ಮೈಸೂರು ಅತ್ಯಾಚಾರ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ
ಮೈಸೂರು, ಆಗಸ್ಟ್ 31: ಸಾಂಸ್ಕೃತಿಕ ನಗರಿ ಮೈಸೂರನ್ನೇ ಬೆಚ್ಚಿ ಬೀಳಿಸಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚುರುಕಿನ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿದ್ದರು. ಆದರೆ ಪೊಲೀಸ್ ತನಿಖೆ ವೇಳೆ ಎಸ್ಕೇಪ್ ಆಗಿದ್ದ ಇನ್ನಿಬ್ಬರಿಗಾಗಿ ಬಲೆ ಬೀಸಿದ್ದ ಖಾಕಿ ಪಡೆ, ತಮಿಳುನಾಡಿನಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ ಆರಕ್ಕೇರಿದ್ದು, ಇನ್ನೊಬ್ಬನಿಗಾಗಿ ತನಿಖೆ ಮುಂದುವರಿದಿದೆ.
ಆರೋಪಿಗಳೊಂದಿಗೆ ಸ್ಥಳ ಮಹಜರು
ಮೈಸೂರಿನಲ್ಲಿ ನಡೆದ ಎಂಬಿಎ ವಿಧ್ಯಾರ್ಥಿನಿ ಮೇಲಿನ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಬಂಧಿತ ಆರೋಪಿಗಳಿಂದ ವಿವಿಧ ಆಯಾಮಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಸೋಮವಾರ ಆರೋಪಿಗಳನ್ನು ಘಟನೆ ನಡೆದ ಸ್ಥಳಕ್ಕೆ ಕರೆತಂದಿದ್ದ ಪೊಲೀಸರು, ಸ್ಥಳ ಮಹಜರು ನಡೆಸುವ ಮೂಲಕ ಗ್ಯಾಂಗ್ ರೇಪ್ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಿದ್ದರು.

ಗಂಧದ ಮರ ಹುಡುಕಿ ಬಂದಿದ್ದರು
ಈ ನಡುವೆ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ನೀಚರು, ಘಟನೆ ನಡೆದ ಲಲಿತಾದ್ರಿಪುರದ ಚಾಮುಂಡಿ ಬೆಟ್ಟದ ತಪ್ಪಲಿಗೆ ಗಂಧದ ಮರ ಹುಡುಕಿಕೊಂಡು ಹೋಗಿದ್ದರು ಎಂಬುದು ಸ್ಥಳ ಮಹಜರು ಮಾಡುವ ವೇಳೆ ಗೊತ್ತಾಗಿದೆ. ಗಂಧದ ಮರಕ್ಕಾಗಿ ಗೂಡ್ಸ್ ಆಟೋದಲ್ಲಿ ಘಟನಾ ಸ್ಥಳಕ್ಕೆ ಹೋಗಿದ್ದ ಆರೋಪಿಗಳು, ಗಂಧದ ಮರ ಸಿಗದ ಕಾರಣ ಅಲ್ಲೇ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.
ಆದರೆ ನಿರ್ಜನ ಪ್ರದೇಶದಲ್ಲಿ ಕಿರಾತಕರು ಇರುವ ಬಗ್ಗೆ ಸುಳಿವೇ ಇಲ್ಲದ ಯುವಕ ಹಾಗೂ ಯುವತಿ, ಈ ವೇಳೆ ಅಲ್ಲಿಗೆ ಬಂದಿದ್ದಾರೆ. ಅಷ್ಟೊತ್ತಿಗೆ ಮದ್ಯದ ಅಮಲಿನಲ್ಲಿದ್ದ ಕಾಮುಕರು, ಮೊದಲಿಗೆ ಕಾಲೇಜು ಯುವಕ ಹಾಗೂ ಯುವತಿಯ ಬೆದರಿಸಿ ಹಣ ನೀಡುವಂತೆ ಪೀಡಿಸಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರ ಬಳಿ ಹಣ ಇಲ್ಲದಿದ್ದಾಗ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾದ ಕುರಿತು ಸ್ಥಳ ಮಹಜರು ವೇಳೆ ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನು ಕಳೆದ 2 ವರ್ಷದಲ್ಲಿ ಇದೇ ಗ್ಯಾಂಗ್ ಅನೇಕ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದೆ ಅನ್ನುವ ಮಾಹಿತಿ ಕೂಡ ಲಭ್ಯವಾಗಿದೆ. ಅನೇಕ ಪ್ರಕರಣದಲ್ಲಿ ಸಂತ್ರಸ್ತರು ಮರ್ಯಾದೆಗೆ ಅಂಜಿ ದೂರು ಕೊಡುತ್ತಿರಲಿಲ್ಲ. ಆದರೆ ಈ ಬಾರಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ.
