ಅನಿವಾರ್ಯವಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕಿದೆ. ಘಟನೆಯಿಂದ ಎಚ್ಚೆತ್ತಿರುವ ಪೊಲೀಸರು ಮುಂದಿನ ಪೌರ್ಣಮಿಯಂದು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ಧರಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆಯಂತಹ ಕಾನೂನು ಬಾಹಿರ ಚಟುವಟಿಕೆಯನ್ನು ಹತ್ತಿಕ್ಕಲು ಪೊಲೀಸರು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ.
ಪೌರ್ಣಮಿಯ ದಿನದಂದು ಸಂಜೆ 7 ಗಂಟೆ ವೇಳೆಗೆಲ್ಲಾ ಮಠದ ಆವರಣದ ಸುತ್ತಮುತ್ತ ಜಮಾಯಿಸುವ ಅವರು ಮರಗಿಡಗಳ ಕೆಳಗೆ, ನಿರ್ಜನ ಪ್ರದೇಶ, ಬೆಟ್ಟದ ಬಂಡೆಗಳ ಮೇಲೆ ಕುಳಿತು ಗಾಂಜಾ ಹಾಗೂ ಮದ್ಯ ಸೇವನೆ ಮಾಡಲಾರಂಭಿಸುತ್ತಾರೆ. ಅಲ್ಲಿ ಗಾಂಜಾ ಸೇವನೆ ನಡೆಯುತ್ತದೆ ಎಂದು ತಿಳಿದ ಮೈಸೂರಿನ ಮಂಡಿ, ಉದಯಗಿರಿ, ಎನ್.ಆರ್.ಮೊಹಲ್ಲಾ ಭಾಗಗಳಿಂದ ಗಾಂಜಾ ಮಾರುವವರೂ ಅಲ್ಲಿಗೆ ಬರತೊಡಗಿದ್ದಾರೆ.
ಬಂದವರಿಗೆ ಸಾಕಷ್ಟು ಸಂಪಾದನೆ ಕೂಡ ಆಗುತ್ತಿದೆ ಎನ್ನಲಾಗಿದೆ. ಇದರಿಂದ ಬೆಟ್ಟದ ತಪ್ಪಲು ಭಂಗೀಮಠ ಅಂತಲೇ ಕುಖ್ಯಾತಿ ಪಡೆಯುತ್ತಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಪೊಲೀಸರು ಗೊತ್ತಿದ್ದೂ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.












Click it and Unblock the Notifications