ಈ ನಡುವೆ ಕಳೆದ ವಾರ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಶನಿವಾರ ಐವರನ್ನು ಖಾಕಿ ಪಡೆ ಬಂಧಿಸಿತ್ತು. ಸೋಮವಾರ ಸ್ಪಾಟ್ ಮಹಜರು ಕೂಡ ನಡೆಸಲಾಗಿತ್ತು. ಸಿಕ್ಕಾಪಟ್ಟೆ ಗ್ರಿಲ್ ನಡೆಸಿರುವ ಪೊಲೀಸರು ಮಹತ್ವದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ದರೋಡೆಯೇ ಕಾಯಕ!
ದುಡ್ಡು ಕೊಡದಿದ್ದರೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಕೂಲಿ ಕೆಲಸಕ್ಕೆ ಮೈಸೂರಿಗೆ ಬರುತ್ತಿದ್ದ ಆರೋಪಿಗಳು ನಿರ್ಜನ ಪ್ರದೇಶದಲ್ಲಿ ಪಾರ್ಟಿ ಮಾಡಿ ದರೋಡೆ ನಡೆಸುತ್ತಿದ್ದರು. ರಿಂಗ್ ರೋಡ್ನಲ್ಲಿ ಸಿಕ್ಕ ಸಿಕ್ಕದನ್ನು ದೋಚುತ್ತಿದ್ದರು. ಪ್ರಮುಖವಾಗಿ ಜೋಡಿ ಹಾಗೂ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದರು. ದುಡ್ಡಿಗಾಗಿ ಡಿಮ್ಯಾಂಡ್ ಮಾಡ್ತಿದ್ರು, ಹಣ ಕೊಡದಿದ್ದಾಗ ಲೈಂಗಿಕ ಕಿರುಕುಳ ನೀಡುತ್ತಿದ್ದರು ಎಂದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ.
'ಚಟ'ಚೋರರು ಆಗಂತುಕರು!
ಅಪರಾಧ ಚಟುವಟಿಕೆ ನಡೆಸಿದ ನಂತರ ಮೂರ್ನಾಲ್ಕು ವಾರ ಮೈಸೂರು ಕಡೆಗೆ ಕಾಮುಕರು ತಲೆ ಹಾಕುತ್ತಿರಲಿಲ್ಲ. ಕೂಲಿಗಾಗಿ ಬರುತ್ತಿದ್ದವರು ಅಪರಾಧ ಚಟುವಟಿಕೆ ನಡೆಸಿ ಸಂಪಾದಿಸಿದ ಹಣದಲ್ಲಿ ಮೋಜು- ಮಸ್ತಿ ಮಾಡುತ್ತಿದ್ದರು. ಲಗಾಮು ಇಲ್ಲದೇ ಆಟ ಆಡುತ್ತಿದ್ದ ಕಾಮುಕರು ಈಗ ಖಾಕಿ ಖೆಡ್ಡಾಗೆ ಬಿದ್ದಿದ್ದಾರೆ.
Recommended Video













Click it and Unblock the Notifications